ಎಂಪಿಎಂ ಅನುದಾನ : ಕಾಗೇರಿ, ಜ್ಞಾನೇಂದ್ರ ವಿರುದ್ಧ ದೂರು
ಶುಕ್ರವಾರ ಶಿವಮೂರ್ತಿ ಎಂಬುವವರು ಲೋಕಾಯುಕ್ತ ನ್ಯಾಯಾಲಯಕ್ಕೆ ದೂರು ನೀಡಿದ್ದು, ಆರಗ ಜ್ಞಾನೇಂದ್ರ ಎಂಪಿಎಂ ಅಧ್ಯಕ್ಷರಾಗುವ ಮುನ್ನ ಸಂಸ್ಥೆ 32 ಕೋಟಿ ರೂ.ಗಳ ನಷ್ಟದಲ್ಲಿತ್ತು. ಅವರು ಅಧ್ಯಕ್ಷ ಪದವಿ ವಹಿಸಿಕೊಂಡು ರಾಜೀನಾಮೆ ನೀಡಿದಾಗ ಸಂಸ್ಥೆ 300 ಕೋಟಿ ರೂ.ನಷ್ಟದಲ್ಲಿದೆ.
ಕರ್ನಾಟಕ ಸರ್ಕಾರ ಸಂಸ್ಥೆಯ ಅಭಿವೃದ್ಧಿಗಾಗಿ 100 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿತ್ತು. ವಿವಿಧ ಯಂತ್ರೋಪಕರಣಗಳ ಖರೀದಿಗೆ 30 ಕೋಟಿ ಬಿಡುಗಡೆ ಆಗಿತ್ತು. ಜ್ಞಾನೇಂದ್ರ ಈ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ಪುಸ್ತಕ ಖರೀದಿಸಿಲ್ಲ : ರಾಜ್ಯಪಾಲರ ಸೂಚನೆಯಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಎಂಪಿಎಂನಿಂದ ನೋಟ್ ಬುಕ್ ಗಳನ್ನು ಖರೀದಿಸಬೇಕು. 2010ರಲ್ಲಿ 9 ಕೋಟಿ ರೂ.ಮೌಲ್ಯದ ಪುಸ್ತಕಗಳನ್ನು ಖರೀದಿಸಲಾಗಿತ್ತು.
ಆದರೆ ಸದ್ಯ, ಪುಣೆ ಮೂಲದ ಖಾಸಗಿ ಕಂಪನಿಯಿಂದ ಹೆಚ್ಚಿನ ಹಣ ನೀಡಿ ನೋಟ್ ಬುಕ್ ಖರೀದಿಸಲಾಗುತ್ತಿದೆ. ಎಂಪಿಎಂನಿಂದ ಏಕೆ? ಖರೀದಿಸುತ್ತಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ವಿರುದ್ಧ ತನಿಖೆ ನಡೆಯಬೇಕು ಎಂದು ದೂರುದಾರರು ಮನವಿ ಮಾಡಿದ್ದಾರೆ.
ದೂರುದಾರರು ಎಂಪಿಎಂ ಆಡಳಿತ ನಿರ್ದೇಶಕರು, ಹಿಂದಿನ ನಿರ್ದೇಶಕರಾದ ಅನಿಲ್ ಕುಮಾರ್, ಯೋಗೇಂದ್ರ ಕುಮಾರ್, ಸುಧೀರ್ ಕಾಮತ್ ಸೇರಿದಂತೆ ಹತ್ತು ಮಂದಿಯ ವಿರುದ್ದ ತನಿಖೆ ನಡೆಸಬೇಕು ಎಂದು ಕೋರಿದ್ದಾರೆ.
ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಆರಗ ಜ್ಞಾನೇಂದ್ರ ಚುನಾವಣೆಗೆ ಸ್ಪರ್ಧಿಸಿರುವುದರಿಂದ ಪ್ರತಿಪಕ್ಷಗಳು ಈ ದೂರು ಕೊಡಿಸಿವೆ ಎಂದು ಶಿವಮೊಗ್ಗ ಬಿಜೆಪಿ ಘಟಕ ಆರೋಪಿಸಿದೆ.
ಕಾಂಗ್ರೆಸ್ ಕೈವಾಡ : ತೀರ್ಥಹಳ್ಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಆರಗ ಜ್ಞಾನೇಂದ್ರ, ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಕಿಮ್ಮನೆ ರತ್ನಾಕರ್ ಚುನಾವಣೆ ಸಮಯದಲ್ಲಿ ತಮ್ಮ ಹೆಸರು ಹಾಳು ಮಾಡಲು ಇಂತಹ ದೂರು ಕೊಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ