ಭಂಡಾಯ: ವಾಕರಿಕೆ ಬರಿಸುತ್ತಿರುವ ಉಮೇದುವಾರಿಕೆ
ಪರಿಸ್ಥಿತಿ ಯಾವ ಮಟ್ಟಕ್ಕೆ ಬಂದು ನಿಂತಿದೆಯೆಂದರೆ ಅದು ದೊಡ್ಡಗುಣದ ಅಂಬರೀಷೇ ಆಗಿರಬಹುದು ಅಥವಾ ಅವರ ಪಕ್ಕದ ಮತ್ತೊಬ್ಬ ಸಜ್ಜನ ಕೆಆರ್ ಪೇಟೆ ಕೃಷ್ಣ ಅವರೇ ಆಗಿರಬಹುದು, ಒಟ್ಟಾರೆಯಾಗಿ ಒಂದು ಟಿಕೆಟಿಗಾಗಿ ಈ ಜನನಾಯಕರು ನಡೆಸುತ್ತಿರುವ ಭಂಡಾಯ, ಬಂಡಾಯ, ದೊಂಬರಾಟಗಳನ್ನು ನೋಡಿದರೆ ಉಮೇದುವಾರಿಕೆ ಎಂಬುದು ನಿಜಕ್ಕೂ ವಾಕರಿಕೆ ಬರಿಸುತ್ತಿದೆ.
ಈ ದೊಂಬರಾಟ, ಇವರು ಸಲ್ಲಿಸುವ ರಾಮ-ಕೃಷ್ಣ ಲೆಕ್ಕದ ಆಸ್ತಿ ವಿವರ ಘೋಷಣೆಯನ್ನು ನೋಡಿದಾಗ... ನಿನ್ನೆ ಸುವರ್ಣ ನ್ಯೂಸ್ ಚಾನೆಲಿನಲ್ಲಿ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಮಾಜಿ ತೆರಿಗೆ ಅಧಿಕಾರಿ, ನೈಜ ಕಲಾವಿದ ಸೇತೂರಾಂ ಅವರು ಹೇಳಿದಂತೆ 'ಜನಸಾಮಾನ್ಯ ಸೇವೆ ಮಾಡಲು ಸೋಕಾಲ್ಡ್ ಜನನಾಯಕರು ಇಷ್ಟೆಲ್ಲ ಕಷ್ಟಪಟ್ಟು ಟಿಕೆಟ್ ಗಿಟ್ಟಿಸಬೇಕಾ?' ಎಂಬ ಪ್ರಶ್ನೆ ಮೂಡುತ್ತದೆ.
ಗೆದ್ದು ಸೋತ ಕಾಂಗ್ರೆಸ್ !: ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದೇ ಅದಕ್ಕೆ ಮುಳುವಾಗುವ ಸಾಧ್ಯತೆಯಿದೆ. ಏಕೆಂದರೆ ವಿಧಾನಸಭೆ ಚುನಾವಣೆ ಆರಂಭಕ್ಕೂ ಮುನ್ನವೇ ಕಾಂಗ್ರೆಸ್ ಗೆದ್ದೇ ಬಿಟ್ಟಿದೆ ಎಂಬ ವಾತಾವರಣ ನಿರ್ಮಾಣಗೊಂಡುಬಿಟ್ಟು, ಆ ಪಕ್ಷವನ್ನು ಹೈರಾಣಗೊಳಿಸಿದೆ.
ಇದಕ್ಕೆ ವಿರುದ್ಧವಾಗಿ ಆಡಳಿತಾರೂಢ ಬಿಜೆಪಿ ತನ್ನ ಲೆಕ್ಕಾಚಾರ ತಪ್ಪಿ, ಕೊನೆಯ ಹಂತದಲ್ಲಿ ಸೂಕ್ತ ಅಭ್ಯರ್ಥಿಗಳನ್ನು ನಿಲ್ಲಿಸಲಾಗದೆ ಪರದಾಡುವಂತಹ ಪರಿಸ್ಥಿತಿ ಎದುರಿಸುವಂತಾಗಿದೆ. ಎರಡೂ ಸ್ವಯಂಕೃತಾಪರಾಧವೇ. ಆದರೆ ಈ ಪರಿಸ್ಥಿತಿಗೆ ಹೇತುವಾದ ಎನ್ನಬಹುದಾದ ಇತರೆ ಪಕ್ಷಗಳು ಸುಮ್ಮನೆ ಮಜಾ ತೆಗೆದುಕೊಳ್ಳುತ್ತಿವೆ. ಅದು ಕೆಜೆಪಿಯಾದರೂ ಆಗಿರಬಹುದು ಅಥವಾ ಜೆಡಿಎಸ್ ಆದರೂ ಅಷ್ಟೇ.
ಅಂಬರೀಷ್ ಆಟ ಸಮೂಹ ಸನ್ನಿಯಾಗಿ ಮಂಡ್ಯ, ಚಿಕ್ಕಬಳ್ಳಾಪುರ, ಬಳ್ಳಾರಿ, ಭದ್ರಾವತಿ, ದಾವಣಗೆರೆ, ಕಾಪು, ಹೆಬ್ಬಾಳ, ಬಸವನಗುಡಿ, ಮುಳಬಾಗಿಲು, ಕೆಆರ್ ಪುರಂ, ಚನ್ನಪಟ್ಟಣ ಮುಂತಾದ ಕಡೆಗಳಲ್ಲೂ ಹಬ್ಬಿದ್ದು ಈ ನಾಡಿನ ದೌರ್ಭಾಗ್ಯವೇ ಸರಿ.
ಜಸ್ಟ್, ನಾಮಿನೇಷನ್ ಹಂತದಲ್ಲೇ ಹಿಂಗೆ ಇನ್ನು ಮುಂದಿದೆ ಮಾರಿ ಹಬ್ಬವೆಂಬಂತೆ ಮುಂದಿನ ದಿನಗಳಲ್ಲಿ ಈ ನಾಡಿಗೆ ಏನು ಕಾದಿದೆಯೋ. ಪಕ್ಷಗಳ ಮಾದರಿಯಲ್ಲೇ ಮತದಾರ ಸಹ ಗೊಂದಲಕ್ಕೀಡಾಗಿ ಹಂಗಿನರಮನೆ ನಿರ್ಮಾಣವಾದರೆ, ತಾಯೆ ಭುವನೇಶ್ವರಿಯೇ ಕಾಪಾಡಬೇಕು ಕರುನಾಡನ್ನು. ಆದರೆ ಜಾಣ ಮತದಾರ ಹಾಗೆ ಮಾಡಲಾರ ಎಂಬ ಆಶಾಭಾವ ಬೇರೂರಿದೆ.