ಬೆಂಗಳೂರು: 'ಜಾಣ ಮೋದಿ' ಭಾಷಣ ಕೇಳಿದಿರಾ?
'ಜಾಣ ಮೋದಿ' ಭಾಷಣ ಮಾಡಿದ್ದು ಪ್ರಧಾನಿ ಅಭ್ಯರ್ಥಿಯಾಗಿಯೇ ಹೊರತು ಬಿಜೆಪಿ ಸ್ಟಾರ್ ಪ್ರಚಾರಕರಾಗಿ ಅಲ್ಲ. ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮಾತನಾಡಿ ಅಂದರೆ ತಮ್ಮ 'ಪ್ರಧಾನಿ ಅಭ್ಯರ್ಥಿತನವನ್ನು' ಗಟ್ಟಿಗೊಳಿಸುವ ನಿಟ್ಟಿನಲ್ಲಿ ಅವರು ನೇರವಾಗಿ ಗುರಿಯಾಗಿಸಿಕೊಂಡಿದ್ದು ಕಾಂಗ್ರೆಸ್ ಪಕ್ಷವನ್ನು!
ಇನ್ನು ನಾಮ್ ಕೆ ವಾಸ್ತೆ ಇತರೆ ಪಕ್ಷಗಳ ಹೆಸರುಗಳನ್ನೂ ಅವರು ಪ್ರಸ್ತಾಪಿಸಲಿಲ್ಲ. ವಾಸ್ತವವಾಗಿ ಜೆಡಿಎಸ್, ಕೆಜೆಪಿ ಬಗ್ಗೆ ಅವರು ಮಾತನಾಡಬೇಕಿತ್ತು. ಇನ್ನು ಆ ಪಕ್ಷಗಳ ನಾಯಕರನ್ನೂ ಸಂಭೋದಿಸಲಿಲ್ಲ. ಯಡಿಯೂರಪ್ಪ ಹೆಸರು ಕೇಳಿಬರುತ್ತದಾ ಎಂದು ಖುದ್ದು ಬಿಜೆಪಿ ಕಾರ್ಯಕರ್ತರೇ ಕಾಯುತ್ತಿದ್ದರು. ಆದರೆ ಯಡಿಯೂರಪ್ಪ ಆಗಲಿ ಅವರ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆಯಾಗಲಿ ಮೋದಿ ಬಾಯಿಂದ ಒಂದೇ ಒಂದು ಶಬ್ದವೂ ಹೊರಡಲಿಲ್ಲ.
ಬೆಂಗಳೂರು, ಕರ್ನಾಟಕದಲ್ಲಿಯೂ ತಮ್ಮ ಪ್ರಧಾನಿಪಟ್ಟಕ್ಕೆ ಅನುಕೂಲವಾಗುವ 'ಮಿನಿ ಭಾರತ'ವನ್ನು ಕಂಡರೇ ಹೊರತು ಸ್ಥಳೀಯರು ಅವರ ಕಣ್ಣಿಗೆ ಗೋಚರಿಸಲೇ ಇಲ್ಲ. ಮೋದಿ ಅವರು ಸಿಬಿಐ ಬಗ್ಗೆ ದಾಳಿ ಮಾಡಿದಾಗ ಅನಿಸಿದ್ದು ತಮಗೆ ಅನುಕೂಲಕರವಾಗಿರುವ ವಿಷಯಗಳನ್ನು ಬೆಣ್ಣೆಯಲ್ಲಿ ಕೂದಲು ತೆಗೆದಂತೆ ಮಾತನಾಡಿದರೇ ಹೊರತು ಬಿಜೆಪಿ ಅಭ್ಯರ್ಥಿಗಳಿಗೆ ಧೈರ್ಯ ತುಂಬುವ ಧಾಟಿಯಲ್ಲಿ ಮಾತನಾಡಲಿಲ್ಲ.
ಅದಕ್ಕೇ ಹೇಳಿದ್ದು ಅವರು ಮುಂದಿನ 2014ರ ಲೋಕಸಭೆ ಚುನಾವಣೆಗೆ ಪ್ರಚಾರ ಭಾಷಣ ಮಾಡಿದರೇ ಹೊರತು ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸ್ಥಳೀಯ ಬಿಜೆಪಿ ಅಭ್ಯರ್ಥಿಗಳ ಪರ ಮಾತನಾಡಲಿಲ್ಲ ಎಂದು. ಇಂದಿರಾ ಕಾಂಗ್ರೆಸ್ಸಿನಿಂದ ಹಿಡಿದು ಮುಖರಹಿತ ಇಂದಿನ ಕಾಂಗ್ರೆಸ್ ನಾಯಕತ್ವದ ಬಗ್ಗೆ ಮೋದಿ ಮಾತನಾಡಿದರೆ ಹೊರತು ಸ್ಥಳೀಯ ರಾಜಕೀಯ ಮುತ್ಸದ್ದಿಗಳ ಬಗ್ಗೆ ಮಾತೇ ಹೊರಡಲಿಲ್ಲ. ಅದು ಹೇಗೋ ಪಾಪಾ ವಿದೇಶಾಂಗ ಸಚಿವ ಕೃಷ್ಣ ಬಂದು ಹೋದರು. (ಅಷ್ಟಕ್ಕೂ ಅಂದು ಕೃಷ್ಣ ಯಾಮಾರಿದ್ದು ತಪ್ಪಾ ಎಂಬುದೇ ಪ್ರಶ್ನಾರ್ಹ).
ಭ್ರಷ್ಟಾಚಾರದ ಬಗ್ಗೆ ರೇಸ್ ಕೋರ್ಸ್ ರಸ್ತೆಯಿಂದ ಜನಪಥ್ ವರೆಗೂ 2ಜಿ ಲಂಚದ ದುಡ್ಡನ್ನು ಹಾಸಬಹುದು ಎಂದರೇ ಹೊರತು ಅದೇ ರೇಸ್ ಕೋರ್ಸಿನಲ್ಲಿ ವಿರಾಜಮಾನರಾಗಿದ್ದ ಬ್ರಹ್ಮಾಂಡ ಭ್ರಷ್ಟಾಚಾರಿಯ ಬಗ್ಗೆ ಅಪ್ಪಿತಪ್ಪಿಯೂ ಉಸಿರೆತ್ತಲಿಲ್ಲ ಮೋದಿ ಸಾಹೇಬರು. ಏಕೆಂದರೆ ಮುಂದೆ ಹೇಗೋ ಏನೋ. ತಾವು ಪ್ರಧಾನಿಯಾಗಲು ಆಕಸ್ಮಾತ್ ಯಡಿಯೂರಪ್ಪ ಪಕ್ಷದ ಸಂಸದರ ಜತೆಯೇ ಕೈಜೋಡಿಸುವ ಪ್ರಸಂಗ ಬಂದರೆ... ಅಂತ ಯಡ್ಡಿ ಬಗ್ಗೆ ಮೋದಿ ಮಾತನಾಡಲಿಲ್ಲ.
ಏನೋಪ್ಪಾ ರಾಜಕೀಯ ಪಂಡಿತರು ಮೋದಿ ಭಾಷಣವನ್ನು ಹೇಗೆಲ್ಲಾ ವಿಶ್ಲೇಷಿಸುತ್ತಿದ್ದಾರೋ ನಾ ಕಾಣೆ. ಆದರೆ ನನಗನ್ನಿಸಿದಂತೂ ಇಷ್ಟೇ.