ಬಾಂಬ್ ಸ್ಫೋಟ ರೂವಾರಿ ಬುಹಾರಿ ತಪ್ಪೊಪ್ಪಿಗೆ
ಪ್ರಕರಣದ ಸಂಬಂಧ ಬಂಧಿತನಾಗಿದ್ದ Al-Ummah ಸಂಘಟನೆಯ ಕಿಚನ್ ಬುಹಾರಿ ಸ್ಫೋಟಕ ಮಾಹಿತಿಯನ್ನು ನೀಡಿದ್ದಾನೆ. ಸಿಸಿಬಿ ಪೊಲೀಸರ ವಿಚಾರಣೆ ವೇಳೆ ''ಕುಕೃತ್ಯ ನಡೆಸಿದ್ದು ತಾನೇ'' ಎಂದು ಒಪ್ಪಿಕೊಂಡಿರುವ ಬುಹಾರಿ ಈ ಹಿಂದೆ ಸುಮಾರು 12 ದಾಳಿ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ, ಹಿಂದೂ ಮಕ್ಕಳ ಕಚ್ಚಿಯ ಅಧ್ಯಕ್ಷ ಅರ್ಜುನ್ ಮೇಲೆ ಬುಹಾರಿ ಹಲ್ಲೆ ನಡೆಸಿದ್ದ. ಕರ್ನಾಟಕ ಪೊಲೀಸರು ತಮಿಳುನಾಡು ಪೊಲೀಸರ ನೆರವಿನೊಂದಿಗೆ ಮಂಗಳವಾರ ಬೆಳಗ್ಗೆ ಕಾರ್ಯಾಚರಣೆ ನಡೆಸಿ ಮಧುರೈನಲ್ಲಿ ಕಿಚನ್ ಬುಹಾರಿಯನ್ನು ಬಂಧಿಸಿದ್ದರು.
ಪೀರ್ ಮೊಯಿದ್ದೀನ್ ಮತ್ತು ಬಶೀರ್ ಎಂಬಿಬ್ಬರನ್ನು ಸೋಮವಾರ ರಾತ್ರಿ ಕೊಯಮತ್ತೂರಿನಲ್ಲಿ ಬಂಧಿಸಿದ್ದರು. ಅವರು ಕೊಟ್ಟ ಸುಳಿವಿನ ಮೇರೆಗೆ ಮಂಗಳವಾರ ಮಿಂಚಿನ ಕಾರ್ಯಾಚರಣೆ ನಡೆಸಿದ್ದ ಬೆಂಗಳೂರು ಪೊಲೀಸರು ಬುಹಾರಿಯನ್ನು ವಶಕ್ಕೆ ತೆಗೆದುಕೊಂಡಿದ್ದರು.
ಬುಹಾರಿ ಸೂಚನೆಯಂತೆ ಬಾಂಬ್ ಸ್ಫೋಟ ನಡೆಸಿದ್ದಾಗಿ ಪೀರ್ ಮೊಯಿದ್ದೀನ್ ಮತ್ತು ಬಶೀರ್ ತಪ್ಪೊಪ್ಪಿಕೊಂಡಿದ್ದಾರೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ. ಗಮನಾರ್ಹವೆಂದರೆ ಆಟೋರಾಜ ಈ ಮೂವರನ್ನೂ ಸ್ಫೋಟದ ಹಿಂದಿನ ರಾತ್ರಿ ಸ್ಫೋಟದ ಸ್ಥಳದಲ್ಲಿ ಕಂಡಿದ್ದಾಗಿ ಪೊಲೀಸರಿಗೆ ತಿಳಿಸಿದ್ದ.