ಮೈಸೂರಿನಿಂದ ಮಂಗಳಮುಖಿ ಚುನಾವಣೆ ಅಖಾಡಕ್ಕೆ
ಮಂಗಳವಾರ ನರಸಿಂಹರಾಜ ಕ್ಷೇತ್ರದಿಂದ ಭಾರತೀಯ ಅಂಬೇಡ್ಕರ್ ಜನತಾ ಪಕ್ಷದ ಅಭ್ಯರ್ಥಿಯಾಗಿ ಮಂಗಳಮುಖಿ ಚಾಂದಿನಿ (35) ನಾಮಪತ್ರ ಸಲ್ಲಿಸಿದ್ದಾರೆ. ಕ್ಷೇತ್ರದಲ್ಲಿ ಮೂರು ಬಾರಿ ಗೆಲುವು ಸಾಧಿಸಿರುವ ಹಿರಿಯ ಕಾಂಗ್ರೆಸ್ ಮುಖಂಡ ತನ್ವೀರ್ ಸೇಠ್ ಅವರ ಎದುರಾಳಿಯಾಗಿ ಚಾಂದಿನಿ ಸ್ಪರ್ಧಿಸುತ್ತಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈಸೂರು ಮಹಾನಗರ ಪಾಲಿಕೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದರು. ನಂತರ ನಾಮಪತ್ರ ಹಿಂಪಡೆದು ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಸದ್ಯ ನೂತನವಾಗಿ ರಾಜ್ಯದಲ್ಲಿ ಸ್ಥಾಪನೆಯಾದ ಭಾರತೀಯ ಅಂಬೇಡ್ಕರ್ ಜನತಾ ಪಕ್ಷ ಅಭ್ಯರ್ಥಿಯಾಗಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.
ಪಕ್ಷದ ಜಿಲ್ಲಾಧ್ಯಕ್ಷ ದೊಡ್ಡಮಾದಯ್ಯ, ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಾಲಾ ಕುಮಾರಿ, ನಿಶಾ, ಅನಿತಾ ಮುಂತಾದವರೊಂದಿಗೆ ಚಾಂದಿನಿ ಮಂಗಳವಾರ ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ.
ನಮಗೆ ಆದ್ಯತೆ ದೊರಕುತ್ತಿಲ್ಲ : ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಚಾಂದನಿ, ನಮಗೆ ಸೂಕ್ರ ಪ್ರಾತಿನಿಧ್ಯ ದೊರೆಯುತ್ತಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನಮಗೆ ಮಾಸಿಕವಾಗಿ ಪಿಂಚಣಿ ನೀಡುವ ಯೋಜನೆ ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಅದು ಕಾರ್ಯಗತಗೊಂಡಿಲ್ಲ ಎಂದು ಆರೋಪಿಸಿದರು.
ನಮಗೆ ಸರಿಯಾದ ಸೌಕರ್ಯಗಳು ಸಿಗುತ್ತಿಲ್ಲ. ರೇಷನ್ ಕಾರ್ಡ್, ಆಧಾರ್ ಕಾರ್ಡ್ ನೀಡಿಲ್ಲ. ಸಮಾಜದ ಜನರು ನಮ್ಮನ್ನು ಸಮಾನರಂತೆ ಕಾಣಬೇಕು ಎಂದು ಅವರು ಹೇಳಿದರು. ಮೈಸೂರು ಜಿಲ್ಲೆಯಲ್ಲಿ ಸುಮಾರು 10,000 ಮಂಗಳಮುಖಿಯರಿದ್ದಾರೆ. ಅವರಿಗೆ ಅಗತ್ಯ ಸೌಲಭ್ಯ ಒದಗಿಸಲು ಪ್ರಯತ್ನಿಸುವುದಾಗಿ ಹೇಳಿದರು.
ಬಿಎ ಪದವಿ ಪಡೆದಿರುವ ಚಾಂದಿನಿ ನಮ್ಮಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡಿದ ಅನೇಕರಿದ್ದಾರೆ. ಆದರೆ, ಯಾರಿಗೂ ಸರಿಯಾದ ಉದ್ಯೋಗ ದೊರೆಯುತ್ತಿಲ್ಲ. ಭಿಕ್ಷೆ ಬೇಡಿ ಜೀವನ ಸಾಗಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಅವರು ಹೇಳಿದರು.
ಸ್ಥಳೀಯರ ಸಹಾಯ : ನರಸಿಂಹರಾಜ ಕ್ಷೇತ್ರದ ಸ್ಥಳೀಯರು ಚಾಂದನಿ ಬೆಂಬಲಕ್ಕೆ ನಿಂತಿದ್ದಾರೆ. ಸ್ಥಳೀಯರಾದ ನೂರು ಅಹಮದ್ ಚಾಂದಿನಿಗೆ ಠೇವಣಿ ಹಣ ಇಡಲು ಸಹಾಯ ಮಾಡಿದ್ದಾರೆ. ನೂತನವಾಗಿ ಸ್ಥಾಪಿತವಾದ ಪಕ್ಷವಾದ್ದರಿಂದ ಚುನಾವಣಾ ಚಿಹ್ನೆ ಇನ್ನೂ ದೊರೆಯಬೇಕಾಗಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ