ಕನ್ನಡ ನಾಡಿನಲ್ಲಿ ಇಂಥವರು ಹುಟ್ಟಬಾರದು : ಬಿಎಸ್ವೈ
ಸೋಮವಾರ ಹಾವೇರಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಚುನಾವಣಾ ಪ್ರಚಾರ ಮಾಡಿದ ಯಡಿಯೂರಪ್ಪ ತಮ್ಮ ಮಾಜಿ ಬೆಂಬಲಿಗರ ವಿರುದ್ಧ ಆಕ್ರೋಶ ಭರಿತರಾಗಿ ವಾಗ್ದಾಳಿ ನಡೆಸಿದರು. ಬಸವರಾಜ್ ಬೊಮ್ಮಾಯಿ ಅವರಿಗೆ ಕೆಜೆಪಿ ಸೇರುವಂತೆ "ಕಾಲು ಹಿಡಿದು ಬೇಡಿಕೊಂಡೆ" ಆದರೂ ಅವರು ಭರಲಿಲ್ಲ ಎಂದು ಹೇಳಿದರು.
ಇಂದು ಬರುತ್ತೇನೆ ನಾಳೆ ಬರುತ್ತೇನೆ ಎಂದು ನಿರಾಣಿ ಮತ್ತು ಬಸವರಾಜ ಬೊಮ್ಮಾಯಿ ಸಿ.ಎಂ.ಉದಾಸಿ ಮತ್ತು ನನ್ನ ದಾರಿ ತಪ್ಪಿಸಿದರು. "ನಂಬಿಕೆ ದ್ರೋಹ ಮಾಡುವಂತಹ ಇಂಥವರು ಪುಣ್ಯಕೋಟಿಯ ಈ ನಾಡಿನಲ್ಲಿ ಹುಟ್ಟಲೇಬಾರದು" ಎಂದು ಅವರು ವಾಗ್ದಾಳಿ ನಡೆಸಿದರು.
ನನ್ನನ್ನು ತಡೆದರು : ನಿಮಗೆ ಬಿಜೆಪಿ ಅಧ್ಯಕ್ಷ ಸ್ಥಾನ ಕೊಡಿಸುತ್ತೇನೆ ಪಕ್ಷದಲ್ಲೇ ಇರಿ ಎಂದು ಬೊಮ್ಮಾಯಿ ನಾನು ಕೆಜೆಪಿ ಸ್ಥಾಪಿಸುವುದನ್ನು ತಡೆದರು. ನಂತರ ನನ್ನ ವಿರುದ್ಧವೇ ಕೇಂದ್ರ ನಾಯಕರಿಗೆ ದೂರು ಹೇಳಿ ಅಧ್ಯಕ್ಷ ಪಟ್ಟ ಸಿಗದಂತೆ ನೋಡಿಕೊಂಡರು ಎಂದು ಯಡಿಯೂರಪ್ಪ ಆರೋಪಿಸಿದರು.
ತಂದೆಯೂ ಕ್ಷಮಿಸುತ್ತಿರಲಿಲ್ಲ : ಬಸವರಾಜ್ ಬೊಮ್ಮಾಯಿ ಅವರ ಕುತಂತ್ರ ರಾಜಕಾರಣವನ್ನು ಅವರ ತಂದೆ ಎಸ್.ಆರ್.ಬೊಮ್ಮಾಯಿ ಸಹ ಕ್ಷಮಿಸುತ್ತಿರಲಿಲ್ಲ. ಅಧಿಕಾರದಲ್ಲಿ ಮುಂದುವರೆಯಲು ಅಂತಹ ಕುತಂತ್ರ ರಾಜಕಾರಣವನ್ನು ಬೊಮ್ಮಾಯಿ ಮಾಡಿದ್ದಾರೆ ಎಂದು ದೂರಿದರು.
ಬೀದಿಯಲ್ಲಿದ್ದವರನ್ನು ಸಿಎಂ ಮಾಡಿದೆ : ಸಿರಗುಪ್ಪದಲ್ಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಿರುದ್ಧ ವಾಗ್ದಾಳಿ ನಡೆಸಿದ ಯಡಿಯೂರಪ್ಪ "ಬೀದಿಯಲ್ಲಿದ್ದ ಜಗದೀಶ್ ಶೆಟ್ಟರ್ ಅವರನ್ನು ಕರೆತಂದು ಮುಖ್ಯಮಂತ್ರಿ ಮಾಡಿದೆ." ಆದರೆ, ಇಂದು ಅವರು ನಾನು ಯಾರು ಎಂಬುದನ್ನು ಮರೆತು ಆರೋಪ ಮಾಡುತ್ತಿದ್ದಾರೆ ಎಂದು ಆಕ್ರೋಶ ಭರಿತರಾಗಿ ನುಡಿದರು.
ಮೋದಿ ಪ್ರಭಾವ ಬೀರಲ್ಲ : ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಭಾಷಣ ಬಿಜೆಪಿಗೆ ಮತ ತಂದು ಕೊಡುವುದಿಲ್ಲ. ಮೋದಿ ಅವರ ಭಾಷಣ ಕೇಳಲು ಜನರು ಬಂದಿದ್ದರು. ಅವರು ಬಿಜೆಪಿಗೆ ಮತ ಹಾಕುವುದಿಲ್ಲ. ಬಿಜೆಪಿ 30 ಸ್ಥಾನಗಳನ್ನು ಪಡೆಯುವುದಿಲ್ಲ ಎಂದು ಯಡಿಯೂರಪ್ಪ ಭವಿಷ್ಯ ನುಡಿದರು.
ಯಡಿಯೂರಪ್ಪ ಬಗ್ಗೆ ಗೌರವವಿದೆ : ಯಡಿಯೂರಪ್ಪ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವ ಬಸವರಾಜ ಬೊಮ್ಮಾಯಿ ಯಡಿಯೂರಪ್ಪ ಬಗ್ಗೆ ನನಗೆ ಅಪಾರವಾದ ಗೌರವವಿದೆ. ಅವರು ನನಗಿಂತ ಹಿರಿಯರು. ರಾಜಕೀಯದಲ್ಲಿ ಯಾರು ಶತ್ರುಗಳಾಗಿ ಮುಂದುವರೆಯಲು ಸಾಧ್ಯವಿಲ್ಲ. ಅವರ ಕೋಪ ಏನೆಂದು ನನಗೆ ತಿಳಿದಿದೆ ಎಂದು ಹೇಳಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ