ಯುಗಾದಿ ಹಬ್ಬಕ್ಕೆ ಕೆಎಸ್ಸಾರ್ಟಿಸಿ ವಿಶೇಷ ಬಸ್
ಬೆಂಗಳೂರು, ಏ.10: ಯುಗಾದಿ ಹಬ್ಬದ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(KSRTC) ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಏ.10 ರಿಂದ 13ರವರೆಗೆ ಬೆಂಗಳೂರಿನಿಂದ ರಾಜ್ಯದ ವಿವಿಧ ಸ್ಥಳಗಳಿಗೆ ಹೆಚ್ಚುವರಿ ಬಸ್ ಸೌಲಭ್ಯ ಒದಗಿಸುತ್ತಿದೆ.
ಪ್ರತಿದಿನ 300 ರಿಂದ 350 ಹೆಚ್ಚುವರಿ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ನಗರದ ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಬಿಜಾಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಗುಲ್ಬರ್ಗ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ತಿರುಪತಿ ಮುಂತಾದ ಸ್ಥಳಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.
ವಾರಾಂತ್ಯದಲ್ಲೇ ವಾಹನ ಸಂಚಾರ ನಿಯಂತ್ರಿಸುವಷ್ಟರಲ್ಲಿ ಹೈರಾಣವಾಗುವ ನಗರದ ಪೊಲೀಸರು ಇನ್ನು ಸಾಲುಸಾಲು ಹಬ್ಬದ ರಜೆ ಬಂದರೆ ಇನ್ನೇನು ಆಗಬೇಡ. ಗುರುವಾರ (ಏ 11) ಯುಗಾದಿ ಹಬ್ಬದ ಪ್ರಯುಕ್ತ ರಜೆ, ಏ 13 ಎರಡನೇ ಶನಿವಾರ. ಅಂದರೆ ಶುಕ್ರವಾರ (ಏ 12) ಒಂದು ದಿನ ರಜಾ ಅರ್ಜಿ ಗುಜರಾಯಿಸಿದರೆ ನಾಲ್ಕು ದಿನ ರಜೆ, ಯಾರಿಗುಂಟು ಯಾರಿಗಿಲ್ಲ.
ಪ್ರಮುಖವಾಗಿ ಸಂಚಾರ ದಟ್ಟಣೆ ವಿಪರೀತವಿರುವ ಕೇಂದ್ರ ಬಸ್ ನಿಲ್ಡಾಣ ಮತ್ತು ಸಿಟಿ ರೈಲ್ವೇ ನಿಲ್ದಾಣದ ಆಸುಪಾಸಿನಲ್ಲಿ ಸುಗಮ ಸಂಚಾರಕ್ಕೆ ಪೊಲೀಸರು ಸೂಕ್ತ ಕ್ರಮ ಕೈಗೊಂಡಿದ್ದಾರೆ. ಈ ಪ್ರದೇಶವಲ್ಲದೇ ಮೈಸೂರು ಮತ್ತು ಹೂಸೂರು ರಸ್ತೆಯಲ್ಲಿ ಹೆಚ್ಚು ಟ್ರಾಫಿಕ್ ಪೊಲೀಸರನ್ನು ನಿಯೋಜಿಸಲಾಗುತ್ತದೆ.
ಹಿರಿಯ ಅಧಿಕಾರಿಗಳಿಗೆ ರಜೆ ಹಾಕದಂತೆ ಸೂಚಿಸಲಾಗಿದೆ. ಬಸ್ ನಿಲ್ದಾಣದ ಒಳಗೂ ಸಂಚಾರ ಪೊಲೀಸರನ್ನು ನಿಯೋಜಿಸಲಾಗುವುದೆಂದು ಹೆಚ್ಚುವರಿ ಪೊಲೀಸ್ ಆಯುಕ್ತ ಡಾ. ಸಲೀಂ ತಿಳಿಸಿದ್ದಾರೆ.
ನಗರದ ಯಾವ ನಿಲ್ದಾಣದಿಂದ ವಿವಿಧ ಊರುಗಳಿಗೆ ಬಸ್ ಸಂಚಾರ ಆರಂಭಾಗಲಿದೆ?
ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಕಾಯ್ದಿರಿಸಿದಲ್ಲಿ ಶೇ.5ರಷ್ಟು ರಿಯಾಯಿತಿ ನೀಡಲಾಗುವುದು. ಹೋಗುವ-ಬರುವ ಪ್ರಯಾಣದ ಟಿಕೆಟ್ನ್ನು ಒಟ್ಟಿಗೆ ಕಾಯ್ದಿರಿಸಿದಾಗ ಬರುವ ಪ್ರಯಾಣ ದರದಲ್ಲಿ ಶೇ.10ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಕೆಎಸ್ಸಾರ್ಟಿಸಿ ಹೇಳಿದೆ.
ಮೆಜೆಸ್ಟಿಕ್
ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಮಂಗಳೂರು, ಹೊರನಾಡು, ಬೀದರ್, ಉಡುಪಿ, ಕುಂದಾಪುರ, ಕುಕ್ಕೇ ಮತ್ತು ತಿರುಪತಿ ಮಾರ್ಗದ ಕಡೆಗೆ.
ಯಶವಂತಪುರ
ಶಿವಮೊಗ್ಗ, ಸಾಗರ, ಸೊರಬ, ತೀರ್ಥಹಳ್ಳಿ ಕಡೆಗೆ ಹೋಗುವ ಬಸ್ಗಳು ಯಶವಂತಪುರ ಟಿಟಿಎಂಸಿಯಿಂದ.
ಶಾಂತಿನಗರ
ತಮಿಳುನಾಡಿಗೆ ಹೋಗುವ ಬಸ್ಗಳು ಶಾಂತಿನಗರ ಬಸ್ ನಿಲ್ದಾಣದಿಂದ. ತಮಿಳುನಾಡಿನ ಮಧುರೈ, ತಿರುಚಿ, ಕುಂಭಕೋಣಂ, ಕೊಯಮತ್ತೂರು ಹಾಗೂ ಆಂಧ್ರಪ್ರದೇಶದ ವಿಜಯವಾಡ,ಹೈದರಬಾದ್,ತಿರುಪತಿ ಕಡೆಗೆ.
ಚಿಕ್ಕ ಲಾಲ್ ಬಾಗ್
ಶಿರಾ, ಹಿರಿಯೂರು, ಚಿತ್ರದುರ್ಗ, ದಾವಣಗೆರೆಗೆ ಹೋಗುವ ಬಸ್ಗಳು ಚಿಕ್ಕ ಲಾಲ್ ಬಾಗ್ನಿಂದ ಹೊರಡಲಿವೆ.
ಮೈಸೂರು ರಸ್ತೆ
ಸ್ಯಾಟಿಲೈಟ್ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ಮಡಿಕೇರಿ, ಹುಬ್ಬಳ್ಳಿ, ಬೆಳಗಾವಿ, ಶಿರಸಿ, ಗೋಕರ್ಣ, ಕಾರಾವಾರ, ಗುಲ್ಬರ್ಗಾ, ಬಳ್ಳಾರಿ,ರಾಯಚೂರು,ಬೀದರ್ ಮತ್ತಿತರ ಮಾರ್ಗಗಳಿಗೆ ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಬಸ್ಗಳು ಸಂಚರಿಸಲಿವೆ.
ಜಯನಗರ, ಜೆ ಪಿ ನಗರ
ಜೆ.ಪಿ.ನಗರ, ಜಯನಗರ, ರಾಜಾಜಿನಗರ, ಮಲ್ಲೇಶ್ವರ 18ನೇ ಕ್ರಾಸ್, ವಿಜಯನಗರ, ಕೆಂಗೇರಿ ಉಪನಗರ ಮುಂತಾದ ಸ್ಥಳಗಳಿಂದ ಶಿವಮೊಗ್ಗ,ದಾವಣಗೆರೆ, ಮಂಗಳೂರು, ಶೃಂಗೇರಿ, ಹೊರನಾಡು, ಧರ್ಮಸ್ಥಳ ಮುಂತಾದ ಮಾರ್ಗಗಳಿಗೆ ಹೆಚ್ಚುವರಿ ಬಸ್ ಸಂಚಾರದ ವ್ಯವಸ್ಥೆಯನ್ನು ರಸ್ತೆ ಸಾರಿಗೆ ಸಂಸ್ಥೆ ಮಾಡಿದೆ. ಕರಾರಸಾ ನಿಗಮದ ವೆಬ್ ಸೈಟ್ನಲ್ಲಿ (www.ksrtc.in) ಸಾರ್ವಜನಿಕರಿಗಾಗಿ ಹೆಚ್ಚಿನ ಮಾಹಿತಿ ಒದಗಿಸಲಾಗಿದೆ.
ಇ-ಟಿಕೇಟ್: ಬುಕ್ಕಿಂಗ್
ಇ-ಟಿಕೇಟ್: ಬುಕ್ಕಿಂಗ್ನ್ನು www.ksrtc.in ವೆಬ್ಸೈಟ್ ಮುಖಾಂತರ ಮಾಡಬಹುದಾಗಿದೆ. ಮೊಬೈಲ್ನಿಂದ 56767 ಸಂಖ್ಯೆಗೆ ಎಸ್ಎಂಎಸ್ ಸಂದೇಶ ಕಳುಹಿಸುವ ಮೂಲಕ ಮುಂಗಡ ಟಿಕೇಟುಗಳನ್ನು ಕಾಯ್ದಿರಿಸಬಹುದಾಗಿದೆ. ಬೆಂಗಳೂರು ನಗರದ 173 ಸೇರಿದಂತೆ ರಾಜ್ಯದ ಇತರೆ ಸ್ಥಳಗಳಲ್ಲಿರುವ 230 ಗಣಕೀಕೃತ ಬುಕ್ಕಿಂಗ್ ಕೌಂಟರ್ಗಳ ಮೂಲಕ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸಬಹುದಾಗಿದೆ.