ಸರಬ್ಜಿತ್ ಸಿಂಗ್ ಸ್ಥಿತಿ ಮತ್ತಷ್ಟು ಗಂಭೀರ
ಸೋಮವಾರ ಸರಬ್ಜಿತ್ ಸಿಂಗ್ ದೇಹಸ್ಥಿತಿ ಮತ್ತಷ್ಟು ವಿಷಮಿಸಿದ್ದು, "ನನ್ನ ಪತಿಗೆ ಇಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಕೂಡಲೇ ಅವರನ್ನು ಭಾರತಕ್ಕೆ ಕಳುಹಿಸಿಕೊಡಬೇಕು'' ಎಂದು ಸರಬ್ಜಿತ್ ಪತ್ನಿ ಸುಖ್ಪ್ರೀತ್ ಕೌರ್, ಪಾಕ್ ಸರಕಾರಕ್ಕೆ ಮನವಿ ಮಾಡಿದ್ದಾರೆ. ಆದರೆ, ಪಾಕ್ ಇದುವರೆಗೂ ಯಾವುದೇ ಪ್ರತಿಕ್ರಿಯ ನೀಡಿಲ್ಲ.
ಸರಬ್ಜಿತ್ ದೇಹಸ್ಥಿತಿ ಚಿಂತಾಜನಕವಾಗಿದ್ದು, ಬದುಕುಳಿಯುವ ಸಾಧ್ಯತೆ ಕ್ಷೀಣಿಸಿವೆ ಪಾಕ್ ಮಾಧ್ಯಮಗಳು ವರದಿ ಮಾಡುತ್ತಿವೆ. ಆಸ್ಪತ್ರೆಯ ವೈದ್ಯರು ಸರಬ್ಜಿತ್ ಪ್ರಜ್ಞಾವಸ್ಥೆಗೆ ಮರಳಿದರೆ ಶಸ್ತ್ರ ಚಿಕಿತ್ಸೆ ಮಾಡುವುದಾಗಿ ಹೇಳಿದ್ದಾರೆ.
ಸಿಂಗ್ ತಲೆಗೆ ಭಾರಿ ಹೊಡೆತ ಬಿದ್ದಿರುವ ಕಾರಣ ಮೆದುಳಿನ ನರನಾಡಿಗಳಲ್ಲಿ ರಕ್ತ ಹೆಪ್ಪುಗಟ್ಟಿದೆ. ಕೂಡಲೇ ಶಸ್ತ್ರಚಿಕಿತ್ಸೆಯ ಅವಶ್ಯಕತೆಯಿದೆ. ಆದರೆ ಪ್ರಜ್ಞಾವಸ್ಥೆಗೆ ಬರದೆ ಚಿಕಿತ್ಸೆ ನಡೆಸಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ಪಾಕ್ಗೆ ಸಿಂಗ್ ಮಕ್ಕಳಾದ ಸ್ವಪನ್ ದೀಪ್ ಹಾಗೂ ಪೂನಮ್ ಮತ್ತು ಸಹೋದರಿ ದಲ್ಬೀರ್ ಕೌರ್ ತೆರಳಿದ್ದಾರೆ. ಇವರಿಗೆ 15 ದಿನಗಳ ಕಾಲ ಪಾಕ್ ನಲ್ಲಿರುವ ಅವಕಾಶ ನೀಡಲಾಗಿದೆ. ಆಸ್ಪತ್ರೆಯಲ್ಲಿ ಇವರಿಗೆ ಉಳಿದುಕೊಳ್ಳಲು ಕೊಠಡಿಯೊಂದನ್ನು ವ್ಯವಸ್ಥೆ ಮಾಡಲಾಗಿದೆ.
ಭಾರತ ಮನವಿ : ಕುಟುಂಬದ ಸದಸ್ಯರಿಗೆ ಸರಬ್ಜಿತ್ ಅವರನ್ನು ನೋಡಲು ಅವಕಾಶ ನೀಡುವಂತೆ ಭಾರತದ ರಾಯಭಾರಿ ಕಚೇರಿ ಪಾಕ್ ಸರ್ಕಾರಕ್ಕೆ ಮನವಿ ಮಾಡಿದೆ. ಆದರೆ, ಒಬ್ಬರು ಕುಟುಂಬ ಸದಸ್ಯರಿಗೆ ಮಾತ್ರ ಭೇಟಿಗೆ ಆಸ್ಪತ್ರೆಯ ವೈದ್ಯರು ಅವಕಾಶ ನೀಡಿದ್ದಾರೆ.
ಕೊಲೆ ಮಾಡಲು ಯತ್ನ : ಬಾಂಬ್ ಸಿಡಿಸಿ ಪಾಕಿಸ್ತಾನಿಗಳ ಸಾವಿಗೆ ಕಾರಣನಾಗಿದ್ದ ಸರಬ್ಜಿತ್ನನ್ನು ಕೊಲ್ಲಬೇಕು ಎಂದು ನಾವು ಪ್ರಯತ್ನ ಪಟ್ಟಿದ್ದೇವು ಎಂದು ಸರಬ್ಜಿತ್ ಮೇಲೆ ಹಲ್ಲೆಮಾಡಿದ ಪ್ರಕರಣದ ಪ್ರಮುಖ ಆರೋಪಿಗಳಾದ ಅಮರ್ ಅಫ್ತಾಬ್ ಹಾಗೂ ಮುದಾಸ್ಸಾರ್ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ.
ಸರಬ್ಜಿತ್ ಕೊಲೆಗೆ ಸಂಚು ರೂಪಿಸಿ ಜೈಲಿನಲ್ಲಿ ಇಟ್ಟಿಗೆಗಳನ್ನು ಸಂಗ್ರಹಿಸಿದ್ದೇವು. ತುಪ್ಪದ ಟಿನ್ಗಳನ್ನು ಚೂರು ಮಾಡಿ ಬ್ಲೇಡ್ಗಳ ಆಕಾರಕ್ಕೆ ಕೊರೆದುಕೊಂಡು ಸಂಗ್ರಹಿಸಿದ್ದೆವು ಎಂದು ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ