ಮಾಲೂರು : ಬಿಜೆಪಿಗೆ ಲಡ್ಡು ಕೊಟ್ಟು ನಕ್ಕ ಶೆಟ್ಟರು
ಬಿಜೆಪಿ ಅಂತಿಮ ಪಟ್ಟಿಯಲ್ಲಿ ಮಾಲೂರು ಕ್ಷೇತ್ರದಿಂದ ವೆಂಕಟೇಶ್ ಗೌಡ ಬಿಜೆಪಿ ಅಭ್ಯರ್ಥಿ ಎಂದು ಘೋಷಿಸಿತ್ತು. ಆದರೆ, ಕೃಷ್ಣಯ್ಯ ಶೆಟ್ಟಿ ಅವರು ನಾಮಪತ್ರ ಸಲ್ಲಿಸದಂತೆ ಮಾಡಿ, ಬಿಜೆಪಿಗೆ ಸರಿಯಾದ ಲಡ್ಡು ಕೊಟ್ಟಿದ್ದಾರೆ.(ಬಿಜೆಪಿ ಅಂತಿಮ ಪಟ್ಟಿ)
ಘೋಷಿತ ಅಭ್ಯರ್ಥಿ ನಾಮಪತ್ರ ಸಲ್ಲಿಸದೇ ಪಕ್ಷಕ್ಕೆ ಮುಜುಗರ ಉಂಟುಮಾಡಿದ್ದಾರೆ. ಕೃಷ್ಣಯ್ಯ ಶೆಟ್ಟಿ ಮತ್ತು ವೆಂಕಟೇಶ್ ಗೌಡ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಆಗಿದ್ದೇನು : ಕ್ರಿಮಿನಲ್ ಹಿನ್ನೆಲೆಯ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದಿಲ್ಲ ಎಂಬ ನಿಯಮದಂತೆ ಜೈಲು ಶಿಕ್ಷೆ ಅನುಭವಿಸಿ ಬಂದ ಕೃಷ್ಣಯ್ಯ ಶೆಟ್ಟಿಗೆ ಟಿಕೆಟ್ ನೀಡಬಾರದು ಎಂದು ಪಕ್ಷದ ನಾಯಕರು ತೀರ್ಮಾನಿಸಿದರು.
ನಿಮಗೆ ಟಿಕೆಟ್ ನೀಡಲು ಸಾಧ್ಯವಿಲ್ಲ. ನೀವು ಸೂಚಿಸಿದ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡುತ್ತೇವೆ ಎಂದು ಬಿಜೆಪಿ ಘೋಷಿಸಿತು. ಇದರಿಂದ ಬಂಡಾಯದ ಕಹಳೆ ಮೊಳಗಿಸಿದ ಕೃಷ್ಣಯ್ಯ ಶೆಟ್ಟಿ ಬಿಜೆಪಿಗೆ ರಾಜೀನಾಮೆ ನೀಡಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದರು.
ನಂತರ ಬಿಜೆಪಿ ಮೂರನೇ ಪಟ್ಟಿಯಲ್ಲಿ ವೆಂಕಟೇಶ್ ಗೌಡ ಅವರಿಗೆ ಟಿಕೆಟ್ ನೀಡಿತು. ಕೃಷ್ಣಯ್ಯ ಶೆಟ್ಟಿ ಆಪ್ತ ವಲಯದ ಸದಸ್ಯರಾದ ಗೌಡರು ಬಿ ಫಾರಂ ಕೈಯಲ್ಲಿದ್ದರೂ ನಾಮಪತ್ರ ಸಲ್ಲಿಸದೇ ತಟಸ್ಥವಾಗಿ ಉಳಿದರು. ಇದರ ಹಿಂದೆ ಕೃಷ್ಣಯ್ಯ ಶೆಟ್ಟಿ ಕೈವಾಡವಿರುವುದು ಪಕ್ಷದ ಅಧ್ಯಕ್ಷರ ಕೋಪಕ್ಕೆ ಕಾರಣವಾಗಿದೆ.
ಕೃಷ್ಣಯ್ಯ ಶೆಟ್ಟಿ ಪಕ್ಷದ ಸದಸ್ಯತ್ವಕ್ಕೆ ನೀಡಿದ ರಾಜೀನಾಮೆಯೂ ಅಂಗೀಕಾರವಾಗಿಲ್ಲ. ಆದ್ದರಿಂದ ಅವರನ್ನು ಬಂಡಾಯ ಅಭ್ಯರ್ಥಿ ಎಂದು ಪರಿಗಣಿಸಿ ಕ್ರಮ ಜರುಗಿಸಲು ಪಕ್ಷ ಸಜ್ಜಾಗಿದೆ. ಬಿ ಫಾರಂ ಪಡೆದ ವೆಂಕಟೇಶ್ ಗೌಡ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಬಿಜೆಪಿ ಟಿಕೆಟ್ ದೊರೆಯದ ಕೃಷ್ಣಯ್ಯ ಶೆಟ್ಟಿ ತಮ್ಮ ಆಪ್ತನಿಗೆ ತಟಸ್ಥವಾಗಿರುವಂತೆ ಸೂಚಿಸಿ ಬಿಜೆಪಿಗೆ ಸರಿಯಾದ ಶಾಕ್ ನೀಡಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧೆ ಎಂದಿದ್ದ ಬಿಜೆಪಿ ನಾಯಕರಿಗೆ ಮಾಲೂರು ಮುಖಭಂಗ ಉಂಟುಮಾಡಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ