ಶ್ರೀನಿಧಿ ಬರೆದ ಕೀ ಬೋರ್ಡ್ ಜನಕನ ಕಥೆ
ಕೆ. ಪಿ. ರಾವ್ ಅವರ ಸಾಧನೆಗಳನ್ನು ಕುರಿತ ಕಿರುಪುಸ್ತಕ 'ಕಂಪ್ಯೂಟರ್, ಕನ್ನಡ ಮತ್ತು ಕೆ. ಪಿ. ರಾವ್' ಬರುವ ಏಪ್ರಿಲ್ 20ರ ಶನಿವಾರ ಸಂಜೆ ಬೆಂಗಳೂರಿನಲ್ಲಿ ಬಿಡುಗಡೆಯಾಗಿದೆ. ಉದಯಭಾನು ಕಲಾಸಂಘದ ಸಾಂಸ್ಕೃತಿಕ ಭವನ, ರಾಮಕೃಷ್ಣಮಠ ಬಡಾವಣೆ, ಕೆಂಪೇಗೌಡನಗರದಲ್ಲಿ ನಡೆದ ಸಮಾರಂಭದಲ್ಲಿ ಇನ್ನೂ ನಾಲ್ಕು ಕೃತಿಗಳು ಬಿಡುಗಡೆ ಕಂಡಿದೆ.
ಉದಯಭಾನು ಸುವರ್ಣ ಪುಸ್ತಕಮಾಲೆಯ ಅಂಗವಾಗಿ ಈ ಪುಸ್ತಕ ಹೊರಬಂದಿದ್ದು ಈ ಸರಣಿಯಲ್ಲಿ ಒಟ್ಟು ಐವತ್ತು ಸಾಧಕರನ್ನು ಪರಿಚಯಿಸುವ ಪುಸ್ತಕಗಳನ್ನು ಹೊರತರಲಾಗುತ್ತಿದೆ ಎಂದು ಲೇಖಕ ಟಿಜಿ ಶ್ರೀನಿಧಿ ಹೇಳಿದರು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಕೆ. ನಾರಾಯಣ ಗೌಡ ಹಾಗೂ 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಡಾ. ಕೋ. ಚೆನ್ನಬಸಪ್ಪ ಅವರುಗಳು ಸಮಾರಂಭದಲ್ಲಿ ಭಾಗವಹಿಸಿದ್ದರು
ಕೆ. ಪಿ. ರಾವ್ ಅವರ ಬಗ್ಗೆ: ಕೆ. ಪಿ. ರಾವ್, ಭಾರತೀಯ ಭಾಷೆಗಳಲ್ಲಿ ಕಂಪ್ಯೂಟಿಂಗ್ ಕ್ಷೇತ್ರದ ಪಿತಾಮಹರೆಂದೇ ಪ್ರಸಿದ್ಧರು. ಈಗ ವ್ಯಾಪಕವಾಗಿ ಬಳಕೆಯಲ್ಲಿರುವ ಕರ್ನಾಟಕ ಸರ್ಕಾರದ ಅಧಿಕೃತ ಕೀಲಿಮಣೆ ವಿನ್ಯಾಸವನ್ನು ('ನುಡಿ' ವಿನ್ಯಾಸ) ರೂಪಿಸಿದ್ದು ಶ್ರೀ ಕೆ. ಪಿ. ರಾವ್ ಅವರ ಸಾಧನೆ.
1970ರ ದಶಕದಿಂದಲೇ ಅಕ್ಷರಗಳ ಒಡನಾಟದಲ್ಲಿರುವ ಕೆ. ಪಿ. ರಾಯರು ಸಿಂಧೂ ಲಿಪಿಯನ್ನು ಕಂಪ್ಯೂಟರ್ ಬಳಸಿ ಮುದ್ರಿಸುವ ಪ್ರಯತ್ನದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಉಚ್ಚಾರಣಾತ್ಮಕ ತರ್ಕ ಬಳಸಿದ ಮೊದಲ ಕೀ ಬೋರ್ಡ್ ವಿನ್ಯಾಸದ ಸೃಷ್ಟಿ ಇವರದೇ ಸಾಧನೆ. ಮುಂದೆ ಇದೇ ತರ್ಕ ಬಳಸಿ ಅವರು ಕನ್ನಡದ ಕೀಬೋರ್ಡ್ ವಿನ್ಯಾಸ ತಯಾರಿಸಿದರು. ಇದನ್ನೇ ಕೊಂಚ ಬದಲಾಯಿಸಿ ಕರ್ನಾಟಕ ಸರ್ಕಾರದ ಅಧಿಕೃತ ಕೀಲಿಮಣೆ ವಿನ್ಯಾಸ ರೂಪುಗೊಂಡಿತು. ಕನ್ನಡದ ತಂತ್ರಾಂಶಗಳ ಬಗ್ಗೆ ಯಾರೂ ಹೆಚ್ಚಾಗಿ ಕೇಳಿಯೇ ಇಲ್ಲದ ಕಾಲದಲ್ಲಿ ಕನ್ನಡದ ಪದಸಂಸ್ಕಾರಕ ತಂತ್ರಾಂಶ 'ಸೇಡಿಯಾಪು' ರಚಿಸಿ ಮುಕ್ತ ಬಳಕೆಗೆ ನೀಡಿದ ಹಿರಿಮೆಯೂ ಕೆ. ಪಿ. ರಾಯರದು.