ಬಿಬಿಎಂಪಿ ಮೇಯರ್ ಚುನಾವಣೆಗೆ ಅಸ್ತು ಎಂದ ಆಯೋಗ
ಬಿಬಿಎಂಪಿಯ ಹಾಲಿ ಮೇಯರ್ ಡಿ.ವೆಂಕಟೇಶಮೂರ್ತಿ ಮತ್ತು ಹಾಗೂ ಉಪಮೇಯರ್ ಎಲ್.ಶ್ರೀನಿವಾಸ್ ಅವರ ಒಂದು ವರ್ಷದ ಅವಧಿ ಏಪ್ರಿಲ್ 26ಕ್ಕೆ ಕೊನೆಗೊಳ್ಳಲಿದೆ. ಆದ್ದರಿಂದ ಚುನಾವಣೆ ನಡೆಸಬೇಕಾಗಿತ್ತು. ರಾಜ್ಯದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮೇಯರ್ ಆಯ್ಕೆ ಬಗ್ಗೆ ಗೊಂದಲ ಉಂಟಾಗಿತ್ತು.
ಬಿಬಿಎಂಪಿಯ ಆಯುಕ್ತ ಸಿದ್ಧಯ್ಯ ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಮನವಿ ಮಾಡಿ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು. ಗುರುವಾರ ಸುದ್ದಿಗೋಷ್ಠಿ ನಡೆಸಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ನೂತನ ಮೇಯರ್ ಆಯ್ಕೆ ಮಾಡಲು ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ ಎಂದು ಹೇಳಿದ್ದರು.
ಯಾರು ಮೇಯರ್ : ಈ ಬಾರಿ ಬೆಂಗಳೂರು ಮೇಯರ್ ಪಟ್ಟ ಮಹಿಳೆಯರಿಗೆ ಮೀಸಲಾತ್ತು. ಆದರೆ, ಸರ್ಕಾರ ಮೇಯರ್ ಸ್ಥಾನದ ಮೀಸಲಾತಿಯನ್ನು ಸಾಮಾನ್ಯ ವರ್ಗಕ್ಕೆ ಬದಲಾವಣೆ ಮಾಡಿ ತಿಂಗಳ ಹಿಂದೆಯೇ ಆದೇಶ ಹೊರಿಸಿದೆ. ಆದ್ದರಿಂದ ಮಹಿಳೆಯರಿಗೆ ಮೇಯರ್ ಗಿರಿ ಕೈ ತಪ್ಪಲಿದೆ. (ರಾಜಧಾನಿಯಲ್ಲೇ ಮಹಿಳೆ ಹಕ್ಕು ಕಿತ್ಕೊಂಡ ಬಿಜೆಪಿ )
ಸದ್ಯ ಮೇಯರ್ ಸ್ಥಾನಕ್ಕೆ ಕಟ್ಟೆ ಸತ್ಯಾನಾರಾಯಣ, ಸಿ.ಕೆ.ರಾಮಮೂರ್ತಿ, ನಂಜುಡಪ್ಪ, ಗಂಗಬೈರಯ್ಯ ಹೆಸರು ಕೇಳಿಬರುತ್ತಿದೆ. ಶ್ರೀನಿವಾಸ ರೆಡ್ಡಿ, ಶಾಂತ ಕುಮಾರಿ, ಗೀತಾ ಶ್ರೀನಿವಾಸ್ ಮತ್ತು ಗೀತಾ ವಿವೇಕಾನಂದ ಸಹ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಬಹುದಾಗಿದೆ. (ಮೇಯರ್ ಪಟ್ಟಕ್ಕೆ ಮೂವರು ಗೀತಾ, ಒಬ್ಬಳು ಶಾಂತಾ)
ಉಪ ಮೇಯರ್ ಸ್ಥಾನಕ್ಕೆ ಆರ್.ಅಶೋಕ್ ಕ್ಷೇತ್ರದ ಎ.ಎಚ್.ಬಸವರಾಜು, ಜಯನಗರ ಕ್ಷೇತ್ರದ ಸೋಮಶೇಖರ್ ಪ್ರಬಲ ಅಕಾಂಕ್ಷಿಗಳಾಗಿದ್ದಾರೆ. ಯಾರು ಮೇಯರ್ ಮತ್ತು ಉಪ ಮೇಯರ್ ಗಾದಿ ಏರಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.
ಚುನಾವಣೆ ಭಯ : ವಿಧಾನಸಭೆ ಚುನಾವಣೆ ಎದುರಿಗಿಟ್ಟುಕೊಂಡು ಮೇಯರ್ ಸ್ಥಾನದ ಚುನಾವಣೆ ನಡೆಸಿದರೆ, ಹುದ್ದೆಗಳ ವಂಚಿತರು ವಿಧಾನಸಭೆ ಚುನಾವಣೆ ಮೇಲೆ ತಮ್ಮ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಮೇಯರ್ ಸ್ಥಾನದ ಚುನಾವಣೆ ನಡೆಸಲು ಸರ್ಕಾರ ವಿಳಂಬ ಮಾಡುವ ಸಾಧ್ಯತೆ ಇದೆ.
ಸರ್ಕಾರ ಮೇಯರ್ ಮತ್ತು ಉಪಮೇಯರ್ ಸ್ಥಾನದ ಮೀಸಲಾತಿ ಬದಲಾವಣೆ ಮಾಡಿದ್ದು, ಇದನ್ನು ಪ್ರಶ್ನಿಸಿ ಯಾರಾದರೂ ನ್ಯಾಯಾಲಯದ ಮೆಟ್ಟಿಲೇರಿದರೆ, ಚುನಾವಣೆಗೆ ಸ್ವಲ್ಪ ಹಿನ್ನೆಡೆ ಉಂಟಾಗಬಹುದಾಗಿದೆ. ಆಯೋಗದ ಅನುಮತಿ ದೊರೆತರೂ ಸರ್ಕಾರ ಚುನಾವಣೆ ನಡೆಸುತ್ತದೆಯೇ ಎಂಬುದು ಸದ್ಯದ ಪ್ರಶ್ನೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ