ಹೌದು, ರಾಹುಲ್ ಏಕೆ ಕರ್ನಾಟಕದತ್ತ ತಲೆಹಾಕುತ್ತಿಲ್ಲ?
ನವದೆಹಲಿ, ಏ.13: ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವೇನೋ ಸ್ಥಳೀಯ ಸಂಸ್ಥೆ ಚುನಾವಣೆಯಗಳಲ್ಲಿ ಜಯಭೇರಿ ಬಾರಿಸಿ ಹೊಸ ಹುಮ್ಮಸ್ಸಿನೊಂದಿಗೆ ವಿಧಾನಸಭೆ ಕಣಕ್ಕೆ ಪ್ರವೇಶಿಸಿದೆ. ಆದರೆ ಈ ಸಂದರ್ಭದಲ್ಲಿ ಪಕ್ಷದ ಅಗ್ರನಾಯಕರಾಗಿ ಮುಂಚೂಣಿಯಲ್ಲಿ ನಿಂತು ಪಕ್ಷವನ್ನು ಮುನ್ನಡೆಸಬೇಕಿದ್ದ ಯುವನೇತ ರಾಹುಲ್ ಗಾಂಧಿಯ ಸುಳಿವೇ ಇಲ್ಲ. ಹೀಗೇಕೆ? ಅವರನ್ನು ಕಾಡುತ್ತಿರುವ ಆತಂಕ/ಭಯವೇನು? ಎಂದು ಖುದ್ದು ಪಕ್ಷದ ಕಾರ್ಯಕರ್ತರೇ ಕೇಳುವಂತಾಗಿದೆ.
Ofcourse, ಚುನಾವಣೆ ಇನ್ನೂ ಬಹುದೂರವಿದೆ. ಕೊನೆಯ ಘಳಿಗೆಯಲ್ಲಿ ರಾಯರು ಬಂದು ಕೈಬೀಸಿ ಹೋಗಬಹುದು ಎಂದು ಪಕ್ಷದ ಸ್ಥಳೀಯ ನಾಯಕರು ಕೈಕಟ್ಟಿ ಕುಳಿತಿದ್ದಾರೆ. ಆದರೆ ಕಾರ್ಯಕರ್ತರಲ್ಲಿ ಆ ವಿಶ್ವಾಸ ಉಳಿದಿಲ್ಲ.
ಹಾಗೆ ನೋಡಿದರೆ ಸ್ಟಾರ್ ಕಾಂಪೇನರ್ಸ್ ಅಂತಾಗಲಿ ರಾಷ್ಟ್ರಮಟ್ಟದ ವರ್ಚಸ್ವೀ ನಾಯಕರಾಗಲಿ ಯಾರೂ ಇತ್ತ ಸುಳಿದಾಡುತ್ತಿಲ್ಲ. ಸ್ಥಳೀಯ ನಾಯಕರೇ ಆಗಾಗ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಹಾಗೆ ನೋಡಿದರೆ ರಾಹುಲ್ ಗಾಂಧಿಗೆ ಪಕ್ಷದ ನೂತನ ರಾಷ್ಟ್ರೀಯ ಉಪಾಧ್ಯಕ್ಷರಾದ ಮೇಲೆ ಇದು ಮೊದಲ ಚುನಾವಣೆ. ಅತ್ಯುತ್ಸಾಹದಿಂದ ಅವರು ಕರ್ನಾಟಕದ ಚುನಾವಣೆಯಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೂ ಯಾಕೋ ರಾಯರು ಇತ್ತ ಬರಲೊಲ್ಲರು. ಯಾಕ್ಹೀಗೆ?
ರಾಜ್ಯದಲ್ಲಿ ಆಡಳಿತವಿರೋಧಿ ಅಲೆ ವ್ಯಾಪಕವಾಗಿರುವಾಗ ಅದನ್ನು ಬಂಡವಾಳ ಮಾಡಿಕೊಳ್ಳಲು ರಾಹುಲ್ ಚುನಾವಣೆ ಪ್ರಚಾರದಲ್ಲಿ ಸಕ್ರಿಯರಾಗಿ ಕಾಣಿಸಿಕೊಳ್ಳಬೇಕಿತ್ತು. ಆದರೂ ಯಾಕೋ ರಾಯರು ಇತ್ತ ಬರಲೊಲ್ಲರು. ಯಾಕ್ಹೀಗೆ?
ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲೂ ಅಷ್ಟೇ. ಎಲ್ಲವನ್ನೂ ಅಮ್ಮ ಸೋನಿಯಾ ಮತ್ತು ಅವರ ಆಪ್ತ ಸಲಹೆಗಾರ ಅಹಮದ್ ಪಟೇಲ್ ತಲೆಗೇ ಕಟ್ಟಿ, ಸುಮ್ಮನಾಗಿದ್ದಾರೆ. ಯಾಕೋ ಹೀಗೆ?
ಒಂದು ಮೂಲದ ಪ್ರಕಾರ ಸಂಸತ್ತಿಗೆ ಮಧ್ಯಂತರ ಚುನಾವಣೆ ನಡೆಯುವುದು ಬಹುದೇಕ ಖಚಿತ. ಕರ್ನಾಟಕ ಆನಂತರ ರಾಜಸ್ಥಾನದಲ್ಲಿ ಚುನಾವಣೆಗಳು ಮುಗಿಯುತ್ತಿದ್ದಂತೆ ಮಧ್ಯಂತರ ಚುನಾವಣೆ ಅನಿವಾರ್ಯವಾಗಲಿದೆ. ಅಲ್ಲಿಯವರೆಗೂ ಈ ಎರಡೂ ಚುನಾವಣೆಗಳಲ್ಲಿ ಯುವರಾಜ ತನ್ನ ಅಂಗೈ ತೋರಿಸುವುದು ಬೇಡ ಎಂಬ ಲೆಕ್ಕಾಚಾರ ಪಕ್ಷದ ಥಿಂಕ್ ಟ್ಯಾಂಕಿನದ್ದಾಗಿದೆ ಎನ್ನಲಾಗಿದೆ. ಆದರೂ ಒಂದೆರಡು ದಿನದ ಮಟ್ಟಿಗೆ ಅಮ್ಮ-ಮಗ ಬಂದು ಹೋಗಲಿದ್ದಾರೆ ಎಂದು ಕಾರ್ಯಕರ್ತರರನ್ನು ತೃಪ್ತಿ ಪಡಿಸುವ ನಿಟ್ಟಿನಲ್ಲಿ ರಾಜ್ಯ ನಾಯಕರು ಸ್ವಗತದಲ್ಲಿ ಹೇಳಿಕೊಂಡಿದ್ದಾರೆ.
ಆದರೆ 'ರಾಹುಲ್ ಪ್ರಚಾರಕ್ಕೆ ಬಂದ ಚುನಾವಣೆಗಳಲ್ಲಿ ಕಾಂಗ್ರೆಸ್ ದಯನೀಯವಾಗಿ ಸೋತಿದೆ' ಎಂಬುದು ರಾಹುಲ್ ವಿರೋಧಿಗಳು ಹೇಳುವ ಶುದ್ಧ ಕುಹಕವಾ? ಇದನ್ನು ಪ್ರೂವ್ ಮಾಡೋಣವೆಂದರೆ ರಾಹುಲ್ ಇತ್ತ ಸುಳಿಯುತ್ತಿಲ್ಲ.