ದೇಶ ನಿರ್ಮಾಣಕ್ಕೆ ಯುವಶಕ್ತಿ ಬೇಕು : ವರುಣ್ ಗಾಂಧಿ
ಶುಕ್ರವಾರ ಮೂಡುಬಿದಿರೆ, ಉಡುಪಿ ಹಾಗೂ ಬಂಟ್ವಾಳದಲ್ಲಿ ಬಿಜೆಪಿ ಪರವಾಗಿ ಮತಯಾಚಿಸಿದ ವರುಣ್ ಗಾಂಧಿ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಗುಡುಗಿದರು. "ನಾನು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಪ್ರವಾಸ ಮಾಡಿದ್ದೇನೆ. ಎಲ್ಲ ಕಡೆಯೂ ಕೇಂದ್ರದ ವಿರುದ್ಧ ಅಸಮಾಧಾನವಿದೆ".
ಕೇಂದ್ರ ಸರರ್ಕಾರ ದುರಾಡಳಿತದಿಂದ ಜನರು ರೋಸಿದ್ದಾರೆ. ದೇಶದಲ್ಲಿ ಯುವ ನಾಯಕತ್ವಕ್ಕೆ ಆದ್ಯತೆ ನೀಡಬೇಕಾಗಿದೆ. ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಯೋಗ್ಯತೆಯ ಆಧಾರದ ಮೇಲೆ ಆಯ್ಕೆ ಮಾಡಿ ಎಂದು ಮನವಿ ಮಾಡಿದರು.
ದೇಶ ತಾಯಿಗೆ ಸಮಾನವಾದುದು. ಆದ್ದರಿಂದ ಮೊದಲು ದೇಶದ ಬಗ್ಗೆ ಚಿಂತಿಸಬೇಕು. ನಂತರ ಸ್ವಂತ ಹಿತಾಸಕ್ತಿಯ ಬಗ್ಗೆ ಯೋಚಿಸುವ ರಾಜಕಾರಣಿಗಳ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಕರ್ನಾಟಕದಂತಹ ಸ್ವಾಭಿಮಾನಿ, ಸಂಸ್ಕಾರಯುತ ರಾಜ್ಯದಲ್ಲಿ ಸುಭದ್ರ ಆಡಳಿತಕ್ಕಾಗಿ, ಮತ್ತೊಮ್ಮೆ ಬಿಜೆಪಿಯನ್ನು ಬೆಂಬಲಿಸಿ ಎಂದು ಹೇಳಿದರು.
ಕರ್ನಾಟಕದ ಜನರು ಕೇವಲ ವಿದ್ಯುತ್, ನೀರು, ರಸ್ತೆ ಮುಂತಾದ ಸ್ಥಳೀಯ ಸಮಸ್ಯೆಗಳ ಬಗ್ಗೆ ಮಾತ್ರ ಯೋಚಿಸಬಾರದು. ದೇಶದ ಆರ್ಥಿಕ ವ್ಯವಸ್ಥೆ ಸರಿಯಾಗಿಲ್ಲ. ಆಂತರಿಕ ಸುರಕ್ಷತೆ ಇಲ್ಲ. ಯುವಜನತೆಗೆ ಉದ್ಯೋಗ ಸಿಗುತ್ತಿಲ್ಲ. ಕೇಂದ್ರ ಸರ್ಕಾರದ ಆಡಳಿತ ವೈಫಲ್ಯ ಗಮನದಲ್ಲಿಟ್ಟುಕೊಂಡು ಮತದಾನ ಮಾಡಿ ಎಂದರು.
ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ. ದೇಶದ ಪ್ರಗತಿ ಹತ್ತು ಹೆಜ್ಜೆಗಳಷ್ಟು ಹಿಂದೆ ಹೋಗಿದೆ. ಬಿಜೆಪಿ ಪಕ್ಷದ ಸುಭದ್ರ ಸರ್ಕಾರ ರಾಜ್ಯ ಮತ್ತು ದೇಶದಲ್ಲಿ ಅಸ್ತಿತ್ವಕ್ಕೆ ಬರಬೇಕೆ ಅದಕ್ಕೆ ಜನರ ಬೆಂಬಲಬೇಕು ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು.
ದೇಶಕ್ಕೆ ಸುಭದ್ರ ಸರ್ಕಾರದ ಅಗತ್ಯ ಇದೆ. ಅದು ಬಿಜೆಪಿಯಿಂದ ಮಾತ್ರ ಸಾಧ್ಯ, ಆದ್ದರಿಂದ ಕರ್ನಾಟಕದಲ್ಲಿ ಬಿಜೆಪಿ ಗೆಲ್ಲಿಸುವ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಸರ್ಕಾರವನ್ನು ರಚಿಸುವ ಸಂದೇಶ ನೀಡಿ ಎಂದು ವರುಣ್ ಗಾಂಧಿ ಮನವಿ ಮಾಡಿದರು.
ಪ್ರಧಾನಿ ಒಳ್ಳೆಯವರು : ಪ್ರಧಾನಿ ಮನಹೋಹನ್ ಸಿಂಗ್ ಒಳ್ಳೆಯವರು. ಆದರೆ, ರಾಷ್ಟ್ರನಿರ್ಮಾಣಕ್ಕೆ ಬೇಕಿರುವುದು ಸಶಕ್ತ ನಾಯಕತ್ವ. ಸರ್ಕಾರವನ್ನ್ನು ಮುನ್ನೆಡಸಲು ಅವರು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಸಿಂಗ್ ನೇತೃತ್ವದ ಯುಪಿಎ ಸರಕಾರ ವಿದೇಶ ನೀತಿ ಸೇರಿದಂತೆ ಎಲ್ಲ ರಂಗಗಳಲ್ಲಿ ವಿಫಲವಾಗಿದೆ. ಸದ್ಯದಲ್ಲೇ ಲೋಕಸಭೆ ಚುನಾವಣೆ ನಡೆಯುವುದರಿಂದ ಕರ್ನಾಟಕದ ಚುನಾವಣೆ ರಾಷ್ಟ್ರ ರಾಜಕಾರಣಕ್ಕೆ ದಿಕ್ಸೂಚಿಯಾಗಬೇಕು. ರಾಷ್ಟ್ರವಾದಿ ಶಕ್ತಿಗೆ ಬಲ ನೀಡಲು ಜನರು ಬಿಜೆಪಿಯನ್ನು ಬೆಂಬಲಿಸಬೇಕು ಎಂದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ