ಬಿಜೆಪಿ ತೊರೆಯಲು ನಮೋಶಿ, ಬಗಲಿ ಸಜ್ಜು
ಜೆಡಿಎಸ್ ನಿಂದ ಬಿಜೆಪಿಗೆ ಮರಳಿರುವ ದತ್ತಾತ್ರೇಯ ಅವರಿಗೆ ಗುಲ್ಬರ್ಗಾ ದಕ್ಷಿಣ ಕ್ಷೇತ್ರದ ಟಿಕೆಟ್ ನೀಡಿದ್ದರಿಂದ ಶಶೀಲ್ ನಮೋಶಿ ಅಸಮಾಧಾನಗೊಂಡಿದ್ದಾರೆ. ಬೆಂಗಳೂರಿನಗೆ ಆಗಮಿಸಿರುವ ಅವರು ಜೆಡಿಎಸ್ ಅಥವ ಕೆಜೆಪಿ ಸೇರುವ ಬಗ್ಗೆ ಚಿಂತನೆ ನಡೆಸಿದ್ದಾರೆ.
ಎರಡೂ ಪಕ್ಷಗಳ ಟಿಕೆಟ್ ದೊರೆಯದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಆಲೋಚಿಸಿದ್ದಾರೆ. ನಮೋಶಿ ಬಿಜೆಪಿ ತೊರೆಯುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಗುಲ್ಬರ್ಗಾ ದಕ್ಷಿಣ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಅವರು ತಯಾರಿ ನಡೆಸಿದ್ದರು.
ಆದರೆ, ಹಾಲಿ ದಕ್ಷಿಣ ಕ್ಷೇತ್ರದ ಜೆಡಿಎಸ್ ಶಾಸಕಿ ಅರುಣಾ ಪಾಟೀಲ್ ಪುತ್ರ ದತ್ತಾತ್ರೇಯ ಪಾಟೀಲ್ ಜೆಡಿಎಸ್ ತೊರೆದು ಬಿಜೆಪಿ ಸೇರಿದರು. ಅವರು ಕ್ಷೇತ್ರದ ಅಭ್ಯರ್ಥಿ ಎಂದು ಬಿಜೆಪಿ ಘೋಷಿಸಿದೆ ಆದ್ದರಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಶಶೀಲ್ ನಮೋಶಿ ಅಸಮಾಧಾನಗೊಂಡಿದ್ದಾರೆ.(ಬಿಜೆಪಿ 2ನೇ ಪಟ್ಟಿ)
ಶೆಟ್ಟರ್ ವಿರುದ್ಧ ಕಿಡಿ : ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಿರುದ್ಧ ಶಶೀಲ್ ನಮೋಶಿ ಕೋಪಗೊಂಡಿದ್ದಾರೆ. ನಮೋಶಿ ಅವರನ್ನು ನಾನು ಭೇಟಿ ಮಾಡಿದ್ದೇನೆ. ಯಾವುದೇ ಅಸಮಾಧಾನವಿಲ್ಲ, ಅವರು ಪಕ್ಷ ತೊರೆಯುವುದಿಲ್ಲ ಎಂದು ಶೆಟ್ಟರ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.
ಶಶೀಲ್ ನಮೋಶಿ ಅವರು ಹೇಳುವ ಪ್ರಕಾರ ಸಿಎಂ ಅವರನ್ನು ಭೇಟಿ ಮಾಡಿಲ್ಲ. ಮಾಧ್ಯಮಗಳಿಗೆ ಕೇವಲ ಹೇಳಿಕೆ ನೀಡುತ್ತಿದ್ದಾರೆ. ದತ್ತಾತ್ರೇಯ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಜಗದೀಶ್ ಶೆಟ್ಟರ್ ಒತ್ತಡ ಹೇರಿದ್ದರು ಎಂಬುದು ನಮೋಶಿ ಕೋಪಕ್ಕೆ ಕಾರಣವಾಗಿದೆ.
ಟಿಕೆಟ್ ವಂಚಿತ ಬಗಲಿ : ಇಂಡಿ ಕ್ಷೇತ್ರದ ಹಾಲಿ ಬಿಜೆಪಿ ಶಾಸಕ ಡಾ.ಸಾರ್ವಭೌಮ ಬಗಲಿ ಅವರಿಗೆ ಬಿಜೆಪಿಯ ಎರಡನೇ ಪಟ್ಟಿಯಲ್ಲೂ ಟಿಕೆಟ್ ದೊರಕಿಲ್ಲ. ಇದರಿಂದ ಆತಂಕಗೊಂಡಿರುವ ಅವರು ಜೆಡಿಎಸ್ ಕದ ತಟ್ಟುತ್ತಿದ್ದಾರೆ. ಕೆಜೆಪಿ ಅಧ್ಯಕ್ಷ ಯಡಿಯೂರಪ್ಪ ಜೊತೆ ಬಗಲಿ ಗುರುತಿಸಿಕೊಂಡಿದ್ದರು.
ಕೆಜೆಪಿ ಸೇರುವ ಶಾಸಕರ ಪಟ್ಟಿಯಲ್ಲಿ ಡಾ.ಸಾರ್ವಭೌಮ ಬಗಲಿ ಅವರ ಹೆಸರು ಕೇಳಿಬಂದಿತ್ತು. ಆದರೆ, ಅಚ್ಚರಿಯ ಬೆಳವಣಿಯಲ್ಲಿ ಅವರು ಬಿಜೆಪಿಯಲ್ಲೇ ಮುಂದುವರೆದಿದ್ದಾರೆ. ಆದರೆ, ಪಕ್ಷದ ನಾಯಕರು ಅವರಿಗೆ ಟಿಕೆಟ್ ನೀಡಲು ವಿಳಂಬ ಮಾಡುತ್ತಿದ್ದಾರೆ. ಆದ್ದರಿಂದ ಬಗಲಿ ಜೆಡಿಎಸ್ ಸೇರುವ ಆಲೋಚನೆ ನಡೆಸಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ