ಬಿಎಸ್ವೈರಿಂದ ಅಡ್ವಾಣಿಗೆ ಕಿಕ್ ಬ್ಯಾಕ್: ಧನಂಜಯ್ ಕಿ(ರಿ)ಕ್ಕು
ಬೆಂಗಳೂರಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಧನಂಜಯ್ ಕುಮಾರ್, ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಪಕ್ಷಕ್ಕಾಗಿ ರಾಷ್ಟ್ರೀಯ ನಾಯಕರು 100 ಕೋಟಿಗೂ ಅಧಿಕ ಹಣ ಪಡೆದಿದ್ದಾರೆ ಎಂದು ಆರೋಪಿಸಿದರು.
ಎಲ್ಲಾ ಮೂವರು ರಾಷ್ಟ್ರೀಯ ನಾಯಕರು ಇದರಲ್ಲಿ ಪಾಲುದಾರರಾಗಿದ್ದಾರೆ. ಹಣ ನೀಡಿರುವುದಕ್ಕೆ ನಮ್ಮ ಬಳಿ ಸೂಕ್ತ ದಾಖಲೆಗಳಿಗೆ ಅವುಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಆದರೆ, ಅವರ ಮಕ್ಕಳು ಯಡಿಯೂರಪ್ಪ ಅವರಿಂದ ಹಣ ಪಡೆದಿದ್ದಾರೆ. ಯಡಿಯೂರಪ್ಪ ಅವರನ್ನು ಅಧಿಕಾರದಲ್ಲಿ ಮುಂದುದರೆಸಲು ಹಣ ನೀಡುವಂತೆ ಕೇಳಿದ್ದರು ಎಂದು ಗಂಭೀರ ಆರೋಪ ಮಾಡಿದರು.
ಕೇವಲ ಅಡ್ವಾಣಿಯವರಷ್ಟೇ ಅಲ್ಲದೇ ಬಿಜೆಪಿಯ ಇನ್ನೂ ಮೂವರು ನಾಯಕರು ಯಡಿಯೂರಪ್ಪ ಅವರಿಂದ ಹಣ ವಸೂಲಿ ಮಾಡಿಕೊಂಡಿದ್ದಾರೆ. ಯಾವ ನಾಯಕರಿಗೆ ಎಷ್ಟು ಹಣ ನೀಡಲಾಗಿದೆ ಎಂದು ಸೂಕ್ತ ಸಮಯದಲ್ಲಿ ದಾಖಲೆ ಬಿಡುಗಡೆ ಮಾಡುವುದಾಗಿ ಅವರು ಸ್ಪಷ್ಟ ಪಡಿಸಿದರು.
ಯಡಿಯೂರಪ್ಪನವರು ಅಧಿಕಾರದ ಗದ್ದುಗೆ ಏರಿದಾಗಿನಿಂದ ಬಂಡಾಯ ಸೇರಿದಂತೆ ಒಂದಿಲ್ಲೊಂದು ಸಮಸ್ಯೆಗಳನ್ನು ಎದುರಿಸುತ್ತಲೇ ಬಂದಿದ್ದರು. ಕೆಲವು ಬಾರಿ ಅಡ್ವಾಣಿ ಸೇರಿದಂತೆ ಕೇಂದ್ರ ಬಿಜೆಪಿ ನಾಯಕರ ಮಧ್ಯಪ್ರವೇಶದಿಂದ ಅಧಿಕಾರ ಉಳಿಸಿಕೊಳ್ಳಲು ಯಶಸ್ವಿಯಾಗಿದ್ದರು. ಇಂತಹ ಸಮಯದಲ್ಲಿ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ದೂರಿದರು.
ಕೇವಲ ರಾಷ್ಟ್ರೀಯ ನಾಯಕರು ಮಾತ್ರವಲ್ಲದೆ ರಾಜ್ಯ ನಾಯಕರು ಯಡಿಯೂರಪ್ಪ ಅವರಿಂದ ಹಣ ಪಡೆದಿದ್ದಾರೆ. ಅವರ ಹೆಸರುಗಳನ್ನು ಬಿಡುಗಡೆ ಮಾಡುತ್ತೇನೆ ಯಡಿಯೂರಪ್ಪ ಭ್ರಷ್ಟರು ಎಂದು ಹೇಳುವ ಪಕ್ಷದ ನಾಯಕರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ಧನಂಜಯ್ ಕುಮಾರ್ ಹೇಳಿದರು.
ಸೋಲಿನ ಭೀತಿ ಕಾರಣ : ಅಡ್ವಾಣಿ ವಿರುದ್ಧ ಕೆಜೆಪಿ ಮುಖಂಡ ಧನಂಜಯ್ ಮಾಡಿರುವ ಆರೋಪವನ್ನು ಸಿಎಂ ಜಗದೀಶ್ ಶೆಟ್ಟರ್ ತಳ್ಳಿಹಾಕಿದ್ದಾರೆ. ಚುನಾವಣೆಯಲ್ಲಿ ಸೋಲುವ ಭೀತಿಯಿಂದಾಗಿ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಪ್ರತಿಕ್ರಿಯಿಸಿದರು.
ದಾಖಲೆ ಕೊಡಿ ಡಿವಿಎಸ್ : ಯಡಿಯೂರಪ್ಪರಿಂದ ಅಡ್ವಾಣಿ ಹಣ ಪಡೆದಿದ್ದಾರೆ ಎಂದು ಅವರ ಬಗ್ಗೆ ಹಗುರವಾಗಿ ಮಾತನಾಡಬೇಡಿ, ಹತಾಶೆಯಿಂದ ಧನಂಜಯ್ ಕುಮಾರ್, ಈ ರೀತಿ ಮಾತನಾಡುತ್ತಿದ್ದಾರೆ. ಆರೋಪದ ಬಗ್ಗೆ ಸ್ವತಃ ಯಡಿಯೂರಪ್ಪ ಹೇಳಿಕೆ ನೀಡಿ, ದಾಖಲೆ ಬಿಡುಗಡೆ ಮಾಡಲಿ. ಆರೋಪ ಸಾಬೀತಾದರೆ ರಾಜ್ಯ ಬಿಜೆಪಿ ಪಕ್ಷವನ್ನು ಮುಚ್ಚುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಡಿ.ವಿ.ಸದಾನಂದ ಗೌಡ ಸವಾಲು ಹಾಕಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ