ಕಪಾಳಕ್ಕೆ ಬಾರಿಸಿ ಅಡ್ವಾಣಿ ಕ್ಷಮೆಕೋರಿದ ಯಡಿಯೂರಪ್ಪ
ಸೋಮವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೆಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ್ ಕುಮಾರ್, ಯಡಿಯೂರಪ್ಪ ಅವರನ್ನು ಅಧಿಕಾರದಲ್ಲಿ ಮುಂದುವರಿಸಲು ಎಲ್.ಕೆ. ಅಡ್ವಾಣಿ ಅವರ ಮಕ್ಕಳು ಹಣಕ್ಕೆ ಬೇಡಿಕೆಯಿಟ್ಟಿದ್ದರು ಎಂದು ಆರೋಪಿಸಿದ್ದರು.
ಧನಂಜಯ್ ಕುಮಾರ್ ಆರೋಪಕ್ಕೆ ಬಿಜೆಪಿ ನಾಯಕರಿಂದ ತೀವ್ರ ಖಂಡನೆ ವ್ಯಕ್ತವಾಯಿತು. ಶಿವಮೊಗ್ಗ ಜಿಲ್ಲೆಯ ಪ್ರವಾಸದಲ್ಲಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್, ಧನಂಜಯ್ ಕುಮಾರ್ ಆರೋಪಗಳು ನಿರಾಧಾರ. ಬಿಜೆಪಿ ಎಂದಿಗೂ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ. ರಾಜ್ಯದಲ್ಲಿ ಜನಾರ್ದನ ರೆಡ್ಡಿ, ಯಡಿಯೂರಪ್ಪ ಇಲ್ಲದೇ ಈ ಬಾರಿ ಅಧಿಕಾರಕ್ಕೆ ಬರುತ್ತೇವೆ ಎಂದು ಪ್ರತಿಕ್ರಿಯೆ ನೀಡಿದ್ದರು.
ಸೋಮವಾರ ಸಂಜೆ ಗುಲ್ಬರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಯಡಿಯೂರಪ್ಪ, ಅಡ್ವಾಣಿ ಅವರಿಗಾಗಲೀ, ಅವರ ಮಕ್ಕಳಿಗಾಗಲೀ ನಾನು ನಯಾ ಪೈಸೆ ನೀಡಿಲ್ಲ. ಧನಂಜಯಕುಮಾರ್ ಆರೋಪ ತಪ್ಪು ಗ್ರಹಿಕೆಯಿಂದ ಕೂಡಿದೆ.
ಇಂಥ ಆರೋಪ ಯಾರಿಗೂ ಶೋಭೆ ತರುವುದಿಲ್ಲ. ನಾನು ಸಿಎಂ ಆಗಿದ್ದಾಗ ಅಡ್ವಾಣಿ ಮಕ್ಕಳು ಭೇಟಿಯಾಗುತ್ತಿದ್ದುದು ನಿಜ. ಇದನ್ನೇ ಧನಂಜಯಕುಮಾರ್ ಅಪಾರ್ಥ ಮಾಡಿಕೊಂಡಿರಬಹುದು.
ಅಗ್ರಗಣ್ಯ ನಾಯಕರಾದ ಅಡ್ವಾಣಿ ಅವರ ಬಗ್ಗೆ ಹಗುರವಾಗಿ ಮಾತನಾಡಿರುವುದಕ್ಕೆ ನಾನು ಅಡ್ವಾಣಿ ಮತ್ತು ರಾಜ್ಯದ ಜನರ ಕ್ಷೆಮೆ ಕೇಳುತ್ತೇನೆ ಎಂದು ಸ್ಪಷ್ಟನೆ ನೀಡಿದರು.
ಮಾನನಷ್ಟ ಮೊಕದ್ದಮೆ : ಅಡ್ವಾಣಿಯಂತಹ ಹಿರಿಯ ನಾಯಕರ ಬಗ್ಗೆ ಧನಂಜಯಕುಮಾರ್ ಮಾಡಿರುವ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಧನಂಜಯ್ ಕುಮಾರ್ ವಿರುದ್ಧ ಮಾನನಕಷ್ಟ ಮೊಕದ್ದಮೆ ದೂರು ದಾಖಲಿಸಲು ಸಜ್ಜಾಗಿದೆ.
ಚುನಾವಣೆ ಸಮಯದಲ್ಲಿ ಇಂತಹ ಹೇಳಿಕೆ ನೀಡಿ ನೀತಿ ಸಂಹಿತಿ ಉಲ್ಲಂಘಿಸಿದ್ದಾರೆ ಎಂದು ಚುನಾವಣಾ ಆಯೋಗಕ್ಕೂ ದೂರು ನೀಡಿದೆ. ದೂರು ಪಡೆದಿರುವ ಮುಖ್ಯ ಚುನಾವಣಾಧಿಕಾರಿ, ಧನಂಜಯ ಕುಮಾರ್ ಹೇಳಿಕೆ ಸಂಬಂಧ ಬಿಜೆಪಿ ನಾಯಕರು ದೂರು ಸಲ್ಲಿಸಿದ್ದಾರೆ. ಅವರಿಗೆ ನೋಟಿಸ್ ನೀಡಿ, ನೀತಿ ಸಂಹಿತೆ ಉಲ್ಲಂಘಿಸಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. (ಬಿಎಸ್ವೈರಿಂದ ಅಡ್ವಾಣಿಗೆ ಕಿಕ್ ಬ್ಯಾಕ್: ಧನಂಜಯ್ ಕಿ(ರಿ)ಕ್ಕು)
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ