ಗೌಡರೇ ಮತ್ತೊಮ್ಮೆ ಈ ರಾಜ್ಯದಲ್ಲಿ ಹುಟ್ಟಬೇಡಿ : ಸಿದ್ದು
ಗುರುವಾರ ಹಾಸನದ ಅರಸೀಕೆರೆಯಲ್ಲಿ ಚುನಾವಣಾ ಪ್ರಚಾರ ಭಾಷಣದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಜೆಡಿಎಸ್ ಕೇವಲ ದೇವೇಗೌಡರ ಕುಟುಂಬದ ಪಕ್ಷ. ಬೇರೆಯವರಿಗೆ ಅಲ್ಲಿ ಸ್ಥಾನ ಸಿಗುವುದಿಲ್ಲ ಎಂದು ವ್ಯಂಗ್ಯವಾಡಿದರು.
ಒಬ್ಬ ಸಿದ್ದರಾಮಯ್ಯ ಹೋದರೆ ಮತ್ತೊಬ್ಬರು ಹುಟ್ಟಿ ಬರುತ್ತಾರೆ. ಆದರೆ, ಒಬ್ಬ ದೇವೇಗೌಡರು ಹೋದರೆ ಮತ್ತೊಬ್ಬರು ಹುಟ್ಟಿ ಬರುವುದಿಲ್ಲ ಎಂಬ ಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ. ದೇವೇಗೌಡರು ಮಹಾಪುರುಷರಲ್ಲ. ಅಂತಹವರು ಕರ್ನಾಟಕದಲ್ಲಿ ಮತ್ತೊಮ್ಮೆ ಹುಟ್ಟಿ ಬರದಿದ್ದರೆ ಒಳ್ಳೆಯದು.
ಗೌಡರೇ ಈ ರಾಜ್ಯದಲ್ಲಿ ಮತ್ತೊಮ್ಮೆ ಹುಟ್ಟಿ ಬರಬೇಡಿ ಎಂದು ಲೇವಡಿ ಮಾಡಿದರು. ಅಪ್ಪ ಮಕ್ಕಳ ಸ್ವಾರ್ಥ ಸಾಧನೆಗಾಗಿ ಪಕ್ಷ ಕಟ್ಟಿಕೊಂಡಿರುವ ದೇವೇಗೌಡರಿಂದ ಸಮಾಜಕ್ಕೆ ಉಪಯೋಗವಾಗುವುದಿಲ್ಲ. ಅಪ್ಪ ಮಕ್ಕಳ ಪಕ್ಷವಾಗಿಯೇ ಜೆಡಿಎಸ್ ಉಳಿದು ಹೋಗಲಿದೆ ಎಂದು ಆರೋಪಿಸಿದರು.
ಬುಧವಾರ ಚಿತ್ರದುರ್ಗದಲ್ಲಿ ಸಿದ್ದು ವಿರುದ್ಧ ಗುಡುಗಿದ್ದ ದೊಡ್ಡ ಗೌಡರು, ಒಬ್ಬ ಸಿದ್ದರಾಮಯ್ಯ ಹೋದರೆ ನೂರು ಜನರು ಹುಟ್ಟಿ ಬರುತ್ತಾರೆ. ಆದರೆ, ದೇವೇಗೌಡ ಈಸ್ ದೇವೇಗೌಡ. ಒಬ್ಬ ದೇವೇಗೌಡ ಹೋದರೆ ಮತ್ತೊಬ್ಬರು ಹುಟ್ಟಿ ಬರುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಇದರಿಂದಾಗಿ ಇಬ್ಬರ ನಡುವೆ ಗುದ್ದಾಟ ಪ್ರಾರಂಭವಾಗಿತ್ತು. (ದೇವೇಗೌಡ ಈಸ್ ದೇವೇಗೌಡ, ದುರ್ಗದಲ್ಲಿ ಗರ್ಜನೆ)
ಸಿದ್ದರಾಮಯ್ಯ ಒಬ್ಬ ಸಾಮಾನ್ಯ ವ್ಯಕ್ತಿ ಎಂಬುದೇನೋ ಸರಿ... ಆದರೆ, ದೇವೇಗೌಡ ಏನು ಮಹಾನ್ ವ್ಯಕ್ತಿ ಅಲ್ಲ... ಅವರೇನು ಮಹಾತ್ಮ ಗಾಂಧಿಯೂ ಅಲ್ಲ, ಅಂಬೇಡ್ಕರರೂ ಅಲ್ಲ, ಜಯಪ್ರಕಾಶ್ ನಾರಾಯಣರೂ ಅಲ್ಲ. ದೇವೇಗೌಡರಂಥವರು ಹುಟ್ಟದಿರುವುದೇ ಒಳ್ಳೆಯದು ಎಂದು ಸಿದ್ದು ಕಿಡಿಕಾರಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ