ಬಾಗಲಕೋಟೆ : ಪ್ರಚಾರದ ವೇಳೆ ನಿರಾಣಿಗೆ ಕಲ್ಲೇಟು
ಬುಧವಾರ ರಾತ್ರಿ ಬೀಳಗಿ ಮತಕ್ಷೇತ್ರ ವ್ಯಾಪ್ತಿಯ ಕಾಡರಕೊಪ್ಪದಲ್ಲಿ ಸಚಿವ ಮುರುಗೇಶ್ ನಿರಾಣಿ ಭಾಷಣ ಆರಂಭಿಸುತ್ತಿದ್ದಂತೆಯೇ ವೇದಿಕೆಯತ್ತ ಕಲ್ಲು ತೂರಾಟ ಆರಂಭವಾಯಿತು. ತಕ್ಷಣ ಸ್ಥಳದಲ್ಲಿ ಕಾರ್ಯಕರ್ತರು ನಿರಾಣಿ ಅವರನ್ನು ರಕ್ಷಿಸಿದರು.
ನಿರಾಣಿ ಸುತ್ತುವರೆದ ಕಾರ್ಯಕರ್ತರ ತಲೆ, ಮುಖಗಳಿಗೆ ಕಲ್ಲುಗಳು ಬಡಿದಿದ್ದು, ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ. ತಕ್ಷಣ ನಿರಾಣಿ ಅವರನ್ನು ಪೊಲೀಸರು ಬಂದೋಬಸ್ತ್ನಲ್ಲಿ ಪ್ರಚಾರ ಸಭೆ ನಡೆಯುತ್ತಿದ್ದ ಸ್ಥಳದ ಹತ್ತಿರವಿದ್ದ ಮನೆಗೆ ಕರೆದುಕೊಂಡು ಹೋದರು.
ಕಾರ್ಯಕರ್ತರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಕಿಡಿಗೇಡಿಗಳ ಕೃತ್ಯವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಕೈವಾಡ ಎಂದು ಮುರುಗೇಶ್ ನಿರಾಣಿ ಪೊಲೀಸರಿಗೆ ದೂರು ನೀಡಿದ್ದಾರೆ.
ಕಾಡರಕೊಪ್ಪಕ್ಕೆ ಗ್ರಾಮಕ್ಕೆ ನಿರಾಣಿ ಆಗಮಿಸಿದ ತಕ್ಷಣ ಗ್ರಾಮಸ್ಥರು ಆಶ್ರಯ ಮನೆಗೆ ಸಂಬಂಧಿಸಿದಂತೆ ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಮತ್ತು ಬಿಜೆಪಿ ಕಾರ್ಯಕರ್ತರ ನಡುವಿನ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು.
ಪೊಲೀಸರ ಪ್ರವೇಶದಿಂದ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿತ್ತು, ನಿರಾಣಿ ಭಾಷಣ ಆರಂಭಿಸುತ್ತಿದ್ದಂತೆಯೇ ಮತ್ತೆ ಕಲ್ಲು ತೂರಾಟ ಆರಂಭವಾಯಿತು. ಗ್ರಾಮದಲ್ಲಿ ಹೆಚ್ಚಿನ ಪೊಲೀಸ್ ಬಂದೋ ಬಸ್ತ್ ಮಾಡಲಾಗಿದ್ದು, ಪರಿಸ್ಥಿತಿ ಶಾಂತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೀಳಗಿ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನಿರಾಣಿ ಮತ್ತು ಕಾಂಗ್ರೆಸ್ ನ ಜಿ.ಜೆ.ಪಾಟೀಲ್ ವಿರುದ್ಧ ಸಮಬಲದ ಹೋರಾಟ ನಡೆಯುತ್ತಿದೆ. ಕ್ಷೇತ್ರದಲ್ಲಿ ಕೆಜೆಪಿ ಅಭ್ಯರ್ಥಿಗಳನ್ನೇ ಕಣಕ್ಕಿಳಿಸದೇ ಹೊಸ ಕಾರ್ಯತಂತ್ರ ರೂಪಿಸಿದೆ.
ಕಾರಜೋಳ ಮೇಲೆ ಹಲ್ಲೆಗೆ ಯತ್ನ : ಏ.21ರಂದು ಜಿಲ್ಲೆಯ ಮುಧೋಳ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಚಿವ ಗೋವಿಂದ ಕಾರಜೋಳ ಹಾಗೂ ಅವರ ಅಂಗರಕ್ಷಕರ ಮೇಲೆ ಹಲ್ಲೆ ಮಾಡುವ ವಿಫಲ ಯತ್ನ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.