ತಮಗೇ ಬಹುಮತ ಖಚಿತ ಅಂತಾವೆ ಪಕ್ಷಗಳೆಲ್ಲವು!
ಈ ಚುನಾವಣೆಯ ಫಲಿತಾಂಶ ಮುಂಬರುವ ಲೋಕಸಭೆ ಚುನಾವಣೆಯ ಮೇಲೂ ಪ್ರಭಾವ, ಪರಿಣಾಮ ಬೀರುವ ಸಾಧ್ಯತೆಯಿರುವುದರಿಂದ ಇಡೀ ದೇಶದ ಕಣ್ಣು ಕರ್ನಾಟಕ ಚುನಾವಣೆ ಫಲಿತಾಂಶದ ಮೇಲೆ ನೆಟ್ಟಿದೆ. ಮೇ 8ರಂದು 8 ಗಂಟೆಗೆ ಮತಎಣಿಕೆ ಆರಂಭವಾಗುತ್ತಿದ್ದಂತೆ ಒಂದೊಂದೇ ಪಕ್ಷದ ಬಂಡವಾಳವನ್ನು ಮತಪ್ರಭು ಬಯಲು ಮಾಡಲಿದ್ದಾನೆ. ಈ ಎಲ್ಲ ವಿವರಗಳಿಗೆ ಒನ್ಇಂಡಿಯಾ ಕನ್ನಡ ನೋಡುತ್ತಿರಿ.
ನಿರೀಕ್ಷೆಯಂತೆ ಎಲ್ಲ ಪಕ್ಷಗಳು ತಮ್ಮ ಪಕ್ಷವೇ ಬಹುಮತ ಪಡೆಯಲಿದೆ ಎಂದು ಎದೆಯುಬ್ಬಿಸಿ ಹೇಳುತ್ತಿವೆ. ಅನೇಕ ಚುನಾವಣಾ ಸಮೀಕ್ಷೆಗಳು ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಲಭಿಸಲಿದೆ ಎಂಬ ವರದಿಯನ್ನು ನೀಡಿದ್ದರೂ, ಬಿಜೆಪಿ, ಜೆಡಿಎಸ್, ಕೆಜೆಪಿ ಪಕ್ಷಗಳು ಆ ಸಮೀಕ್ಷೆಗಳ ವರದಿಗಳನ್ನು ಕಸದಬುಟ್ಟಿಗೆ ಎಸೆದಿವೆ. ಸಮೀಕ್ಷೆ ವರದಿಗಳೆಲ್ಲ ಹೇಳುತ್ತಿರುವುದು ಸುಳ್ಳು, ಮೇ 8ರಂದು ಏನಾಗುತ್ತೋ ನೋಡಿರಿ ಎಂದು ಹೇಳುತ್ತಿದ್ದಾರೆ.
ಅಚ್ಚರಿಯ ಸಂಗತಿಯೆಂದರೆ, ಒನ್ಇಂಡಿಯಾ ಕನ್ನಡದಲ್ಲಿ ಈ ಸಮೀಕ್ಷೆ ಕುರಿತಂತೆ ಕೇಳಲಾದ ಪ್ರಶ್ನೆಗೆ ಕೂಡ ಓದುಗರು ಇದೇ ಬಗೆಯ ಉತ್ತರ ನೀಡಿದ್ದಾರೆ. ಶೇ. 28ರಷ್ಟು ನೆಟ್ಟಿಗರು ಸಮೀಕ್ಷೆಯನ್ನು ನಂಬಲು ಸಾಧ್ಯವಿಲ್ಲ ಎಂದು ಹೇಳಿದರೆ, ಶೇ.23ರಷ್ಟು ಓದುಗರು ಸಮೀಕ್ಷೆ ಸರಿ ಎಂದು ಹೇಳಿದ್ದರೆ, ಶೇ.49ರಷ್ಟು ನೆಟ್ಟಿಗರು ಮೇ 8ರವರೆಗೆ ಕಾದು ನೋಡೋಣ ಎಂಬ ಉತ್ತರ ನೀಡಿದ್ದಾರೆ.
ಈ ಎಲ್ಲ ಸಮೀಕ್ಷೆಗಳ ಮೇಲೆ ಅಪಾರ ಭರವಸೆ ಇಟ್ಟಿರುವ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರು, "ಕರ್ನಾಟಕದ ಜನತೆ ಸಮ್ಮಿಶ್ರ ಸರಕಾರದ ಹಣಬರಹ ಏನೆಂಬುದನ್ನು ಕೆಲ ವರ್ಷಗಳಿಂದ ನೋಡಿದ್ದಾರೆ. ಅವರಿಗೆ ಸಮರ್ಥವಾದ, ಸ್ಥಿರವಾಗಿರುವ ಏಕಪಕ್ಷದ ಸರಕಾರ ಬೇಕಾಗಿದೆ. ಕಾಂಗ್ರೆಸ್ ಈ ಬಾರಿ ಜಯಭೇರಿ ಬಾರಿಸಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ಸಿಗೆ 113ರ ಸಂಖ್ಯೆ ಒಲಿಯುವುದಾ? ಸಾಧ್ಯವೇ ಇಲ್ಲ ಅನ್ನುತ್ತಿದ್ದಾರೆ ಇತರ ಪಕ್ಷಗಳ ನಾಯಕರು. ಈಗ ನಡೆಸಲಾಗಿರುವ ಎಲ್ಲ ಚುನಾವಣಾ ಸಮೀಕ್ಷೆಗಳು ಬೋಗಸ್ ಎಂದು ಷರಾ ಬರೆದಿದ್ದಾರೆ. ಜೆಡಿಎಸ್ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಯಾವ ಪಕ್ಷಕ್ಕೂ ಬಹುಮತ ಬರಲು ಸಾಧ್ಯವೇ ಇಲ್ಲ. ಮುಂದೆ ಏನಿದ್ದರೂ ಸಮ್ಮಿಶ್ರ ಸರಕಾರವೇ ಆಡಳಿತ ನಡೆಸಲಿದೆ ಎಂದು ಖಚಿತವಾಗಿ ಹೇಳಿದ್ದಾರೆ.
ಯಡಿಯೂರಪ್ಪ ಮತ್ತು ಅವರ ಅನೇಕ ಹಿಂಬಾಲಕರು ಪಕ್ಷ ತೊರೆದಿರುವುದರಿಂದ ಕಳಂಕರಹಿತವಾಗಿದೆ ಎಂದು ನುಡಿದಿರುವ ಬಿಜೆಪಿ ಪಕ್ಷದ ನಾಯಕರು, ಮತದಾರರು ಮತ್ತೆ ಭಾರತೀಯ ಜನತಾ ಪಕ್ಷವನ್ನೇ ಆರಿಸಿ ತರಲಿದ್ದಾರೆ ಎಂದು ವಿಶ್ವಾಸದಿಂದ ನುಡಿದಿದ್ದಾರೆ. ಸಮೀಕ್ಷೆ ವರದಿ ಸುಳ್ಳೆಂಬುದು ಮೇ 8ರಂದು ಸಾಬೀತಾಗಲಿದೆ ಎಂದು ಮುಖ್ಯಮಂತ್ರಿ, ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ನುಡಿದಿದ್ದಾರೆ. ಕೆಜೆಪಿಗೆ ಏಳೆಂಟು ಸೀಟುಗಳು ದಕ್ಕಿದರೆ ಹೆಚ್ಚು ಎಂದು ಸಮೀಕ್ಷೆ ಹೇಳಿದ್ದರೂ ಯಡಿಯೂರಪ್ಪ ತಮಗೇ ಬಹುಮತ ಲಭಿಸಲಿದೆ ಎಂದು ವಿಕ್ಟರಿ ಸಿಂಬಲ್ ಎತ್ತಿಹಿಡಿದಿದ್ದಾರೆ.
2004ರ ಚುನಾವಣೆಯ ನಂತರ ಸಮ್ಮಿಶ್ರ ಸರಕಾರಗಳೇ ರಾಜ್ಯದಲ್ಲಿ ರಾಜ್ಯಭಾರ ನಡೆಸಿವೆ. 2004ರಲ್ಲಿ ಚುನಾವಣೆ ನಡೆದ ನಂತರ ಕಾಂಗ್ರೆಸ್-ಜೆಡಿಎಸ್ ಸರಕಾರ ಮತ್ತು ಜೆಡಿಎಸ್-ಬಿಜೆಪಿ ಸರಕಾರಗಳು ಹೆಚ್ಚು ದಿನ ಬಾಳಲಿಲ್ಲ. ಮುಂದೆ 2008ರಲ್ಲಿ ನಡೆದ ಚುನಾವಣೆಯಲ್ಲಿ ಬಹುಮತ ಪಡೆದು ಬಿಜೆಪಿ ಇತಿಹಾಸ ನಿರ್ಮಿಸಿತು. ನಂತರ ಅನೇಕ ಹಗರಣಗಳಲ್ಲಿ ಭಾಗಿಯಾಗಿ ಬಿಜೆಪಿ ಇತಿಹಾಸದ ಪುಟಗಳನ್ನೂ ಸೇರಿದೆ. ಮೇ 8ರಂದು ಏನಾಗಲಿದೆ? ಕಾದು ನೋಡಿ.