ಅಭ್ಯರ್ಥಿಗಳು ಮತದಾರರು ಎಂದರೆ ಹೀಗಿರಬೇಕು!
ಗುಲಬರ್ಗ, ಏ. 30 : ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕ್ಷೇತ್ರಗಳಲ್ಲಿ ಚುನಾವಣೆಯನ್ನು ಎದುರಿಸುವ ಹುಮ್ಮಸ್ಸಿನಲ್ಲಿ ಅಭ್ಯರ್ಥಿಗಳು ಹುಮ್ಮಸ್ಸಿನಿಂದ ಪ್ರಚಾರ ನಡೆಸುತ್ತಿದ್ದಾರೆ. ಹಲವೆಡೆ ಹಣ, ಮದ್ಯ, ವಾಚು, ಟಿವಿ, ಸೀರೆ ಮುಂತಾದವುಗಳ ಆಮಿಷ ಒಡ್ಡುವ ಮುಖಾಂತರ ಜನರನ್ನು ಆಕರ್ಷಿಸಲು ಯತ್ನಿಸುತ್ತಿದ್ದಾರೆ.
ರಾಜ್ಯದಲ್ಲಿ ಚುನಾವಣಾ ಅಕ್ರಮ ಎಗ್ಗಿಲ್ಲದಂತೆ ಸಾಗಿದೆ. ಮಂಗಳವಾರ ಶಿವಮೊಗ್ಗದಲ್ಲಿ ಬಿಜೆಪಿ ಪರ ಸ್ಪರ್ಧಿಸಿರುವ ಈಶ್ವರಪ್ಪ ಅವರಿಗೆ ಸೇರಲಾಗಿದೆ ಎನ್ನಲಾದ ಹೆಲಿಕಾಪ್ಟರಿನಲ್ಲಿ 61 ಸಾವಿರ ರು. ನಗದು ದೊರೆತಿದೆ. ಇಲ್ಲಿಯವರೆಗೆ 12 ಕೋಟಿ ರು.ಗೂ ಹೆಚ್ಚು ನಗದು, ವಸ್ತುಗಳನ್ನು ಚುನಾವಣಾ ಆಯೋಗ ವಶಪಡಿಸಿಕೊಂಡಿದೆ.
ಹಲವಾರು ಕಡೆ ಕೊಡುವವರು ಮತ್ತು ಇಸಿದುಕೊಳ್ಳುವವರೇ ತುಂಬಿರುವಾಗ, ಗುಲಬರ್ಗ ಗ್ರಾಮೀಣ ವಿಧಾನಸಭೆ ಕ್ಷೇತ್ರ ವಿಭಿನ್ನವಾಗಿ ಕಾಣುತ್ತದೆ. ವಿಧಾನಸಭೆ ಕ್ಷೇತ್ರದ ಕಮಲಾಪುರದಲ್ಲಿ ಏ.28ರಂದು ನಡೆದ ಸಮಾರಂಭ, ಎಗ್ಗಿಲ್ಲದೆ ನಡೆಯುತ್ತಿರುವ ಚುನಾವಣಾ ಭ್ರಷ್ಟಾಚಾರವನ್ನು ಅಣಕಿಸುವಂತಿದೆ.
ಕಣದಲ್ಲಿರುವ ಸ್ಪರ್ಧಾಳುಗಳು ತಾವು ಯಾವುದೇ ಕಾರಣಕ್ಕೂ ಮತದಾರರಿಗೆ ಆಮಿಷ ಒಡ್ಡುವುದಿಲ್ಲ, ಹಣ ನೀಡಿ ಮತ ಕೊಳ್ಳುವುದಿಲ್ಲ ಎಂದು ಪ್ರಮಾಣವಚನ ಸ್ವೀಕರಿಸಿದರೆ, ಮತದಾರರು ಕೂಡ ತಾವು ಏನೇ ಬರಲಿ ತಮ್ಮ ಅಮೂಲ್ಯ ಮತಗಳನ್ನು ಹಣದ ದುರಾಸೆಗಾಗಿ ಮಾರಾಟ ಮಾಡುವುದಿಲ್ಲ ಎಂದು ಪ್ರಮಾಣ ಮಾಡಿದ್ದಾರೆ.
'ಸಂವಾದ' ನಡೆಸಿದ ಈ ಕಾರ್ಯಕ್ರಮದ ರೂವಾರಿ ಡಾ. ನೀರಜ್ ಪಾಟೀಲ. ಇವರು ಇಂಗ್ಲೆಂಡಿನ ಲ್ಯಾಂಬೆತ್ ಪ್ರಾಂತ್ಯದ ಮೇಯರ್ ಆಗಿದ್ದರು, ಈಗ ಕೌನ್ಸಿಲರ್ ಆಗಿದ್ದಾರೆ. ಹಾಗೆಯೆ, ಲಂಡನ್ನಿನ ಥೇಮ್ಸ್ ನದಿಯ ದಡದ ಮೇಲೆ ಜಗಜ್ಯೋತಿ ಬಸವಣ್ಣನ ಪ್ರತಿಮೆಯನ್ನು ಸ್ಥಾಪಿಸುವ ತಂಡದ ನೇತೃತ್ವ ವಹಿಸಿದ್ದಾರೆ.
ನೀರಜ್ ಅವರು ಲ್ಯಾಂಬೆತ್ನಲ್ಲಿ ಎದುರಿಸಿದ ಚುನಾವಣೆಯ ಅನುಭವವನ್ನು ಹಂಚಿಕೊಂಡರು. ಅಲ್ಲಿ ಮೂರು ಸಲ ಕೌನ್ಸಿಲರ್ ಆಗಿ ಆಯ್ಕೆಯಾದಾಗಲೂ ಒಂದೇ ಒಂದು ಪೈಸೆಯನ್ನು ಅಕ್ರಮವಾಗಿ ವ್ಯಯಮಾಡಿಲ್ಲ. ಯುನೈಟೆಡ್ ಕಿಂಗ್ಡಂನಲ್ಲಿ ಇದು ಸಾಧ್ಯವಾಗಬೇಕಾದರೆ ಭಾರತದಲ್ಲಿ ಏಕೆ ಸಾಧ್ಯವಿಲ್ಲ ಎಂದು ಜನರನ್ನು ಪ್ರಶ್ನಿಸಿದರು. ಜನರು ಕೂಡ ನೀರಜ್ ಅವರ ಮಾತಿಗೆ ತಲೆದೂಗಿ ಭ್ರಷ್ಟಾಚಾರಕ್ಕೆ ಅವಕಾಶ ನೀಡದಿರಲು ಪ್ರತಿಜ್ಞೆ ಸ್ವೀಕರಿಸಿದರು. [ಗುಲಬರ್ಗ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿಗಳು]
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ