ಮಮತಾ ಕುತ್ತಿಗೆಗೆ ಸುತ್ತಿಕೊಂಡ 'ಚೀಟ್' ಫಂಡ್
ವಿವಾದಿತ ಶಾರದಾ ಚಿಟ್ ಫಂಡ್ ಸಂಸ್ಥೆಯ ಚೇರ್ಮನ್ ಕಮ್ ವ್ಯವಸ್ಥಾಪಕ ನಿರ್ದೇಶಕ ಸುದೀಪ್ತೋ ಸೇನ್ ಅವರು ಟಿಎಂಸಿ ನಾಯಕರುಗಳ ಹೆಸರುಳ್ಳ ಪಟ್ಟಿಯನ್ನು ಸಿಬಿಐಗೆ ರವಾನಿಸಿದ್ದಾರೆ. ಸುಮಾರು 30,000 ಕೋಟಿ ಚೀಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.
ಶಾರದಾ ಸಂಸ್ಥೆಯ ನಿರ್ದೇಶಕಿ ದೆಬ್ ಜಾನಿ ಮುಖ್ಯೋಪಾಧ್ಯಾಯ, ಸುದೀಪ್ತೋ ಸೇನ್, ಅರವಿಂದ್ ಸಿಂಗ್ ಚೌಹಾಣ್ ಅವರು ಬಂಧಿತರಲ್ಲಿ ಪ್ರಮುಖರು. ಕಾಶ್ಮೀರದ ಸೋನೆಮಾರ್ಗ್ ನಲ್ಲಿ ಇವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು JMC ಕೋರ್ಟ್ ಮುಂಚೆ ಹಾಜರು ಪಡಿಸಲಾಗಿದೆ. ಮೂವರಿಗೂ ನಾಲ್ಕು ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಶಾರದಾ ಸಂಸ್ಥೆ ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಲಕ್ಷಾಂತರ ಮಂದಿ ಹೂಡಿಕೆದಾರರು ಕಂಗಾಲಾಗಿ ಬೀದಿಗೆ ಬಿದ್ದು ರೋದಿಸಿದ್ದಾರೆ. ಹಲವೆಡೆ ಪ್ರತಿಭಟನೆಗಳು ಜಾರಿಯಲ್ಲಿದೆ. ಶಾರದಾ ಕಂಪನಿಯಲ್ಲಿ ಸ್ವಾಗತಕಾರಿಣಿಯಾಗಿ ಕೆಲಸಕ್ಕೆ ಸೇರಿಕೊಂಡ ದೇಬ್ ಜಾನಿ ನಂತರ ಇಡೀ ಕಂಪನಿಯನ್ನು ತನ್ನ ಕೈವಶ ಮಾಡಿಕೊಂಡಿದ್ದಳು.
ಹಗರಣದಿಂದ ಹಿಂದೆ ಸರಿಯುತ್ತಿದ್ದ ಮಮತಾ ಅವರು ಕಣ್ಣೊರೆಸುವ ತಂತ್ರ ಮಾಡಿದ್ದು, ಹಣ ಕಳೆದುಕೊಂಡವರಿಗೆ 500 ಕೋಟಿ ರು ಪರಿಹಾರ ಘೋಷಿಸಿದ್ದಾರೆ. ವಂಚಕರು ನಡೆಸಿದ ಹಗರಣದ ನಷ್ಟ ಭರಿಸಲು ಮಮತಾ ಅವರು ಸಾರ್ವಜನಿಕರ ತೆರಿಗೆ ಹಣ ಬಳಸುತ್ತಿರುವುದು ಟೀಕೆಗೆ ಗುರಿಯಾಗಿದೆ.
ಇಬ್ಬರು ರಾಜ್ಯಸಭಾ ಸದಸ್ಯರಲ್ಲದೆ ಅಸ್ಸಾಂ ಸಂಪುಟದ ಸಚಿವರೊಬ್ಬರ ಹೆಸರು ಕೇಳಿ ಬಂದಿದೆ. ಹಗರಣದಲ್ಲಿ ಟಿಎಂಸಿ ನಾಯಕರು ಭಾಗಿಯಾಗಿರುವ ಸುದ್ದಿ ದೃಢವಾಗುವ ಭೀತಿ ಎದುರಾದ ಮೇಲೆ ಸಿಎಂ ಮಮತಾ ಬ್ಯಾನರ್ಜಿ ಅವರು ಪರಿಹಾರ ಘೋಷಿಸಿದ್ದು ಹಲವು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ.
ಟಿಎಂಸಿ ಸಂಸದರಾದ ಕುನಾಲ್ ಘೋಷ್ ಮತ್ತು ಶ್ರೀಂಜೋಯ್ ಬೋಸ್ ಅವರ ಹೆಸರು ಸೇರಿದಂತೆ 22 ಹೆಸರುಗಳುಳ್ಳ 18 ಪುಟಗಳ ವಿವರಗಳನ್ನು ಶಾರದಾ ಸಂಸ್ಥೆ ಅಧ್ಯಕ್ಷ ಸುದೀಪ್ತೋ ಸೇನ್ ಅವರು ಸಿಬಿಐಗೆ ಕಳಿಸಿದ್ದಾರೆ.