ಬಿಜೆಪಿಗೆ ಬಿಸಿತುಪ್ಪವಾದ ಕಟ್ಟಾ, ಕೃಷ್ಣಯ್ಯ ಶೆಟ್ಟಿ
ಇಂತಹ ಇಕ್ಕಟ್ಟಿನ ಪರಿಸ್ಥತಿಗೆ ಸಿಲುಕಿರುವ ಮತ್ತೊಬ್ಬ ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಕೆಜಿಎಫ್ ಶಾಸಕ ವೈ. ಸಂಪಂಗಿ ಬದಲಾಗಿ ಅವರ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡುವುದಾಗಿ ತೀರ್ಮಾನಿಸಿದೆ. ಆದರೆ, ಕಟ್ಟಾ ಮತ್ತು ಕೃಷ್ಣಯ್ಯ ಶೆಟ್ಟಿ ಕುಟುಂಬದವರಿಗೆ ಟಿಕೆಟ್ ನೀಡುವುದಾದದರೆ ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಶನಿವಾರ ತಡರಾತ್ರಿಯವರೆಗೂ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಟ್ಟಾ ಮತ್ತು ಕೃಷ್ಣಯ್ಯ ಶೆಟ್ಟಿಗೆ ಟಿಕೆಟ್ ನೀಡಿಕೆ ಬಗ್ಗೆ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ಆದ್ದರಿಂದ ಇಂದು ಬೆಂಗಳೂರಿಗೆ ಆಗಮಿಸುವ ಬಿಜೆಪಿ ವರಿಷ್ಠ ಅರುಣ್ ಜೇಟ್ಲಿಯವರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದೆ.
ಆನಂದ್ ಸಿಂಗ್ ಗೆ ಟಿಕೆಟ್ : ಬಿಜೆಪಿ ತೊರೆದು ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದ ಹೊಸಪೇಟೆ ವಿಜಯನಗರ ಕ್ಷೇತ್ರದ ಶಾಸಕ ಮತ್ತು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ನಿಲುವು ಬದಲಿಸಿದ್ದಾರೆ. ಶನಿವಾರ ಸಿಎಂ ಶೆಟ್ಟರ್ ಅವರನ್ನು ಭೇಟಿ ಮಾಡಿ ಪಕ್ಷದಲ್ಲೇ ಮುಂದುವರಿಯುತ್ತೇನೆ, ಟಿಕೆಟ್ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಇಂದು ಬಿಡುಗಡೆಯಾಗಲಿರುವ ಬಿಜೆಪಿ ಅಂತಿಮ ಪಟ್ಟಿಯಲ್ಲಿ ಆನಂದ್ ಸಿಂಗ್ ಗೆ ಟಿಕೆಟ್ ದೊರೆಯುತ್ತದೆ ಎಂಬುದು ಪಕ್ಷದ ಮೂಲಗಳ ಮಾಹಿತಿ. ಬಳ್ಳಾರಿಯ ಸೋಮಶೇಖರ ರೆಡ್ಡಿ ಬಿಜೆಪಿಯಲ್ಲೇ ಮುಂದುವರಿಯುವ ಇಲ್ಲವೇ ಪಕ್ಷೇತರರಾಗಿ ಸ್ಪರ್ಧಿಸಲು ಆಲೋಚನೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.
ಸುರೇಶ್ ಬಾಬು ಯೂ ಟರ್ನ್ : ಬಿಜೆಪಿಗೆ ರಾಜೀನಾಮೆ ನೀಡಿರುವ ಕಂಪ್ಲಿ ಶಾಸಕ ಸುರೇಶ್ಬಾಬು ಕೆಜೆಪಿ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಸುರೇಶ್ ಬಾಬು ಅವರಿಗೆ ಕಂಪ್ಲಿ ಕ್ಷೇತ್ರದಿಂದಲೇ ಬಿಎಸ್ಆರ್ ಕಾಂಗ್ರೆಸ್ ಟಿಕೆಟ್ ನೀಡಿದೆ. ಆದರೆ, ಅವರು ಪಕ್ಷ ಸೇರುವುದು ಅನುಮಾನ ಎಂದು ತಿಳಿದು ಬಂದಿದೆ.
ಬಿಎಸ್ಆರ್ ಗೆ ಸಂಕಷ್ಟ : ಸೋಮಶೇಖರ ರೆಡ್ಡಿ, ಸುರೇಶ್ ಬಾಬು, ನಟಿ ರಕ್ಷಿತಾ ಮುಂತಾದವರು ಪಕ್ಷ ಬಿಡುವ ಮಾತುಗಳನ್ನು ಆಡುತ್ತಿದ್ದಾರೆ. ಇದರಿಂದಾಗಿ ಶ್ರೀರಾಮುಲು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಬಿಜೆಪಿ ಜೊತೆ ವಿಲೀನದ ಮಾತುಕತೆ ನಡೆಸಲು ಶೆಟ್ಟರ್ ಭೇಟಿ ಮಾಡಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಏ.17 ಕೊನೆಯ ದಿನವಾಗಿದೆ ಆದರೆ, ಶಾಸಕರು ಯಾವ ಪಕ್ಷ ಸೇರಬೇಕು ಎಂಬ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ. ಆದ್ದರಿಂದ ರಾಜ್ಯ ರಾಜಕೀಯ ಗೊಂದಲದ ಗೂಡಾಗಿದೆ.
ಎರಡು ದಿನಗಳಲ್ಲಿ ನಾಯಕರ ಪಕ್ಷ ಸೇರ್ಪಡೆ ಬಗ್ಗೆ ಅಂತಿಮ ನಿರ್ಧಾರ ಹೊರಬೀಳಲಿದ್ದು, ನಂತರ ಯಾರು ಚುನಾವಣೆಗೆ ಯಾವ ಪಕ್ಷದಿಂದ ಸ್ಪರ್ಧಿಸಲಿದ್ದಾರೆ ಎಂಬುದು ಸ್ಪಷ್ಡವಾಗಲಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ