ಕರ್ನಾಟಕದಲ್ಲಿ ಬೆರಕೆ ಸರಕಾರಕ್ಕೆ ವಾಸ್ತು-ತಥಾಸ್ತು!
ಯಾರ ಸಹಕಾರವು ನಮಗೆ ಬೇಕಾಗಿಲ್ಲ, ಸಂಪುರ್ಣ ಬಹುಮತದೊಂದಿಗೆ ನಾವು ಸರ್ಕಾರ ರಚನೆ ಮಾಡೇ ಮಾಡ್ತೇವೆ ಅನ್ನೋ ಅತಿಯಾದ ವಿಶ್ವಾಸ ಕಾಂಗ್ರೆಸ್ ನದ್ದು. ಅದೇನೋ ಸರಿ ಆದ್ರೆ ಇದು ಸಮ್ಮಿಶ್ರಯುಗ. ಕರ್ನಾಟಕ ರಾಜಕೀಯದಲ್ಲಿ ವಿಕಾಸಸೌಧ ಕಟ್ಟಿದಾಗಿನಿಂದ ಸತತವಾಗಿ ಸಮ್ಮಿಶ್ರ ಸರ್ಕಾರವೇ ರಚನೆ ಆಗ್ತಿದೆ. ಹಾಗಾಗಿ ಈ ಸಲವೂ ಸಮ್ಮಿಶ್ರ ಸರ್ಕಾರಾನೇ ಬರ್ತದೆ ಅಂತಾರೆ. ಅದು ಹೇಗೆ? ಆ ರಹಸ್ಯ ಏನು? ಈ ವರದಿ ನೋಡಿ.
ಹೌದು. ರಾಜ್ಯದಲ್ಲಿ ವಿಕಾಸಸೌಧ ಕಟ್ಟಿದ ನಂತರ ಬಂದದ್ದೆಲ್ಲಾ ಸಮ್ಮಿಶ್ರ ಸರ್ಕಾರಗಳೇ. ಸಂಪೂರ್ಣ ಬಹುಮತದೊಂದಿಗೆ ಎಸ್.ಎಂ. ಕೃಷ್ಣ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಮಾಡಿದ್ದೇ ಕೊನೆ. ಆ ನಂತರದಲ್ಲಿ ಒಂದೇ ಪಕ್ಷ ತನ್ನ ಸ್ವಂತ ಶಕ್ತಿಯಿಂದ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಿಲ್ಲ. ಇದಕ್ಕೆ ಪ್ರಮುಖ ಕಾರಣ ವಿಕಾಸಸೌಧ ಕಟ್ಟಿದ್ದು ಅನ್ನೋದು ವಾಸ್ತು ಪಂಡಿತರ ಅಂಬೋಣ.
ಎಸ್ಎಂ ಕೃಷ್ಣ ಅವರು ವಿಕಾಸಸೌಧ ಕಟ್ಟುವಾಗ ಜೋತಿಷಿಯೊಬ್ಬರು ವಿಕಾಸಸೌಧವನ್ನು ಕಟ್ಟದಂತೆ ಸಲಹೆ ನೀಡಿದ್ರಂತೆ. ವಿಕಾಸಸೌಧದ ನಿರ್ಮಾಣದಿಂದ ರಾಜ್ಯದಲ್ಲಿ ಎರಡು ಶಕ್ತಿ ಕೇಂದ್ರಗಳಾಗುತ್ತವೆ. ಮುಂದೆ ರಾಜ್ಯದಲ್ಲಿ ಒಂದೇ ಪಕ್ಷ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಎರಡು ಶಕ್ತಿ ಕೇಂದ್ರಗಳಿಂದಾಗಿ ಸರ್ಕಾರ ರಚನೆಯಲ್ಲಿ ಎರಡು ಪಕ್ಷಗಳ ಶಕ್ತಿ ಬೇಕಾಗುತ್ತೆ ಅಂದಿದ್ರಂತೆ
ಆದ್ರೂ, ಎಸ್ಎಂ ಕೃಷ್ಣ ಅಂದು ವಿಕಾಸಸೌಧವನ್ನ ಕಟ್ಟಿಯೇ ಬಿಟ್ರು. ಮುಂದೆ ಅವರ ನೇತೃತ್ವದಲ್ಲೇ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನುಭವಿಸಿತು. ಸರ್ಕಾರ ರಚನೆಗೆ ಜೆಡಿಎಸ್ ಬೆಂಬಲ ಬೇಕಾಯ್ತು. ಬಳಿಕ ಬಿಜೆಪಿ - ಜೆಡಿಎಸ್ ಸರ್ಕಾರ ರಚನೆ ಆಯ್ತು.. ಭಲೇ ಜ್ಯೋತಿಷ್ಯ!
ಇನ್ನು ಜೆಡಿಎಸ್ ವಚನಭ್ರಷ್ಟತೆಯನ್ನು ಆಧಾರವಾಗಿಟ್ಟುಕೊಂಡು, ಜನರ ಅನುಕಂಪದೊಂದಿಗೆ ಬಿಜೆಪಿ ಪರ ಅಲೆ ಎಬ್ಬಿಸಿದ್ದ ಯಡಿಯೂರಪ್ಪ ಅವರೂ ಬಹುಮತ ಪಡೆಯಲು ಸಾಧ್ಯವಾಗಲಿಲ್ಲ.. 110 ಸ್ಥಾನಗಳನ್ನ ಪಡೆದು ಬಹುಮತಕ್ಕಾಗಿ ಪಕ್ಷೇತರರ ಮೊರೆ ಹೋದ್ರು.. ಆದ್ರೂ ಸರ್ಕಾರಕ್ಕೆ ಸಂಚಕಾರ ಎದುರಾಯ್ತು.. ಬಳಿಕ ಆಪರೇಷನ್ ಕಮಲದ ಮೂಲಕ ಯಡಿಯೂರಪ್ಪ ಅವರು ಬೇರೆ ಪಕ್ಷದ ಶಾಸಕರ ಶಕ್ತಿಯೊಂದಿಗೆ ಬೀಳೋ ಸರ್ಕಾರವನ್ನ ಪಾರುಮಾಡಿಕೊಂಡ್ರು.
3 ಪಕ್ಷಕ್ಕೆ ಅಧಿಕಾರ ನೀಡುವುದೇ ಸುವರ್ಣಸೌಧ?
ಬೆಂಗಳೂರಿನ ವಿಕಾಸಸೌಧದ ಜೊತೆ ಬೆಳಗಾವಿಯ ಸುವರ್ಣ ವಿಧಾನಸೌಧ ರಾಜ್ಯದಲ್ಲಿ ಮೂರನೇ ಶಕ್ತಿ ಕೇಂದ್ರವಾಗಿ ಎದ್ದು ನಿಂತಿದೆ. ಜ್ಯೋತಿಷಿಗಳ ಪ್ರಕಾರ, ರಾಜ್ಯದಲ್ಲಿ ಈ ಬಾರಿ ಎರಡು ಪಕ್ಷವಿರಲಿ ಮೂರು ಪಕ್ಷಗಳ ಶಕ್ತಿ ಬೇಕಾಗುತ್ತದೆ ಅಂತಾರೆ. ಇದಕ್ಕೆ ಕಾಕತಾಳಿಯ ಎಂಬಂತೆ ರಾಜ್ಯದಲ್ಲಿ ಮೂರು ಪಕ್ಷಗಳ ಬದಲಿಗೆ ಬದಲಾದ ಈ ಸಂದರ್ಭದಲ್ಲಿ ಕೆಜೆಪಿ ಬಿಎಸ್ಆರ್ ಎಂಬ ಎರಡು ಹೊಸ ಪ್ರಾದೇಶಿಕ ಪಕ್ಷಗಳು ರಚನೆ ಆಗಿವೆ. ಇನ್ನು ಕೆಲವರ ಅಭಿಪ್ರಾಯದ ಪ್ರಕಾರ, ಸುವರ್ಣಸೌಧ ರಾಜ್ಯದ ರಾಜಧಾನಿಯಲ್ಲಿ ಇಲ್ಲದಿರುವುದರಿಂದ ಸರ್ಕಾರ ರಚನೆಯಲ್ಲಿ ಇದು ಪ್ರಭಾವ ಬೀರಲ್ಲ ಅಂತಾರೆ. ಆ ಜ್ಯೋತಿಷ್ಯವೇ ಬೇರೆ, ಈ ಜ್ಯೋತಿಷಿಯೇ ಬೇರೆ!
ಒಟ್ಟಾರೆ ವಾಸ್ತು ಪಂಡಿತರು ಹೇಳ್ತಿರುವಂತೆ ವಿಕಾಸಸೌಧ ಕಟ್ಟಿದಾಗಿನಿಂದ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರಗಳದ್ದೆ ಕಾರುಬಾರು. ಎರಡು ಶಕ್ತಿ ಕೇಂದ್ರಗಳು ರಚನೆ ಆಗಿ ಎರಡು ಪಕ್ಷಗಳ ಶಕ್ತಿಯಿಂದಲೇ ಸರ್ಕಾರ ರಚನೆ ಸಾಧ್ಯ. ಹೀಗಾಗಿ ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬರ್ತೇವೆ ಅಂತಾ ಅಂದುಕೊಂಡಿದ್ರು ಫಲಿತಾಂಶ ಬೇರೆಯೇ ಆಗಿರುತ್ತೆ ನೋಡಿ ಅಂತಾರೆ. ಇನ್ನು ಬೆಳಗಾವಿಯ ಸುವರ್ಣಸೌಧ ಕೂಡಾ ಶಕ್ತಿ ಪ್ರದರ್ಶಿಸಿ ಮೂರು ಪಕ್ಷಗಳು ಸೇರಿ ಸರ್ಕಾರ ರಚನೆ ಆಗುವಂತೆ ಪರಿಸ್ಥಿತಿ ಬಂದ್ರೆ ವಾಸ್ತು ನಂಬದವರು ತಲೆಕೆಡಿಸಿಕೊಳ್ಳಲೇಬೇಕಾದ ಸ್ಥಿತಿ ನಿರ್ಮಾಣವಾಗಲಿದೆ. ಇದು ಸತ್ಯವೋ - ಸುಳ್ಳೋ ಗೊತ್ತಿಲ್ಲ. ಆದ್ರೆ, ಚರ್ಚಾರ್ಹ ವಿಷಯವಂತೂ ನಿಜ. ಹೌದೋ ಅಲ್ಲವೋ!
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ