ಪಾಕ್ ಕೈದಿಗಳಿಂದ ಹಲ್ಲೆ: ಸರಬ್ಜಿತ್ ಕೋಮಾ ಸ್ಥಿತಿಯಲ್ಲಿ
ಸರಬ್ಜಿತ್ ಸಿಂಗ್ (49) ಅವರಿಗೆ ಲಾಹೋರ್ ಜಿನ್ನಾ ಆಸ್ಪತ್ರೆಯ ಐಸಿಯು ವಿಭಾಗದಲ್ಲಿರುವ ಚಿಕಿತ್ಸೆ ನೀಡಲಾಗುತ್ತಿದೆ. ಶುಕ್ರವಾರ ಕೋಟ್ ಲಖ್ಪತ್ ಜೈಲಿನಲ್ಲಿ ಸುಮಾರು ಆರು ಮಂದಿ ಖೈದಿಗಳು ಸಿಂಗ್ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದರು.
ಶುಕ್ರವಾರವೇ ಸಿಂಗ್ ರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ರಕ್ತಸ್ರಾವವಿರುವುದರಿಂದ ಸರ್ಜರಿ ನಡೆಸುವುದು ಅಸಾಧ್ಯ ಎಂದು ವೈದ್ಯರು ಹೇಳಿದ್ದಾರೆ. ಕೇಂದ್ರೀಯ ನರ ವ್ಯವಸ್ಥೆಗೆ ತೀವ್ರ ಸ್ವರೂಪದ ಪೆಟ್ಟಾಗಿದ್ದು, ಮುಂದಿನ 24 ಗಂಟೆಗಳು ಕಾದು ನೋಡುವುದಾಗಿ ವೈದ್ಯರು ಹೇಳಿದ್ದಾರೆ.
ಶನಿವಾರ ಬೆಳಗ್ಗೆ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಕೇಂದ್ರ ಸರ್ಕಾರ ಸಿಂಗ್ ಕುಟುಬಂದ ಇಬ್ಬರಿಗೆ ತುರ್ತು ವೀಸಾ ನೀಡಿದ್ದು, ಇಂದು ಸಂಜೆ ಕುಟುಂಬ ಸದಸ್ಯರು ಪಾಕಿಸ್ತಾನಕ್ಕೆ ತೆರಳಲಿದ್ದಾರೆ.
ಮರಣದಂಡಗೆ ಜಾರಿಯಾಗಿದೆ : ಪಾಕಿಸ್ತಾನಕ್ಕೆ ಸೇರಿದ ಪಂಜಾಬ್ ಪ್ರಾಂತ್ಯದಲ್ಲಿ 1990ರಲ್ಲಿ ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿ 14 ಜನರು ಹತ್ಯೆಯಾಗಿದ್ದರು. ಈ ಪ್ರಕರಣದಲ್ಲಿ ಭಾರತದ ಸರಬ್ಜಿತ್ ಸಿಂಗ್ ಆಪಾದಿತನೆಂದು ಸಾಬೀತಾಗಿದೆ.
ಪಾಕಿಸ್ತಾನ ನ್ಯಾಯಾಲು ಇವರಿಗೆ ಮರಣದಂಡನೆಯ ಶಿಕ್ಷೆ ವಿಧಿಸಿದೆ. ಕ್ಷಮಾದಾನ ನೀಡುವಂತೆ ಸಲ್ಲಿಸಿದ ಅರ್ಜಿಗಳು ತಿರಸ್ಕೃತವಾಗಿದ್ದು, ಇವರ ಮರಣದಂಡನೆಗೆ ದಿನಗಣನೆ ಆರಂಭವಾಗಿದೆ. ಕ್ಷಮಾದಾನ ಕೋರುವಂತೆ ಸಿಂಗ್ ಸಲ್ಲಿಸಿದ ಅರ್ಜಿಗೆ ಪಾಕಿಸ್ತಾನದ ರಾಷ್ಟ್ರಾಧ್ಯಕ್ಷರು ಇಲ್ಲಿಯವರೆಗೂ ಅಂಕಿತ ಹಾಕಿಲ್ಲ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ