ಸ್ವಯಂ-ಸುಪಾರಿ ಕೊಡುತ್ತಿರುವ ಕಾಂಗ್ರೆಸ್ಸಿಗರು
ಯಾಕೆ ಹೀಗೆ ಎಂದು ಕೇಳುವುದಕ್ಕೆ ಮುಂಚೆ ಇದಕ್ಕೆ ಕಾರಣಕರ್ತರು ಯಾರು ಅಂತ ನೋಡಿದರೆ ಪಕ್ಷದ ಘಟಾನುಘಟಿ, ಹಿರಿಯ ನಾಯಕರೇ ಎದುರಿಗೆ ಕಾಣಸಿಗುತ್ತಾರೆ. ಅದರಲ್ಲೂ ಒಬ್ಬ ಕೃಷ್ಣ ಅವರು ನೀಡಿರುವ ಪೆಟ್ಟೇ ಸಾಕು, ಕಾಂಗ್ರೆಸ್ಸಿಗೆ ಭಾರಿ ಹೊಡೆತ ನೀಡಲು.
ಚುನಾವಣೆಗೂ ಮುನ್ನವೇ ತಮ್ಮ 'ಕೈ'ಚಳಕ ತೋರಗೊಡುತ್ತಿದ್ದ ಕೃಷ್ಣ ಸಾಹೇಬರು ಆನಂತರ, ಚುನಾವಣೆ ಹೊಸ್ತಿಲಲ್ಲಿ ಅರಳುಮರಳು ಎಂಬಂತೆ ಮೇಲಿಂದ ಮೇಲೆ ಪಕ್ಷಕ್ಕೆ ಡ್ಯಾಮೇಜ್ ಆಗುವ ಹೇಳಿಕೆಗಳನ್ನೇ ನೀಡುತ್ತಾ ಬರುತ್ತಿದ್ದಾರೆ. ಇದು ಪಕ್ಷದ ಕಾರ್ಯಕರ್ತರನ್ನು ಅಧೀರನ್ನಾಗಿಸಿದೆ.
ಇನ್ನು ಕೆಲವು ನಾಯಕರು ನಾನಾ ಲೆಕ್ಕಾಚಾರಗಳ ಬಳಿಕ, ತಮ್ಮದೇ ಪಕ್ಷದ ಅಭ್ಯರ್ಥಿಗಳ ಸೋಲಿಗೆ ಸುಪಾರಿ ನೀಡಿರುವುದು/ಪಡೆದಿರುವುದು ಸುಳ್ಳಲ್ಲ.
ಈ ಮಧ್ಯೆ, ಕೇಂದ್ರ ಕೈಗಾರಿಕಾ ಸಚಿವ ಕೆಎಚ್ ಮುನಿಯಪ್ಪ ಅವರದು ವಿಚಿತ್ರ ಪರಿಸ್ಥಿತಿ. ದಶಕಗಳ ಕಾಲದ ತಮ್ಮ ಅಖಂಡ ನಿಷ್ಠೆಯನ್ನು ಪಕ್ಷದ ಪಾದ ತಲದಲ್ಲಿಟ್ಟು, ಪಕ್ಷಕ್ಕಾಗಿ ನಾನೂ ದುಡಿದಿದ್ದೇನೆ. ನನ್ನ ಮಗಳಿಗೂ ಟಿಕೆಟ್ ಕೊಡಿ ಎಂದು ತಮ್ಮ ಪುತ್ರಿ ರೂಪಾ ಶಶಿಧರ್ ಅವರ ಪರವಾಗಿ ಮೇಡಂ ಸೋನಿಯಾರ ಮುಂದೆ ಟಿಕೆಟಿಗೆ ಬೇಡಿಕೆಯಿಟ್ಟಿದ್ದರು.
ಆದರೆ ಮಗಳನ್ನು ಕೆಜಿಎಫ್ ಕ್ಷೇತ್ರದ ಶಾಸಕಿಯನ್ನಾಗಿಸಲು ಶ್ರಮಿಸುತ್ತಿದ್ದ ಸಚಿವ ಮುನಿಯಪ್ಪಗೆ ಟಾಂಗ್ ಕೊಟ್ಟ ಕಾಂಗ್ರೆಸ್ ಯಾಕೋ ರೂಪಾಗೆ ಟಿಕೆಟ್ ನೀಡದೆ ವಿ ಶಂಕರ್ ಅವರನ್ನು ಕಣಕ್ಕಿಳಿಸಿಬಿಟ್ಟಿತು. ಇದೇ ವೇಳೆ ಮುನಿಯಪ್ಪ ಅವರಷ್ಟೇ ಅಖಂಡ ನಿಷ್ಠೆ ಹೊಂದಿದ್ದ ಧರಂ ಸಿಂಗ್, ಖರ್ಗೆ ಪುತ್ರರಿಗೆ ಟಿಕೆಟ್ ನೀಡಿದ್ದು ಮುನಿಯಪ್ಪ ಅವರನ್ನು ಮತ್ತಷ್ಟು ನಿರಾಶೆಗೊಳಿಸಿತ್ತು.
ಇದರಿಂದ ಬೇಸತ್ತ ಮುನಿಯಪ್ಪ ಈಗ ಮಗಳಿಗೆ ಟಿಕೆಟ್ ಸಿಗದ ಬೇಸರದಲ್ಲಿ ಶಂಕರ್ ಪರ ಪ್ರಚಾರವನ್ನೇ ನಡೆಸುತ್ತಿಲ್ಲವಂತೆ. ಸ್ವತಂ ಶಂಕರ್ ಅವರೇ ಈ ಬಗ್ಗೆ ಸೋನಿಯಾ ಮೇಡಂಗೆ ದಿಢೀರ್ ಫ್ಯಾಕ್ಸ್ ಮಾಡಿ, ಮುನಿಯಪ್ಪಾ ಪ್ರಚಾರಕ್ಕೆ ಬರುತ್ತಿಲ್ಲ ಎಂದು ಅಲವತ್ತುಕೊಂಡಿದ್ದಾರೆ. ಜತೆಗೆ ಮುನಿಯಪ್ಪ ಕಾಂಗ್ರೆಸ್ ಅಭ್ಯರ್ಥಿಗೆ ಮಾರಕವಾಗಿರುವುದೇ ಅಲ್ಲದೆ ಜೆಡಿಎಸ್ ಅಭ್ಯರ್ಥಿಯ ಗೆಲುವುಗೇ ಒಳಗೊಳಗೇ ಸಂಚು ರೂಪಿಸಿದ್ದಾರೆ ಎಂಬುದು ಶಂಕರ್ ಅಳಲು.
ಸತತವಾಗಿ 6 ಬಾರಿ ಕೋಲಾರದಿಂದ ಸಂಸದರಾಗಿ ಆಯ್ಕೆಯಾಗಿ, ಕಾಂಗ್ರೆಸ್ಸಿನಲ್ಲಿ ತಳವೂರಿರುವ 65 ವರ್ಷದ ಕೆಎಚ್ ಮುನಿಯಪ್ಪ ಅವರಿಗೆ ಹೀಗಾಬಾರದಿತ್ತು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ