ಚುನಾವಣೆಗೆ ಮುನ್ನ ಯಡಿಯೂರಪ್ಪಗೆ ಸಿಹಿ ಸುದ್ದಿ
ಗಮನಾರ್ಹವೆಂದರೆ ಯಡಿಯೂರಪ್ಪ ಅವರು ಕೆಜೆಪಿ ಅಧ್ಯಕ್ಷರಾಗಿ ಮುಂದುವರಿಯಲು ತನ್ನದೇನು ಅಭ್ಯಂತರವಿಲ್ಲ ಎಂದು ಕೇಂದ್ರ ಚುನಾವಣೆ ಆಯೋಗವು ಈಗಾಗಲೇ ಸ್ಪಷ್ಟಪಡಿಸಿದೆ. ಆದರೂ ತಾನೇ ಕರ್ನಾಟಕ ಜನತಾ ಪಕ್ಷದ ನಿಜವಾದ ಅಧ್ಯಕ್ಷ ಎಂದು ವರಾತ ತೆಗೆದು ಪದ್ಮನಾಭ ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಸಂಬಂಧ ಪ್ರಕರಣ ಇತ್ಯರ್ಥಪಡಿಸಿದ ರಾಜ್ಯ ಹೈಕೋರ್ಟ್, ಪದ್ಮನಾಭ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಪದ್ಮನಾಭ ಎತ್ತಿರುವ ವಾದಗಳಲ್ಲಿ ಹುರುಳಿಲ್ಲ ಎನ್ನುತ್ತಾ ಚುನಾವಣೆ ಆಯೋಗದ ಪ್ರತಿವಾದವನ್ನು ಪುರಸ್ಕರಿಸಿದೆ. ತೀರ್ಪು ಕಾಯ್ದಿರಿಸಿದ್ದ ನ್ಯಾ. ಎಸ್ ಅಬ್ದುಲ್ ನಜೀರ್ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.
ಇದೇ ವೇಳೆ, ಹೊಟ್ಟೆಪಕ್ಷದ ರಂಗಸ್ವಾಮಿ ಅವರ ಪುತ್ರ ಜಿ ಆರ್ ರಾಜೇಂದ್ರ ಪ್ರಸಾದ್ ಅವರು ಕೆಜೆಪಿ ಮಾನ್ಯತೆಯನ್ನು ರದ್ದುಪಡಿಸಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಈ ಕೋರ್ಟ್ ತೀರ್ಪಿನಿಂದಾಗಿ ಕೆಜೆಪಿ ಅಧ್ಯಕ್ಷ ಸ್ಥಾನ/ ಅಸ್ತಿತ್ವಕ್ಕೆ ಸಂಬಂಧಿಸಿದಂತೆ ಎದ್ದಿದ್ದ ಎಲ್ಲ ವಿವಾದಗಳಿಗೆ ಮಂಗಳ ಹಾಡಲಾಗಿದೆ. ಇದರೊಂದಿಗೆ ಮುಂದಿನ ವಿಧಾನಸಭೆ ಚುನಾವಣೆಗೆ ಯಡಿಯೂರಪ್ಪ ಅಧಿಪತ್ಯದಲ್ಲಿ ಕೆಜೆಪಿ ಪೂರ್ಣಪ್ರಮಾಣದ ಹೋರಾಟ ನಡೆಸಬಹುದಾಗಿದೆ.