ಶೋಭಾ ಕರಂದ್ಲಾಜೆ ಕ್ಷೇತ್ರದಲ್ಲಿ ಕೆಜೆಪಿ ಅಭ್ಯರ್ಥಿಯೇ ಇಲ್ಲ!
ಹಾಗೆ ನೋಡಿದರೆ ಸಚಿವೆಯಾಗಿ ಶೋಭಾ ಗಣನೀಯ ಸೇವೆ ಸಲ್ಲಿಸಿ, ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಗಳಿಸಿದ್ದರು. ಕೆಜೆಪಿ ಅದನ್ನು ಬಂಡವಾಳ ಮಾಡಿಕೊಳ್ಳಬೇಕಿತ್ತು. ಆದರೆ ಯಾಕೋ ನಿರ್ಲಕ್ಷಿಸಿಬಿಟ್ಟಿದೆ.
ಬಿಜೆಪಿ ಬಿಟ್ಟು ಕೆಜೆಪಿ ಕೈಹಿಡಿದ ಶೋಭಾ ಕ್ಷೇತ್ರವನ್ನೂ ಬದಲಾಯಿಸಿ ರಾಜಾಜಿನಗರದಿಂದ ಈ ಬಾರಿ ಸ್ಪರ್ಧಿಸುತ್ತಿದ್ದಾರೆ. ಆದರೆ ಈ ಮಧ್ಯೆ, ಅದ್ಯಾಕೋ ತಮ್ಮ ಹಳೆಯ ಕ್ಷೇತ್ರದ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ. ಯಶವಂತಪುರ ಕ್ಷೇತ್ರಕ್ಕೆ ಅಬ್ಯರ್ಥಿಯನ್ನು ಹಾಕಲು ಮೀನಾಮೇಶ ಎಣಿಸಿದ ಪಕ್ಷ ಕೊನೆಯ ಕ್ಷಣದಲ್ಲಿ ಪ್ರಮೀಳಾ ಗೌಡ ಅವರಿಗೆ ಬಿ ಫಾರಂ ನೀಡಿ, ಅರ್ಜೆಂಟಾಗಿ ಹೋಗಿ ನಾಮ ಪತ್ರ ಸಲ್ಲಿಸಿ ಎಂದು ಕೆಜೆಪಿ ಮಂದಿ ಆಜ್ಞಾಪಿಸಿದ್ದಾರೆ.
ಎದ್ನೋಬಿದ್ನೋ ಎಂದು ಪ್ರಮೀಳಾ ಅವರು ಚುನಾವಣಾಧಿಕಾರಿ ಕಚೇರಿಗೆ ತಲುಪಿದಾಗ ನಾಮಪತ್ರ ಸಲ್ಲಿಕೆ ಅವಧಿ ಮುಗಿಯಲು ಕೇವಲ 10 ನಿಮಿಷ ಉಳಿದಿತ್ತು. ಆದರೂ ನಾಮಪತ್ರ ಸಲ್ಲಿಸಿದ್ದಾರೆ. ಆದರೂ ಖಡಕ್ ಚುನಾವಣಾಧಿಕಾರಿ ರಂಗಪ್ಪ ಅವರು ನಾಮಪತ್ರ ಪರಿಶೀಲಿಸುತ್ತಿರುವಾಗಲೇ ಅವಧಿ ಮುಗಿದುಹೋಗಿದೆ.
'ನಿಮ್ಮ ಸಮಯ ಮುಗಿಯಿತು ಮೇಡಂ. ಜತೆಗೆ ನಿಉಮ್ಮ ಬಳಿ ಅರ್ಜಿಯೇ ಇಲ್ಲ. ಕೇವಲ ಬಿ ಫಾರಂ ಮತ್ತಿತರ ದಾಖಲಾತಿಗಳು ಇವೆಯಷ್ಟೇ. ಆದ್ದರಿಂದ ತಾವಿನ್ನು ಹೋಗಬಹುದು' ಎಂದು ರಂಗಪ್ಪ ಅವರು ಪ್ರಮೀಳಾರನ್ನು ವಾಪಸು ಕಳಿಸುವ ಮೂಲಕ ಈ ಬಾರಿ ಯಶವಂತಪುರಕ್ಕೆ ಕೆಜೆಪಿ ಅಭ್ಯರ್ಥಿಯೇ ಇಲ್ಲವಾಗಿದೆ.
ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಮತ್ತೊಂದು ಮಜಾ ಸಂಗತಿಯಿದೆ. ಏನಪಾ ಅಂದರೆ ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ನೀಡಲು, ಅವರಿಗೆ ಮತ ಬೀಳುವುದನ್ನು ತಪ್ಪಿಸಲು ಎದುರಾಳಿ ಪಕ್ಷವು ಅದೇ ಹೆಸರಿನ ಅಭ್ಯರ್ಥಿಯನ್ನು ನಿಲ್ಲಿಸಿದೆ. ಎಸ್ ಟಿ ಸೋಮಶೇಖರ್ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ. ಆದರೆ ಅವರ ವಿರುದ್ಧ ಆಟೋ ಚಾಲಕರ ಸಂಘದ ಅಧ್ಯಕ್ಷ ಎಸ್ ಪಿ ಸೋಮಶೇಖರ್ ಅವರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.