ಶಾಂತಿನಗರದಿಂದ ಮೇಯರ್ ಬಿಜೆಪಿ ಅಭ್ಯರ್ಥಿ?
ಬಿಜೆಪಿ ಮೂಲಗಳ ಮಾಹಿತಿ ಪ್ರಕಾರ ಮೇಯರ್ ವೆಂಕಟೇಶಮೂರ್ತಿ ಅವರಿಗೆ ಶಾಂತಿನಗರ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಹೈ ಕಮಾಂಡ್ ನಾಯಕರು ಮೇಯರ್ ಸ್ಪರ್ಧೆಗೆ ಅಸ್ತು ಎಂದಿದ್ದು, ಇಂದು ಸಂಜೆ ಅಥವ ನಾಳೆ ಬಿಡುಗಡೆಗೊಳ್ಳಲು ಬಿಜೆಪಿ ಪಟ್ಟಿಯಲ್ಲಿ ವೆಂಕಟೇಶಮೂರ್ತಿ ಅವರ ಹೆಸರು ಪ್ರಕಟಗೊಳ್ಳಲಿದೆ.
ಮೇಯರ್ ವೆಂಕಟೇಶಮೂರ್ತಿ ಅವರ ಅಧಿಕಾರವಧಿ ಏಪ್ರಿಲ್ 26ಕ್ಕೆ ಕೊನೆಗೊಳ್ಳಲಿದೆ. ಮೇಯರ್ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಹಿಂದಿನಿಂದಲೂ ಕೇಳಿಬಂದಿತ್ತು. ಯಶವಂತಪುರ, ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂಬ ಸುದ್ದಿಗಳು ಹರಡಿತ್ತು.
ಆದರೆ, ಭಾನುವಾರ ಬೆಜಪಿ ಕೆಚೇರಿಯಲ್ಲಿ ನಡೆಯುತ್ತಿರುವ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಮೇಯರ್ ವೆಂಕಟೇಶಮೂರ್ತಿ ಅವರಿಗೆ ಶಾಂತಿನಗರದ ಕ್ಷೇತ್ರದಿಂದ ಟಿಕೆಟ್ ನೀಡಲು ಒಪ್ಪಿಗೆ ನೀಡಿದ್ದಾರೆ. ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹ್ಯಾರೀಸ್ ಅವರನ್ನು ಸೋಲಿಸಿ, ಕ್ಷೇತ್ರ ವಶಪಡಿಸಿಕೊಳ್ಳುವುದು ಬಿಜೆಪಿ ಚಿಂತನೆ.
ಅಶೋಕ್ ಪ್ರಭಾವ : ಮೇಯರ್ ವೆಂಕಟೇಶಮೂರ್ತಿ ಅವರಿಗೆ ಟಿಕೆಟ್ ದೊರಕುವಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಉಪ ಮುಖ್ಯಮಂತ್ರಿ ಮತ್ತು ಬೆಂಗಳೂರು ಉಸ್ತುವಾರಿ ಸಚಿವ ಆರ್.ಅಶೋಕ್ ಎಂಬುದು ಗುಟ್ಟಾಗಿ ಉಳಿದಿಲ್ಲ. ಆರ್.ಅಶೋಕ್ ಅವರು ಆಪ್ತರಾಗಿರುವ ವೆಂಕಟೇಶಮೂರ್ತಿ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಕೊನೆಗೂ ಅಶೋಕ್ ಯಶಸ್ವಿಯಾಗಿದ್ದಾರೆ.
ಕ್ಷೇತ್ರ ಬದಲು : ಮೇಯರ್ ಅವರ ಸ್ವ ಕ್ಷೇತ್ರ ಕತ್ರಿಗುಪ್ಪೆ ಅವರು ಹತ್ತಿರದ ವಿಧಾನಸಭಾ ಕ್ಷೇತ್ರವಾದ ಪದ್ಮನಾಭ ನಗರ ಅಥವ ಬಸವನಗುಡಿಯಿಂದ ಸ್ಪರ್ಧಿಸಬೇಕಾಗಿತ್ತು. ಆದರೆ, ಅಶೋಕ್ ಮತ್ತು ರವಿ ಸುಬ್ರಮಣ್ಯ ಅವರಿಂದಾಗಿ ವೆಂಕಟೇಶ ಮೂರ್ತಿ ಅವರಿಗೆ ಆ ಕ್ಷೇತ್ರಗಳು ದೊರಕಿಲ್ಲ.
ಆದ್ದರಿಂದ ಶಾಂತಿನಗರ ಕ್ಷೇತ್ರದಲ್ಲಿ ಟಿಕೆಟ್ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಸ್ಥಳೀಯ ಬಿಜೆಪಿ ಕಾರ್ಯಕರ್ತರು ಮೇಯರ್ ಗೆ ಬೆಂಬಲ ನೀಡುತ್ತಾರೋ? ಅಥವ ಮತ್ತೊಂದು ಬಂಡಾಯ ಹುಟ್ಟು ಹಾಕುತ್ತಾರೋ? ಎಂದು ಕಾದು ನೋಡಬೇಕು.
ಎಲ್ಲಾ ಪಕ್ಷಗಳ ಕೆಲವು ಬಿಬಿಎಂಪಿ ಸದಸ್ಯರು ಟಿಕೆಟ್ ಬಯಸಿ ಪಕ್ಷದ ನಾಯಕರ ಮೇಲೆ ಪ್ರಭಾವ ತಂದಿದ್ದರು ಅವರಿಗೆ ಟಿಕೆಟ್ ದೊರೆಯುವ ಬಗ್ಗೆ ಯಾವುದೇ ಪಕ್ಷಗಳು ಮಾತನಾಡುತ್ತಿಲ್ಲ. ಒಟ್ಟಿನಲ್ಲಿ ಮೇಯರ್ ಇಂದಿನ ಕಾರ್ಪೋರೇಟರ್ ಮುಂದಿನ ಶಾಸಕ ಎಂಬ ಮಾತು ನಿಜವಾಗಿಸಲು ಹೊರಟಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ