ಕರ್ನಾಟಕದ ಚುನಾವಣೆಯಲ್ಲಿನ ಹಣ, ಹೆಂಡದ ಲೆಕ್ಕ
ಶಾಂತಿಯುತ ಚುನಾವಣೆ ನಂತರ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಚುನಾವಣಾ ಆಯೋಗದ ಉಪ ಚುನಾವಣಾ ಆಯುಕ್ತ ಅಶೋಕ್ ಶುಕ್ಲಾ, ಶಾಂತಿಯುತವಾಗಿ ಮತದಾನ ಮಾಡಿರುವುದಕ್ಕೆ ಜನರಿಗೆ ಅಭಿನಂದನೆ ಸಲ್ಲಿಸಿದರು. ಇದೇ ವೇಳೆ ಕರ್ನಾಟಕ ಚುನಾವಣೆಯ ಸಂದರ್ಭದಲ್ಲಿ ವಶಪಡಿಸಿಕೊಳ್ಳಲಾದ ಹಣ ಮತ್ತು ಹೆಂಡದ ಮಾಹಿತಿ ನೀಡಿದರು.
ಒಟ್ಟು ಹಣ : ಮತದಾರರಿಗೆ ಹಂಚಲು ಸಾಗಿಸುತ್ತಿದ್ದ 21 ಕೋಟಿಗೂ ಹೆಚ್ಚು ಹಣವನ್ನು ರಾಜ್ಯಾದ್ಯಂತ ವಶಪಡಿಸಿಕೊಳ್ಳಲಾಗಿದೆ ಎಂದು ಶುಕ್ಲಾ ತಿಳಿಸಿದರು. ಮತದಾನದ ದಿನವೂ 1 ಲಕ್ಷ ರೂ.ಗೂ ಹೆಚ್ಚಿನ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಹರಿಯಿತು ಹೆಂಡದ ಹೊಳೆ : ಚುನಾವಣಾ ಆಯೋಗ ಮತ್ತು ಪೊಲೀಸರ ಜಂಟಿ ಕಾರ್ಯಚರಣೆಯಲ್ಲಿ 11 ಲಕ್ಷ ಲೀಟರ್ ಮಧ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಇದರ ಮೌಲ್ಯ ಸುಮಾರು 7.79 ಕೋಟಿ ಇರಬಹುದು ಎಂದು ಅಂದಾಜಿಸಲಾಗಿದೆ.
ಪೇಯ್ಡ್ ನ್ಯೂಸ್ : ಮಾಧ್ಯಮಗಳಲ್ಲಿ ವಿವಿಧ ಪಕ್ಷಗಳು ಮತ್ತು ಅಭ್ಯರ್ಥಿಗಳ ಪರವಾಗಿ ಬರುವ ವರದಿಗಳ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿತ್ತು. ಕಾಸಿಗಾಗಿ ಸುದ್ದಿ (ಪೇಯ್ಡ್ ನ್ಯೂಸ್) ಗೆ ಸಂಬಂಧಿಸಿದಂತೆ 76 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
ಇವುಗಳಲ್ಲಿ 42 ಪ್ರಕರಣಗಳಲ್ಲಿ ಹಣ ನೀಡಿ ಸುದ್ದಿ ಮಾಧ್ಯಮಗಳಲ್ಲಿ ಬರುವಂತೆ ಮಾಡಲಾಗಿತ್ತು ಎಂದು ಆಯೋಗ ತೀರ್ಮಾನಿಸಿದೆ. 76 ಪ್ರಕರಣಗಳಲ್ಲಿ ಇದುವರೆಗೂ 61 ನೋಟಿಸ್ಗಳನ್ನು ಜಾರಿಗೊಳಿಸಿ ವಿವರಣೆ ಕೇಳಲಾಗಿದೆ ಎಂದು ಹೇಳಿದರು.
ದಕ್ಷಿಣ ಕನ್ನಡ ಪ್ರಥಮ : ಕಾಸಿಗಾಗಿ ಸುದ್ದಿ ಪ್ರಕರಣಗಳು ದಾಖಲಾಗಿರುವುದರಲ್ಲಿ ದಕ್ಷಿಣ ಕನ್ನಡ ಮೊದಲ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ 11 ಪ್ರಕರಣಗಳು ದಾಖಲಾಗಿವೆ ಎಂದು ಅವರು ಹೇಳಿದರು.
ಚುನಾವಣಾ ಆಯೋಗ ಮತ್ತು ಪೊಲೀಸರ ಹದ್ದಿನ ಕಣ್ಣಿನ ನಡುವೆಯೇ ಕೆಲವು ಪಕ್ಷಗಳು ಹಣ, ಹೆಂಡಗಳನ್ನು ಹಂಚಿವೆ. ಇದನ್ನು ಪಡೆದ ಜನರು ಮತದಾನ ಮಾಡಿದ್ದಾರೆ. ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ. ಹಣ ಮತ್ತು ಹೆಂಡದ ಪರಿಣಾಮವೇನು ಎಂದು ಬುಧವಾರ ತಿಳಿದು ಬರಲಿದೆ.