ಆಡಳಿತಾರೂಢ ಪಕ್ಷಕ್ಕೆ ಇನ್ನೂ ಅಭ್ಯರ್ಥಿಗಳ ಕೊರತೆ
ಬಿಟಿಎಂ ಲೇಔಟ್, ಯಶವಂತಪುರ, ಕಲಘಟಗಿ, ಮುದೋಳ, ನಾಗಠಾಣ, ದೇವನಹಳ್ಳಿ ಸೇರಿದಂತೆ ಇನ್ನೂ 12 ಅಭ್ಯರ್ಥಿಗಳ ಹೆಸರುಗಳನ್ನು ಬಿಜೆಪಿ ಪ್ರಕಟಿಸಬೇಕಿದೆ. ಆದರೆ ಅದು ಕಗ್ಗಂಟಾಗಿ ಉಳಿದಿದೆ. ಪಟ್ಟಿ ಕಟ್ಟಲು ದೆಹಲಿಯಿಂದ ಹಾರಿಬಂದ ಅರುಣ್ ಜೇಟ್ಲಿಗೂ ಅದು ಸಾಧ್ಯವಾಗದೆ ಉಳಿದ ಹೆಸರುಗಳನ್ನು ನೀವೇ ಪ್ರಕಟಿಸಿಕೊಳ್ಳಿ ಎಂದು ಹೇಳಿ ಹೊರಟುಹೋಗಿದ್ದಾರೆ.
ಜತೆಗೆ, ಒಂದಿಬ್ಬರಾದರೂ ಕಾಂಗ್ರೆಸ್/ಜೆಡಿಎಸ್ ನಿಂದ ವಲಸೆ ಬರುವ ಆಸೆ/ನಿರೀಕ್ಷೆಯಲ್ಲೂ ಇದೆ. ದೇವನಹಳ್ಳಿಯಿಂದ ಜಿ. ಚಂದ್ರಣ್ಣ ಕಣಕ್ಕಿಳಿಯುವ ಸಾಧ್ಯತೆಯಿದ್ದರೆ ಗೋವಿಂದ ಕಾರಜೋಳ ಮುಧೋಳದಿಂದ ನಾಮಪತ್ರ ಸಲ್ಲಿಸಲು ಸನ್ನದ್ಧರಾಗಿದ್ದಾರೆ.
ಆಡ್ವಾಣಿ ಅವರ ಮಾತಿಗೆ ಕಟ್ಟುಬಿದ್ದು ಹೆಬ್ಬಾಳ, ಮಾಲೂರು ಮತ್ತು ಕೆಜಿಎಫ್ ಕ್ಷೇತ್ರಗಳಲ್ಲಿ ಕಳಂಕಿತ ಹಾಲಿ ಶಾಸಕರಿಗೆ ಟಿಕೆಟ್ ನೀಡದೆ ಹೋದರೂ ಆ ಶಾಸಕರ ವಿಶ್ವಾಸ ಉಳಿಸಿಕೊಳ್ಳಲು ಅಳಿಯ ಅಲ್ಲ ಮಗಳ ಗಂಡ ಎಂಬಂತೆ ಆಯಾ ಶಾಸಕರು ಸೂಚಿಸುವಂತೆ ಅವರ ಕುಟಂಬಸ್ಥರಿಗೆ ಟಿಕೆಟ್ ನೀಡಬೇಕು ಎಂಬ ಆಲೋಚನೆಯೂ ರಾಜ್ಯ ಬಿಜೆಪಿ ಮಂದಿಗೆ ಇದೆ. ಆದರೆ ಮಾಲೂರಿನ ಕೃಷ್ಣಯ್ಯ ಶೆಟ್ಟರು ಗೋವಿಂದಾ ಅಂತ ಅದಾಗಲೇ ಬಿಜೆಪಿಗೆ ರಾಜೀನಾಮೆ ಬಿಸಾಕಿ, ಸ್ವತಂತ್ರರಾಗಿದ್ದಾರೆ.
ಆದರೆ ಕಟ್ಟಾ ಮತ್ತು ಸಂಪಂಗಿ ಪರಿಸ್ಥಿತಿ ಹಾಗಿಲ್ಲ. ಸಂಪಂಗಿ ಅವರ ತಾಯಿ ರಾಮಕ್ಕ ಅದಾಗಲೇ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿಯಾಗಿದೆ. ಜತೆಗೆ ಇವರಿಬ್ಬರೂ ಪಕ್ಷೇತರರಾಗಿ ಗೆದ್ದುಬಂದ ಮೇಲೆ ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ ಎಂಬ ವಾಗ್ದಾನವನ್ನೂ ನೀಡಲಾಗಿದೆ ಎಂಬ ಮಾತೂ ಕೇಳಿಬಂದಿದೆ.
ಇನ್ನು ಬಿಟಿಎಂಗೆ ನಾರಾಯಣ ರಾಜು ಮತ್ತು ಯಶವಂತಪುರಕ್ಕೆ ಶ್ರೀನಿವಾಸ್ ಅಥವಾ ಚಕ್ರಪಾಣಿ ಅವರನ್ನು ನಿಲ್ಲಿಸುವ ಮಾತೂ ಕೇಳಿಬರುತ್ತಿದೆ. ಆದರೆ ಉಳಿದ ಕ್ಷೇತ್ರಗಳಲ್ಲಿ ಸಂಭಾವ್ಯ ಅಭ್ಯರ್ಥಿಗಳು ಈಗಾಗಲೇ ವಿರೋಧ ಪಕ್ಷಗಳಲ್ಲಿ ಕಾಣಿಸಿಕೊಂಡಿರುವುದರಿಂದ ಕೊನೆಯ ಕ್ಷಣದಲ್ಲಿ ಅರ್ಹ ಅಭ್ಯರ್ಥಿಗಳು ದೊರೆಯದೆ ಆಡಳಿತಾರೂಢ ಪಕ್ಷ ಪರಿತಪಿಸುವಂತಾಗಿದೆ. ಆದರೆ ಯಾವುದಕ್ಕೇ ಆಗಲಿ ಇನ್ನು ಕೇವಲ 2 ದಿನ ಬಾಕಿಯಿರುವುದರಿಂದ ಪಕ್ಷದ ತಿಣುಕಾಟ ಹೆಚ್ಚಾಗಿದೆ.