ರೇಪ್, ಹತ್ಯೆ, ಮರಾಠ ಬರಹ: ಆರೋಪಿ ಸಿಕ್ಕಿಬಿದ್ದ
ಪ್ರಕರಣದ ದಿಕ್ಕುತಪ್ಪಿಸಲು ಯುವತಿಯ ಮೈಮೇಲೆ ಮರಾಟಾ ಎಂದು ಬರೆದು, ಭಾಷಾ ಸಾಮರಸ್ಯ ಕದಡಲು ಯತ್ನಿಸಿದ್ದ. ಸದ್ಯ ಅದೂ ಬಗೆಹರಿದ್ದು, ಪ್ರಕರಣದಲ್ಲಿ ಮರಾಠಿಗರ ಕೈವಾಡವಿಲ್ಲ ಎಂಬುದು ಸಮಾಧಾನಕರ ಸಂಗತಿಯಾಗಿದೆ.
ನಗರದ ಹೊರವಲಯದಲ್ಲಿ ಸೂಳೆಬಾವಿ ಬಳಿ ನಿರ್ಜನ ಪ್ರದೇಶದಲ್ಲಿ ನಗರದ ಸರಕಾರಿ ಕಾಲೇಜಿನ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿ, ಆಕೆಯನ್ನು ಹತ್ಯೆ ಮಾಡಿದ್ದೂ ಅಲ್ಲದೆ ಕ್ರೌರ್ಯದ ಪರಮಾವಧಿಯೆಂಬಂತೆ ಯುವತಿಯ ಬಲ ತೊಡೆಯ ಮೇಲೆ ಮರಾಟಾ ಎಂದು ಮರಾಠಾ ಭಾಷೆಯಲ್ಲಿ ಗೀಚಿ ಭಾಷಾ ವೈಷಮ್ಯಕ್ಕೂ ಕೊಳ್ಳಿಹಚ್ಚಿದ್ದ ಪಾತಕಿ ಸಿಕ್ಕಿಬಿದ್ದಿದ್ದಾನೆ.
ಮೋದಗಾ ಗ್ರಾಮದ ನಿವಾಸಿ ಶಿವಲೀಲಾ ಬಾಬು ಪಾಟೀಲ (20) ಹತ್ಯೆಯಾಗಿದ್ದ ವಿದ್ಯಾರ್ಥಿನಿ. ಬಸವಂತ್ (32) ಎಂಬುವವನ ಜತೆ ಈಕೆಯ ನಿಶ್ಚಿತಾರ್ಥವಾಗಿತ್ತು. ಈ ದುರುಳನೇ ತನ್ನ ಭಾವಿ ಪತ್ನಿಯ ಬಾಳನ್ನು ಹೊಸಕಿ ಹಾಕಿರುವ ಪಾಪಿ.
ಕಾರಣ ಗೊತ್ತಾಯ್ತು: ಬೆಳಗಾವಿ ಪೊಲೀಸರು ಎರಡೇ ದಿನದಲ್ಲಿ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶೀವಲೀಲಾಳನ್ನು ಮದುವೆಯಾಗಬೇಕಿದ್ದ ಬಸವಂತ ಯಾದವಾಡನನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ. ಬಸವಂತ ಮತ್ತು ಶಿವಲೀಲಾಳ ಮದುವೆ ಕಳೆದ ವರ್ಷವೇ ನಿಶ್ಚಯವಾಗಿತ್ತು.
ಆದರೆ ವಿವಾಹ ಮುಂದೆ ಹೋಗುತ್ತಿತ್ತು. ಇದರಿಂದ ಬಸವಂತನಲ್ಲಿ ಅಸಹನೆ ಹೆಚ್ಚಾಗತೊಡಗಿತು. ಶಿವಲೀಲಾಳನ್ನು ದೈಹಿಕವಾಗಿ ಬಳಸಿಕೊಳ್ಳಲು ಯತ್ನಿಸುತ್ತಿದ್ದ. ಶಿವಲೀಲಾ ಇದಕ್ಕೆ ಸಹಕರಿಸುತ್ತಿರಲಿಲ್ಲ. ಕೊಲೆಯಾದ ದಿನವೂ ಶಿವಲೀಲಾಳನ್ನು ದೈಹಿಕವಾಗಿ ಬಳಸಿಕೊಳ್ಳಲು ಯತ್ನಿಸಿದ್ದಾನೆ. ಇದಕ್ಕೆ ಒಪ್ಪದ ಶಿವಲೀಲಾಳನ್ನು ಕೊಲೆ ಮಾಡಿದ್ದಾನೆ. ನಂತರ ಪ್ರಕರಣದ ದಿಕ್ಕುತಪ್ಪಿಸಲು ಯುವತಿಯ ತೊಡೆ ಮೇಲೆ ಮರಾಟಾ ಎಂದು ಪೆನ್ನಿನಿಂದ ಬರೆದಿದ್ದಾನೆ.