ಕೋಡಿಮಠ ಶ್ರೀಗಳ ಯುಗಾದಿ ವರ್ಷ ಭವಿಷ್ಯ
ಅರಸೀಕೆರೆ, ಏ.11: ಎಲ್ಲರಿಗೂ 'ವಿಜಯ' ನಾಮ ಸಂವತ್ಸರ ಧೈರ್ಯ, ಸಮೃದ್ಧಿ, ಸಂಪತ್ತು, ಆಯುರ್ ಆರೋಗ್ಯ, ಇಷ್ಟ ಕಾಮ್ಯಾರ್ಥ, ಶಾಂತಿಯನ್ನು ನೀಡಲಿ ಎಂದು ಅರಸೀಕೆರೆ ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭ ಹಾರೈಸಿದ್ದಾರೆ.
ರಾಜಕೀಯ, ಭದ್ರತೆ, ಅಸ್ಥಿರತೆ, ಸಾಮಾಜಿಕ ಏರಿಳಿತ, ನೈಸರ್ಗಿಕ ವಿಕೋಪಗಳ ಬಗ್ಗೆ ಅವರು ನುಡಿಯುವ ತಾಳೆಗರಿ ಭವಿಷ್ಯ ಎಲ್ಲೆಡೆ ಜನಪ್ರಿಯವಾಗಿದೆ. ಆದರೆ, ಶ್ರೀಮಠ ಎಂದಿಗೂ ಭವಿಷ್ಯ ಹೇಳುವುದಿಲ್ಲ. ಭವಿಷ್ಯವನ್ನು ಹೇಗೆ ರೂಪಿಸಿಕೊಳ್ಳಬಹುದು ಎಂಬುದರ ಬಗ್ಗೆ ಸೂಚನೆ, ಸಲಹೆಯನ್ನು ನೀಡುತ್ತೇವೆ ಎಂದು ಕೋಡಿಮಠ ಶ್ರೀಗಳು ಹೇಳಿದ್ದಾರೆ.
3 ದೊರೆಗಳು ಈ ನಾಡನ್ನು ಆಳಲಿದ್ದಾರೆ ಎಂಬುದಾಗಿ ಹೇಳಿದ್ದೆ. ಅದರಂತೆ ಜಗದೀಶ ಶೆಟ್ಟರ್ ಮೂರನೇ ಮುಖ್ಯಮಂತ್ರಿಯಾಗಿದ್ದಾರೆ ಎಂದು ಹೇಳಿ ಸುಮ್ಮನಾಗದ ಸ್ವಾಮೀಜಿಗಳು ಇನ್ನಾರು ತಿಂಗಳಲ್ಲಿ ಚುನಾವಣೆ ನಡೆಯಲಿದೆ. ದಸರಾ ಸಂದರ್ಭದಲ್ಲಿ ಸಂಭವಿಸುವ ಘಟನೆಯಿಂದ ರಾಜಕೀಯ ಅಸ್ಥಿರತೆ ಉಂಟಾಗಲಿದೆ ಎಂದಿದ್ದರು.
ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆದು ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ. ಯಾವ ಪಕ್ಷಕ್ಕೂ ಬಹುಮತ ದೊರೆಯುವುದಿಲ್ಲ. ಕೊನೆಗೆ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬರಲಿದೆ. ಆ ಸರಕಾರ ಕೂಡ ಹೆಚ್ಚಿಗೆ ಬಾಳುವುದಿಲ್ಲ ಎಂದಿದ್ದರು. ಈಗಲೂ ಅದೇ ಮಾತನ್ನೇ ಆಡಿದ್ದಾರೆ.
ಕೋಡಿಮಠದ ಶ್ರೀಗಳು ಜೀ ಕನ್ನಡ ವಾಹಿನಿ ಮಠದ ಅಂಗಳ ಕಾರ್ಯಕ್ರಮದಲ್ಲಿ ನುಡಿದಿದ್ದೇನು? ರಾಜ್ಯಕ್ಕೆ ಯಾವ ಅಪಾಯ ಕಾದಿದೆ? ರಾಜಕೀಯ ಅಸ್ಥಿರತೆ ಮುಂದುವರೆಯಲಿದೆಯೆ? ಮುಂದೆ ಓದಿ...
ಅಪಘಾತಗಳ ವರ್ಷ
* ಈ ವರ್ಷ ಹೆಚ್ಚಿನ ಸಾವು ನೋವುಗಳನ್ನು ಕರ್ನಾಟಕ ಕಾಣಲಿದೆ. ಬೆಂಕಿ ದುರಂತಗಳು, ರಸ್ತೆ ಅಪಘಾತಗಳು ಇನ್ನಷ್ಟು ಹೆಚ್ಚಾಗಲಿದೆ. ವಕೀಲರು ಹಾಗೂ ವೈದ್ಯರಿಗೆ ಈ ವರ್ಷ ಹೆಚ್ಚಿನ ಕೆಲಸ ಸಿಗಲಿದೆ.
* ಕಾಡು ಪ್ರಾಣಿಗಳು ಹೆಚ್ಚೆಚ್ಚು ನಾಡಿನ ಕಡೆ ಓಡಿ ಬರಲಿದೆ. ಪರಿಸರ ನಾಶದಿಂದ ಮಾನವ ಜನಾಂಗ ಪಾಠ ಕಲಿಯುವ ಕಾಲ ಬರಲಿದೆ
ರಾಜಕೀಯ ಅತಂತ್ರ ಮುಂದುವರಿಕೆ
* ರಾಜಕೀಯವಾಗಿ ಈ ಬಾರಿ ರಾಜ್ಯದ ಅಧಿಕಾರ ಪೀಠ ಹಿಡಿಯುವವರ ಹಸ್ತ ಶುದ್ಧವಾಗಿರಲ್ಲ. ಹೆಚ್ಚು ಕಾಲ ಅಧಿಕಾರ ಉಳಿಯುವುದಿಲ್ಲ. ಮತ್ತೆ ರಾಜ್ಯದಲ್ಲಿ ಅತಂತ್ರ ಸ್ಥಿತಿ ಮುಂದುವರೆಯಲಿದೆ. ಮತ್ತೊಮ್ಮೆ ಚುನಾವಣೆ ಎದುರಾಗುವ ಭೀತಿ ಇದೆ.
ನಿಷ್ಠಾವಂತ, ಸತ್ಯವಾದಿ ರಾಜಕೀಯ ಮುಖಂಡರ ಮೇಲೆ ವೃಥಾರೋಪಗಳು ಕೇಳಿ ಬರಲಿದೆ. ಮುಖಂಡರ ಕೋರ್ಟ್ ಕಚೇರಿ ಸುತ್ತಾಟ ಹೆಚ್ಚಾಗಲಿದೆ.ಸತ್ಯವಂತರಿಗಿದು ಕಾಲವಲ್ಲ
ಹೆಣ್ಣು ಮಕ್ಕಳಿಗೆ ಕಷ್ಟ ಮುಂದುವರೆಯಲಿದೆ. ಕ್ರೈಂ ರೇಟ್ ಹೆಚ್ಚಾಗಲಿದೆ. ಬಂಗಾರ ಪಂಜರ ಮೂರು ಭಾಗವಾಗುತ್ತದೆ. ಮುತ್ತಿನ ಅರಗಿಣಿ ಮಾತನಾಡುತ್ತೆ ರಾಜಕೀಯ ಪಗಡೆಯಾಟ ಜನರ ಸಂಕಷ್ಟಕ್ಕೆ ಕಾರಣವಾಗುತ್ತೆ ಎಂದು ಶಿವಲಿಂಗ ಅಜ್ಜಯ್ಯ ಈ ಹಿಂದೆ ನುಡಿಸಿದ್ದ ಈಗಲೂ ಅದು ಪ್ರಸ್ತುತವಾಗಲಿದೆ.
ಬೆಲೆ ಏರಿಕೆ
ಕೈಲಾಸ ಗಂಟೆ ಬಾರಿಸಿತು. ಧನ ಕನಕ ವಸ್ತ್ರಾದಿಗಳ ಬೆಲೆ ಹೆಚ್ಚಾದೀತು, ಮಳೆ ಎಲ್ಲೆಡೆ ಆವರಿಸಿತು' ಎಂದು ತಾಳೆಗರಿಯಲ್ಲಿ ಹೇಳಿದೆ. ಅದರಂತೆ ಅಕಾಲಿಕವಾಗಿ ಭಾರಿ ಮಳೆ ಬೀಳಲಿದೆ. ಚಿನ್ನ, ಬೆಳ್ಳಿ, ಆಭರಣ ಬೆಲೆ ಹೆಚ್ಚಾಗಲಿದೆ. ಆಹಾರ ಧಾನ್ಯ, ಅಗತ್ಯ ವಸ್ತುಗಳ ಬೆಲೆ ಕೂಡಾ ಗಗನಕ್ಕೇರಲಿದೆ ಎಂದು ಸ್ವಾಮೀಜಿ ಹೇಳಿದ್ದಾರೆ.
ರಾಜಕೀಯ ಪಕ್ಷಗಳ ಪರದಾಟ
ಜನರಿಗೆ ರಾಜಕೀಯ ಪಕ್ಷಗಳ ಮೇಲೆ ನಂಬಿಕೆ ಕಡಿಮೆಯಾಗಲಿದ್ದು, ಜನಾಂದೋಲನಗಳ ಮೇಲೆ ಹೆಚ್ಚಿನ ನಂಬಿಕೆ ಹುಟ್ಟಲಿದೆ. ಹಳೆ ಪಕ್ಷಗಳು ಹೊಸ ಹೊಸ ಹೊಂದಾಣಿಕೆಯೊಂದಿಗೆ ಅಧಿಕಾರ ಪೀಠದತ್ತ ಸಾಗಲಿದ್ದಾರೆ. ಜನತೆಗೆ ಗೆಲುವು ಇನ್ನೂ ಮರೀಚಿಕೆ
ಸ್ವಾಮೀಜಿ ಕಾಮನ್ ಡೈಲಾಗ್ಸ್
"ನೀಚನಿಗೆ ದೊರೆತನ, ಹೇಡಿಗೆ ಹಿರಿತನ, ಅವಿವೇಕಿಗೆ ಮಠಾಧಿಪತಿ ಸ್ಥಾನ ಸಿಕ್ಕರೆ ನಾಡು ಹೇಗಿರುತ್ತೋ ನಮ್ಮ ನಾಡು ಕೂಡಾ ಹಾಗೆ ಇದೆ".
'ನಾನು ಭಯ ಬಿತ್ತುವ ಸ್ವಾಮಿಯಲ್ಲ. ಭವಿಷ್ಯ ರೂಪಿಸುವಂತಹ ವಿಚಾರಗಳನ್ನು ಹೇಳುವ ಸ್ವಾಮಿಯಷ್ಟೇ. ಅವಘಢಗಳನ್ನು ತಪ್ಪಿಸುವ ಉದ್ದೇಶದಿಂದ ಜನತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಿ ಎಂಬ ಉದ್ದೇಶದಿಂದ ನಾನು ಹೇಳುವ ಭವಿಷ್ಯವಾಣಿಗಳಿಂದ ಮಹಾಜನತೆ ಕೆಲವೊಮ್ಮೆ ಸಿಟ್ಟಿಗೇಳುತ್ತಾರೆ, ಅಷ್ಟೇ'
'ಬಂಗಾರ ಪಂಜರ ಮೂರು ಭಾಗವಾಗುತ್ತದೆ. ಮುತ್ತಿನ ಅರಗಿಣಿ ಮಾತನಾಡುತ್ತೆ ರಾಜಕೀಯ ಪಗಡೆಯಾಟ ಜನರ ಸಂಕಷ್ಟಕ್ಕೆ ಕಾರಣವಾಗುತ್ತೆ'