'ಮುಖ್ಯಮಂತ್ರಿ ಮೋದಿ ಎಂದಿಗೂ ಜನರನ್ನು ಸಾಯಿಸಿ ಅನ್ನಲಿಲ್ಲ'
ಇದರೊಂದಿಗೆ ಕಾಂಗ್ರೆಸ್ ಪಕ್ಷದ 'ಮೌತ್ ಕಾ ಸೌದಾಗರ್' ಥಿಯರಿಗೆ ಭಾರಿ ಹೊಡೆತ ಬಿದ್ದಿದೆ. 2002ರ ಗೋಧ್ರೋತ್ತರ ಗಲಭೆಗಳಿಗಾಗಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು 'ಯಮರಾಜ' ಎಂದು ಜರಿಯುತ್ತಿದ್ದವು.
ಆದರೆ ಸುಪ್ರೀಂಕೋರ್ಟ್ ಸ್ಥಾಪಿತ ವಿಶೇಷ ತನಿಖಾ ದಳವು (SIT) ಇತ್ತೀಚೆಗೆ ಮೋದಿಗೆ ಕ್ಲೀನ್ ಚಿಟ್ ನೀಡಿತ್ತು. ಇದನ್ನು ಸಮರ್ಥಿಸಿಕೊಂಡು ಮಾತನಾಡಿರುವ SIT ಲಾಯರ್ 'ಜನರನ್ನು ಸಾಯಿಸಲು ಹೊರಡಿ ಎಂದು ಸಿಎಂ ಮೋದಿ ಎಂದಿಗೂ ಆದೇಶ ನೀಡಿರಲಿಲ್ಲ' ಎಂದು ಹೇಳಿದ್ದಾರೆ.
SIT ವರದಿಯನ್ನು ಸಮಾಪ್ತಿಗೊಳಿಸಿದ್ದರ ವಿರುದ್ಧ ಬಾಧಿತ ಜೆಫ್ರಿ ಸಲ್ಲಿಸಿದ್ದ ಅರ್ಜಿಯ ಬಗ್ಗೆ ಖಾರವಾಗಿ ಪ್ರತಿಕ್ರಯಿಸಿದ ಲಾಯರ್ ಆರ್ ಎಸ್ ಜಮೂರ್ ಅವರು (ಸಾಮಾಜಿಕ ಕಾರ್ಯಕರ್ತ) ತೀಸ್ತಾ ಸಿತಲ್ವಾಡ್ ಮತ್ತಿತರರು ತಪ್ಪು ಉದ್ದೇಶದಿಂದ ದೂರು ಸಲ್ಲಿಸಿದ್ದಾರೆ. 'ಜನರನ್ನು ಸಾಯಿಸಲು ಹೊರಡಿ ಎಂದು ಸಿಎಂ ಮೋದಿ (2002ರ ಫೆಬ್ರವರಿ 27ರಂದು) ಆದೇಶಿದ್ದರು' ಎಂಬ ದೂರಿನಲ್ಲಿ ಎಳ್ಳಷ್ಟೂ ಸತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಂದು ಗಲಭೆ ವೇಳೆ ಮೃತಪಟ್ಟ ಕಾಂಗ್ರೆಸ್ ಸಂಸದ ಈಶಾನ್ ಜೆಫ್ರಿ ಅವರ ಪತ್ನಿ ಜಾಕಿಯಾ ಮತ್ತು ಇತರೆ ಸಂತ್ರಸ್ತರ ಪರ ಸಿತಲ್ವಾಡ್ ಕಾನೂನು ಹೋರಾಟ ನಡೆಸಿದ್ದಾರೆ.
ದೂರಿನ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಲಾಯರ್ ಜಮೂರ್ ಅವರು ಸಿತಲ್ವಾಡ್ ''ಒಬ್ಬ ಕಪೋಲಕಲ್ಪಿತ ಬರಹಗಾರ'' ಎಂದಿದ್ದಾರೆ. 'ಗಲಭೆ ನಡೆಸುತ್ತಿದ್ದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬೇಡಿ ಎಂದು ಉನ್ನತ ಪೊಲೀಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿ ಮೋದಿ ಆದೇಶ ನೀಡಿದ್ದರು ಎನ್ನಲಾದ ಮಾಹಿತಿಗೆ ಯಾವುದೇ ಸಾಕ್ಷ್ಯ/ಆಧಾರವೇ ಇಲ್ಲ' ಎಂದು ಲಾಯರ್ ಜಮೂರ್ ಕೋರ್ಟಿಗೆ ತಿಳಿಸಿದ್ದಾರೆ.