ಜಾಲಿ ರೈಡ್ : ಕ್ರೈಸ್ಟ್ ಕಾಲೇಜಿನ ವಿದ್ಯಾರ್ಥಿಗಳು ಬಲಿ
ಬೆಂಗಳೂರು ಹೊಸೂರು ಹೆದ್ದಾರಿ ರಸ್ತೆಯಲ್ಲಿ ವೇಗವಾಗಿ ಚಲಿಸುತ್ತಿದ್ದ ಸ್ಕಾರ್ಪಿಯೋ ವಾಹನ ತನ್ನ ಹಳಿ ತಪ್ಪಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು 200 ಮೀಟರ್ ದೂರಕ್ಕೆ ಚಿಮ್ಮಿದೆ. ಎಲೆಕ್ಟಿಕ್ ಪೋಲ್ ಮುರಿದು ಬಿದ್ದಿದೆ. ಭೀಕರ ಅಪಘಾತದ ಪರಿಣಾಮ ವಾಹನದಲ್ಲಿದ್ದವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲಾರಿ ಚಾಲಕ ಸೆಲ್ವಂ ಅಪಘಾತವನ್ನು ನಿಯಂತ್ರಿಸಲು ಯತ್ನಿಸಿ ಬ್ರೇಕ್ ಹಾಕಿದರೂ ಅಪಘಾತ ತಪ್ಪಿಸಲು ಆಗಲಿಲ್ಲ
ಅಪಘಾತದಲ್ಲಿ ಸ್ಥಳದಲ್ಲಿಯೇ ಸಾವನ್ನಪ್ಪಿದವರನ್ನು ಸಂಗೀತಾ, ಸೃಜನಾ, ಹಫೀಜ್ ಎಂದು ಗುರುತಿಸಲಾಗಿದೆ. ಇವರು ಇಲ್ಲಿನ ಕ್ರೈಸ್ತ ಕಾಲೇಜಿನ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಈ ಪೈಕಿ ಸೃಜನಾ ಎಂಬುವರು ಶೃಂಗೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜೇಗೌಡ ಅವರ ಪುತ್ರಿಯಾಗಿದ್ದಾರೆ.
ಅತಿ ವೇಗದಿಂದ ಬಂದ ಸ್ಕಾರ್ಪಿಯೋ ಕಾರು ಢಿಕ್ಕಿ ಹೊಡೆದ ಪರಿಣಾಮ ಮೂವರೂ ಸ್ಥಳದಲ್ಲಿ ಮೃತ ಪಟ್ಟಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಕಾರ್ಪಿಯೋ ಚಾಲಕನದ್ದೇ ತಪ್ಪು ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ವಾಹನ ಚಾಲನೆ ವೇಳೆ ಆತ ಪಾನಮತ್ತನಾಗಿದ್ದ ಎಂಬ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ತನಿಖೆ ಮುಂದುವರೆದಿದೆ ಎಂದು ಹೆಬ್ಬಗೋಡಿ ಪೊಲೀಸರು ಹೇಳಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಶೃಂಗೇರಿ ಕಾಂಗ್ರೆಸ್ ಅಭ್ಯರ್ಥಿ ರಾಜೇಗೌಡ ಅವರ ಪುತ್ರಿ ಸೃಜನಾ ಅವರ ಪಾರ್ಥೀವ ಶರೀರವನ್ನು ವೀಕ್ಷಿಸಲು ಕಾಲೇಜು ಸಹಪಾಠಿಗಳು ಸೇರಿದಂತೆ, ಶೃಂಗೇರಿಯಿಂದ ಅಪಾರ ಸಂಖ್ಯೆಯಲ್ಲಿ ಕುಟುಂಬ ವರ್ಗ ಆಗಮಿಸಿದೆ. ಆಸ್ಪತ್ರೆಗೆ ಕಾಂಗ್ರೆಸ್ ಮುಖಂಡರಾದ ಜಯಪ್ರಕಾಶ್ ಹೆಗ್ಡೆ, ಬಿಜೆಪಿ ಮುಖಂಡ ಡಿ.ಬಿ ಚಂದ್ರೇಗೌಡ, ಹಾಗೂ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಮುಂತಾದವರು ಭೇಟಿ ಕೊಟ್ಟು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
KA 01 MG 44 ವಾಹನ ಸಂಖ್ಯೆ ವಾಹನ ಕೇರಳ ಮೂಲದ ವಿದ್ಯಾರ್ಥಿ ಕಾರಿನ ಮಾಲೀಕ ಡೆರಿಂಗ್ ಎಂಬುವವನಿಗೆ ಸೇರಿದ್ದು, ಆತ ಗಾಯಾಳುವಾಗಿ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಶೃಂಗೇರಿ ಮೂಲದ ಸೃಜನಾ ಅವರು ತಮ್ಮ ಡಾಲರ್ಸ್ ಕಾಲೋನಿಯಲ್ಲಿರುವ ಚಿಕ್ಕಪ್ಪನ ಮನೆಯಲ್ಲಿ ಉಳಿದು ಕೊಂಡು ಕ್ರೈಸ್ಟ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಸಂಜನಾ ಕೋಲ್ಕತ್ತಾ ಮೂಲದವರಾದರೆ, ಆಸೀಫ್ ಕೇರಳದವನಾಗಿದ್ದಾನೆ.