ಸಂಕೇಶ್ವರ್ ಹಚ್ಚಿದ ಬೆಂಕಿಗೆ ತುಪ್ಪ ಸುರಿದ ಬಿಎಸ್ವೈ
ಶಿವಮೊಗ್ಗದಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕಿ ಸುಷ್ಮಾ ಸ್ವರಾಜ್ ಅವರು ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಲಿರುವ ಸಂದರ್ಭದಲ್ಲಿ ಕೆಜೆಪಿ ಪರ ಪ್ರಚಾರವನ್ನು ತೀವ್ರಗೊಳಿಸಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು, ಬಿಜೆಪಿ ನಾಯಕರ ಮೇಲೆ ಮಾಡಲಾಗಿರುವ ಎಲ್ಲ ಆರೋಪಗಳಿಗೆ ಸುಷ್ಮಾ ಸ್ವರಾಜ್ ಅವರು ಬಹಿರಂಗವಾಗಿಯೇ ಸ್ಪಷ್ಟನೆ ನೀಡಬೇಕು ಎಂದು ಶುಕ್ರವಾರ ಆಗ್ರಹಿಸಿದ್ದಾರೆ.
ಸಂಕೇಶ್ವರ್ ಬಹಿರಂಗಪಡಿಸಿರುವ ಚೀಟಿಯಲ್ಲಿನ ಬರಹ ಸದಾನಂದ ಗೌಡ ಅವರದ್ದೆ. ಅವರು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಹಣದ ಸಾಕಷ್ಟು ಅವ್ಯವಹಾರಗಳು ನಡೆದಿವೆ. ಜಗದೀಶ್ ಶೆಟ್ಟರ್ ಅವರ ಕಾಲದಲ್ಲಿಯೂ ವರ್ಗಾವಣೆಗೆ ಸಂಬಂಧಿಸಿದಂತೆ ಹಲವಾರು ಹಗರಣಗಳು ನಡೆದಿವೆ. ಈ ಎಲ್ಲ ಅವ್ಯವಹಾರಗಳ ತನಿಖೆ ನಡೆಯಬೇಕು ಎಂದು ಯಡಿಯೂರಪ್ಪನವರು ಬಿಜೆಪಿ ನಾಯಕರ ಮೇಲೆ ವಾಕ್ ಪ್ರಹಾರ ಮಾಡಿದರು.
ಗುರುವಾರ, ಏ.25ರಂದು ಪತ್ರಿಕಾಗೋಷ್ಠಿಯಲ್ಲಿ ಕೆಜೆಪಿ ಸೇರಿರುವ ವಿಜಯ ಸಂಕೇಶ್ವರ್ ಅವರು, ಸದಾನಂದ ಗೌಡ ಮತ್ತು ಆರ್ ಅಶೋಕ್ ನಡುವೆ ಕೋಟಿ ಕೋಟಿ ರು. ಹಣದ ಅವ್ಯವಹಾರ ನಡೆದಿತ್ತು ಎಂದು ಅಶೋಕ್ ಅವರನ್ನು ಸಂಬೋಧಿಸಿ ಕೈಬರಹದಲ್ಲಿರುವ ಚೀಟಿಯನ್ನು ಬಿಡುಗಡೆ ಮಾಡಿದ್ದರು. ಇದು ಕೇವಲ ಒಂದು ಉದಾಹರಣೆ ಮಾತ್ರ ಎಂದು ನುಡಿದಿದ್ದರು. ಆದರೆ, ಇದರ ಮೂಲ ಯಾವುದು, ಯಾವ ಸಂದರ್ಭದಲ್ಲಿ ಕೊಟ್ಟಿದ್ದು ಎಂದು ಕೇಳಿದಾಗ ಉತ್ತರ ಕೊಡದೆ ನುಣುಚಿಕೊಂಡಿದ್ದರು.
ಆ ಚೀಟಿಯಲ್ಲಿ, "ಅಶೋಕ್ ಅವರಿಗೆ, ಈಗಾಗಲೆ ತಮ್ಮ ಬಳಿ ಚರ್ಚಿಸಿದಂತೆ ಇವರಿಗೆ, ಅಧ್ಯಕ್ಷರು ಬಿಜೆಪಿ ಕರ್ನಾಟಕ, 5 ಕೋಟಿ ರು. ಉಳಿಕೆ ಹಣ ನೀಡುವುದು" ಎಂದು ಬರೆದಿರುವುದು ಸ್ಪಷ್ಟವಾಗಿದೆ. ಆದರೆ, ಅಡಿಯಲ್ಲಿರುವ ಸಹಿ ಯಾರದೆಂಬುದು ಸ್ಪಷ್ಟವಾಗಿಲ್ಲ. ಡಿವಿ ಸದಾನಂದ ಗೌಡ ಅವರು ಈ ಆರೋಪವನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ತಮ್ಮಿಂದ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬೇಕಿದ್ದರೆ ತನಿಖೆಗೂ ಸಿದ್ಧ ಎಂದು ಪ್ರತಿಸವಾಲು ಎಸೆದಿದ್ದಾರೆ.