ಮತದಾನಕ್ಕೆ ಕ್ಷಣಗಣನೆ ಬಹಿರಂಗ ಪ್ರಚಾರ ಮುಕ್ತಾಯ
ಅಭ್ಯರ್ಥಿ ಹಾಗೂ ಮತದಾರರಲ್ಲದವರು ಇಂದು ಸಂಜೆಯಿಂದ ಕ್ಷೇತ್ರದಲ್ಲಿ ವಾಸ್ತವ್ಯ ಹೂಡುವಂತಿಲ್ಲ ಎಂದು ಆಯೋಗ ಈಗಾಗಲೇ ಸೂಚಿಸಿದೆ. ಎರಡು ದಿನಗಳಲ್ಲಿ ಚುನಾವಣಾ ಅಕ್ರಮ ನಡೆಯುವ ಸಾಧ್ಯತೆ ಇರುವುದರಿಂದ ಚುನಾವಣಾ ಆಯೋಗ ಅಭ್ಯರ್ಥಿಗಳ ಮನೆ ಪ್ರಚಾರದ ವಿಡಿಯೋ ಚಿತ್ರೀಕರಣ ನಡೆಸಲಿದೆ.
ಕೊನೆ ಕ್ಷಣದವರೆಗೂ ಪಾದಯಾತ್ರೆ, ರೋಡ್ ಶೋ ಮೂಲಕ ಪಕ್ಷದ ನಾಯಕರು ಮತ ಯಾಚಿಸಿದರು. ಇಂದು ಸ್ಟಾರ್ ಪ್ರಚಾರಕರು ಮತ ನೀಡುವಂತೆ ಜನರಿಗೆ ಮನವಿ ಮಾಡಿದರು. ಮಲ್ಲೇಶ್ವರಂ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ.ಶಿವರಾಂ ಪರವಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್, ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಮತಯಾಚನೆ ಮಾಡಿದರು.
47 ಲಕ್ಷ ವಶ : ಕೆ.ಆರ್.ಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬೈರತಿ ಬಸವರಾಜ್ ಅವರ ಕಾರಿನಲ್ಲಿ ದಾಖಲೆಯಿಲ್ಲದೆ ಸಾಗಿಸುತ್ತಿದ್ದ 47 ಪಕ್ಷ ರೂ. ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಾರಿನ ಚಾಲಕ ಮತ್ತು ಬೈರತಿ ಬಸವರಾಜ್ ಅವರ ಆಪ್ತ ಸಹಾಯಕನನ್ನು ಪೊಲೀಸರು ಬಂಧಿಸಿದ್ದಾರೆ.
ಬಿಎಸ್ಆರ್ ಅಭ್ಯರ್ಥಿ ನಾಪತ್ತೆ : ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪೈರೋಜ್ ಪಾಷ ಶುಕ್ರವಾರ ಬೆಳಗ್ಗೆಯಿಂದ ನಾಪತ್ತೆಯಾಗಿದ್ದಾರೆ. ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು, ಪೈರೋಜ್ ಅವರನ್ನು ಅಪಹರಣ ಮಾಡಲಾಗಿದೆ ಎಂದು ಕಾರ್ಯಕರ್ತರು ಪೊಲೀಸರಿಗೆ ದೂರು ನೀಡಿದ್ದಾರೆ.
ಜಿ.ಟಿ.ದೇವೆಗೌಡ ಮನೆ ಮೇಲೆ ದಾಳಿ : ಮೈಸೂರು ಜಿಲ್ಲೆ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡ ಅವರ ಮನೆಯ ಮೇಲೆ ಚುನಾವಣಾಧಿಕಾರಿಗಳು ಮತ್ತು ಪೊಲೀಸರು ದಾಳಿ ನಡೆಸಿದ್ದಾರೆ. ದೇವೇಗೌಡರ ನಿವಾಸದಲ್ಲಿ ಅಕ್ರಮವಾಗಿ ಹಣ ಸಂಗ್ರಹಿಸಲಾಗಿದೆ ಎಂಬ ಆರೋಪದ ಮೇಲೆ ದಾಳಿ ನಡೆಸಲಾಗಿದೆ. ಆದರೆ, ಯಾವುದೇ ಹಣ ಪತ್ತೆಯಾಗಿಲ್ಲ.
ಸಂಗಮೇಶ್ ಮನೆ ಮೇಲೆ ದಾಳಿ : ಭದ್ರಾವತಿ ಕ್ಷೇತ್ರದ ಪಕ್ಷೇತರ ಶಾಸಕ ಬಿ.ಕೆ.ಸಂಗಮೇಶ್ ಮನೆಯ ಮೇಲೆ ಚುನಾವಣಾಧಿಕಾರಿಗಳು ದಾಳಿ ನಡೆಸಿದ್ದಾರೆ. ಮತದಾರರಿಗೆ ಹಂಚಲು ಅಕ್ರಮವಾಗಿ ಹಣ ಸಂಗ್ರಹಿಸಿದ್ದರು ಎಂಬ ಆರೋಪದ ಹಿನ್ನಲೆಯಲ್ಲಿ ಈ ದಾಳಿ ನಡೆಸಲಾಗಿದೆ.
ಬಸ್ ಗಳ ಕೊರತೆ ಉಂಟಾಗಬಹುದು : ರಾಜ್ಯವ್ಯಾಪಿ ಚುನಾವಣಾ ಕಾರ್ಯಕ್ಕಾಗಿ ಕೆಎಸ್ಆರ್ ಟಿಯ 3200 ಮತ್ತು ಬಿಎಂಟಿಸಿಯ 3200 ಬಸ್ ಗಳನ್ನು ಬಳಸಿಕೊಳ್ಳಲಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಸಂಚರಿಸಲು ಬಸ್ ಗಳ ಕೊರತೆ ಉಂಟಾಗಲಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ. ಶನಿವಾರ ಬೆಳಗ್ಗೆಯಿಂದಲೇ ಬಸ್ ಗಳು ಚುನಾವಣಾ ಕಾರ್ಯಕ್ಕೆ ತೆರಳಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಇಲಾಖೆ ಮನವಿ ಮಾಡಿದೆ.