ಸಿಖ್ ನರಮೇಧ : ಸಜ್ಜನ್ ಕುಮಾರ್ ಖುಲಾಸೆ
ಮಂಗಳವಾರ ಪ್ರಕರಣದ ವಿಚಾರಣೆ ನಡೆಸಿದ ದೆಹಲಿಯ ಕರ್ಕರ್ ಡೂಮ ನ್ಯಾಯಾಲಯ, 1984ರ ಸಿಖ್ ನರಮೇಧದ ಪ್ರಕರಣದಲ್ಲಿ ಸಜ್ಜನ್ ಕುಮಾರ್ ಅವರ ಪಾತ್ರವಿಲ್ಲ ಎಂದು ಅಭಿಪ್ರಾಯಪಟ್ಟು, ಅವರನ್ನು ದೋಷಮುಕ್ತ ಎಂದು ತೀರ್ಪು ನೀಡಿತು.
ಸಜ್ಜನ್ ಕುಮಾರ್ ದೋಷ ಮುಕ್ತರೆಂಬ ತೀರ್ಪು ಪ್ರಕಟವಾಗುತ್ತಿದ್ದಂತೆ ಸಿಖ್ ಧರ್ಮೀಯರ ಆಕ್ರೋಶ ಸ್ಪೋಟಗೊಂಡಿದೆ. ನ್ಯಾಯಾಲಯದ ಹೊರಗಡೆ ಅಪಾರ ಪ್ರಮಾಣದಲ್ಲಿ ನೆರೆದಿದ್ದ ಸಿಖ್ಖರು, ತೀರ್ಪಿನ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ಸಿಖ್ಖರ ಧಾರ್ಮಿಕ ಭಾವನೆಗೆ ಧಕ್ಕೆ ತಂದ, ಸಜ್ಜನ್ ಕುಮಾರ್ ಅವರನ್ನು ಶಿಕ್ಷಿಸಬೇಕು, ಬಿಡುಗಡೆ ಮಾಡಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದಾರೆ. ನ್ಯಾಯಾಧೀಶರ ವಿರುದ್ದವೂ ಘೋಷಣೆಗಳನ್ನು ಕೂಗುತ್ತಿದ್ದು, ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಹರಸಾಹಸ ಪಡುತ್ತಿದ್ದಾರೆ.
ನ್ಯಾಯಾಧೀಶರ ಮೇಲೆ ಶೂ ಎಸೆತ : ತೀರ್ಪಿನಿಂದ ಕೆರಳಿದ ಸಿಖ್ ಸಮುದಾಯದ ವ್ಯಕ್ತಿಯೊಬ್ಬ ನ್ಯಾಯಾಲಯ ಆವರಣದಲ್ಲಿಯೇ ನ್ಯಾಯಧೀಶರ ಮೇಲೆ ಶೂ ಎಸೆದಿದ್ದಾನೆ. ತಕ್ಷಣ ಆತನನ್ನು ಪೊಲೀಸರು ಬಂಧಿಸಿದ್ದು, ಶೂ ಎಸೆದ ವ್ಯಕ್ತಿ ಕರ್ನೈಲ್ ಸಿಂಗ್ ಎಂದು ತಿಳಿದು ಬಂದಿದೆ.
ನ್ಯಾಯಾಲಯದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಸಿಆರ್ ಪಿಎಫ್ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ನ್ಯಾಯಾಲಯದ ಆವರಣ ರಣರಂಗವಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ಪ್ರಕರಣವೇನು : 1984ರಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆಯ ನಂತರ ನಡೆದಿದ್ದ ಸಿಖ್ ನರಮೇಧ ಪ್ರಕರಣದಲ್ಲಿ, ಕಾಂಗ್ರೆಸ್ ಹಿರಿಯ ಮುಖಂಡ ಸಜ್ಜನ್ ಕುಮಾರ್ ಅವರು ಪ್ರಮುಖ ಆರೋಪಿಯಾಗಿದ್ದರು.
ಸಜ್ಜನ್ ಕುಮಾರ್ ಅವರು ದೆಹಲಿಯ ಕಂಟೋನ್ಮೆಂಟ್ ಬಳಿ ಸಿಖ್ ಧರ್ಮೀಯರ ಮೇಲೆ ತಮ್ಮ ಬೆಂಬಲಿಗರಿಂದ ದಾಳಿ ನಡೆಸಿದ್ದರು ಎಂದು ಆರೋಪಿಸಲಾಗಿತ್ತು. ಅಲ್ಲದೆ ಹಿಂಸಾಚಾರಕ್ಕೆ ಬೆಂಬಲ ನೀಡಿದ್ದರೂ ಎಂದು ಅವರ ವಿರುದ್ಧ 2 ಪ್ರಕರಣಗಳನ್ನು ದಾಖಲಿಸಲಾಗಿತ್ತು.
ನ್ಯಾಯಮೂರ್ತಿ ನಾನಾವತಿ ಆಯೋಗದ ಶಿಫಾರಸ್ಸಿನ ಆಧಾರದ ಮೇಲೆ ಸಜ್ಜನ್ ಕುಮಾರ್ ವಿರುದ್ಧ 2005ರಲ್ಲಿ ಮೊಕದ್ದಮೆ ದಾಖಲಾಗಿತ್ತು. ಅಲ್ಲದೆ ಸಿಬಿಐ 2010 ಜನವರಿಯಲ್ಲಿ ಕುಮಾರ್ ವಿರುದ್ಧ 2 ಚಾರ್ಜ್ಶೀಟ್ಗಳನ್ನು ಸಲ್ಲಿಸಿತ್ತು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ