ಬೇಲೂರು ಬಿಟ್ಟು ಕೆ.ಆರ್ ಪೇಟೆಯಲ್ಲಿ ಭವಾನಿ ಸ್ಪರ್ಧೆ?
ಕೆ.ಆರ್.ಪೇಟೆಯಲ್ಲಿ ಮಾಜಿ ಸ್ಪೀಕರ್ ಕೃಷ್ಣ ಹಾಗೂ ಕೆ.ಸಿ.ನಾರಾಯಣಗೌಡರ ನಡುವಿನ ಕಿತ್ತಾಟವನ್ನು ಹತ್ತಿಕ್ಕಲು ಭವಾನಿ ಅವರಿಗೆ ಟಿಕೆಟ್ ನೀಡಲು ಜೆಡಿಎಸ್ ವರಿಷ್ಠ ದೇವೇಗೌಡರು ಯೋಚಿಸಿದ್ದಾರೆ ಎಂಬ ಸುದ್ದಿ ಇದೆ. ಆದರೆ, ಜೆಡಿಎಸ್ ಎರಡನೇ ಪಟ್ಟಿಯಲ್ಲಿ ಕೆ.ಆರ್ ಪೇಟೆಯಿಂದ ಕೃಷ್ಣ ಅವರು ಸ್ಪರ್ಧಿಸುತ್ತಾರೆ ಎಂದು ಪ್ರಕಟಿಸಲಾಗಿದೆ. ಆದರೆ, ಇನ್ನೂ ಬಿ ಫಾರಂ ಕೊಡುವುದು ಖಾತ್ರಿಯಾಗಿಲ್ಲ.
ಹೀಗಾಗಿ ಭವಾನಿ ಮೇಡಂ ರಾಜಕೀಯ ಪ್ರವೇಶಕ್ಕೆ ಇನ್ನೂ ಸಮಯ ಕೂಡಿ ಬಂದಿಲ್ಲ. ಅತ್ತ ಓರಗಿತ್ತಿ ಅನಿತಾ ಕುಮಾರಸ್ವಾಮಿ ಅವರು ಏ.15 ರಂದು ನಾಮಪತ್ರ ಸಲ್ಲಿಸುವುದಾಗಿ ಘೋಷಿಸಿದ್ದಾರೆ.
ಭವಾನಿ ರೇವಣ್ಣ ಅವರು ಮೈಸೂರಿನ ಕೆ.ಆರ್.ನಗರ ಅಥವಾ ಹಾಸನದ ಬೇಲೂರು ಕ್ಷೇತ್ರದಲ್ಲಿ ಸ್ಪರ್ಧಿಸುವ ಒಲವು ಹೊಂದಿದ್ದು ನಿಜ. ಆದರೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಮ್ಮತಿ ನೀಡಿಲ್ಲ.
ಬೇಲೂರು ಕ್ಷೇತ್ರದಲ್ಲಿ ಜೆಡಿಎಸ್ ನಿಷ್ಠಾವಂತ ಎಚ್ ಕೆ ಜವರೇಗೌಡರಿಗೆ ಅನ್ಯಾಯವಾಗುವುದು ದೊಡ್ಡ ಗೌಡರಿಗೆ ಇಷ್ಟವಿಲ್ಲ. ಕೆ.ಆರ್ ನಗರದಿಂದ ಸಾರಾ ಮಹೇಶ್ ಪ್ರಬಲ ಸ್ಪರ್ಧಿಯಾಗಿದ್ದಾರೆ. ಹೀಗಾಗಿ ಭವಾನಿ ಅವರಿಗೆ ಟಿಕೆಟ್ ಸಿಗುವುದೇ ಅನುಮಾನ ಎಂಬ ಸುದ್ದಿಯೂ ಚಾಲ್ತಿಯಲ್ಲಿದ್ದೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪತ್ನಿ ಅನಿತಾಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ.ರೇವಣ್ಣ, ಶ್ರವಣಬೆಳಗೊಳದಲ್ಲಿ ಸಂಬಂಧಿ ಬಾಲಕೃಷ್ಣ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು ಭವಾನಿ ರೇವಣ್ಣ ಅವರನ್ನೂ ಸ್ಪರ್ಧೆಗೆ ಇಳಿಸಿದರೆ ಜೆಡಿಎಸ್ ಬರೀ ಕುಟುಂಬ ಪಕ್ಷ ಎಂಬ ಕುಹಕಕ್ಕೆ ಇನ್ನಷ್ಟು ರೆಕ್ಕೆ ಪುಕ್ಕ ಬೆಳೆಯಲಿದೆ ಎಂಬ ಆಲೋಚನೆಯೂ ದೇವೇಗೌಡರ ಮನಸ್ಸಿನಲ್ಲಿದೆ.
ಭವಾನಿ ರೇವಣ್ಣ ಅವರ ಸ್ಪರ್ಧೆ ಅನುಮಾನವಾದರೆ ಮಗ ಪ್ರಜ್ವಲ್ ಪ್ರಯತ್ನ, ಜಿಲ್ಲಾ ಮಹಿಳಾ ಘಟಕದ ಒತ್ತಾಯ, ಪತಿ ರೇವಣ್ಣ ಅವರ ನೋವಿಗೆ ಬೆಲೆ ಇಲ್ಲದ್ದಂತಾಗುತ್ತದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ