ರೇವಣ್ಣಗೆ ನಾರಿ ಕಾಟ: ಶ್ರವಣಬೆಳಗೊಳಕ್ಕೆ ಪರಾರಿ?
ಕುಮಾರಸ್ವಾಮಿಯ ಜಾಡು ಹಿಡಿಯದೆ, ರಾಜಕೀಯಕ್ಕೆ ಕಾಲಿಟ್ಟ ದಿನದಿಂದಲೂ ಹೊಳೇನರಸೀಪುರಕ್ಕೇ ಅಂಟಿಕೊಂಡಿರುವ ರೇವಣ್ಣ ಅವರು ಈ ಬಾರಿ ಕ್ಷೇತ್ರ ಬದಲಾಯಿಸುವ ಆಲೋಚನೆಯಲ್ಲಿದ್ದಾರಂತೆ. ಯಾಕಪ್ಪಾ ಹೀಗೆ ದೇವೇಗೌಡರೇನದಾರೂ 'ಹೊಳೇನರಸೀಪುರ ನನ್ನದು, ದೂರ್ ಹಟೋ ಮೇರಿ ನಜರ್ ಸೆ' ಎಂದು ಹಿರಿಯ ಮಗನ ಮೇಲೆ ಕೋಪ ಮಾಡಿಕೊಂಡರಾ?' ಅಂದರೆ ಅಂಥಾ ಸೀನೇನೂ ಇಲ್ಲ ಎಂದು ಗೌಡರ ಕುಟುಂಬದ ಮೂಲಗಳು ಪಿಸುಗುಡುತ್ತಿವೆ.
ಮತ್ತಿನ್ಯಾರ ಕಾಟ ಅಂದರೆ ಜ್ಯೋತಿಷಿಯೊಬ್ಬರು ಧುತ್ತನೆ ಎದುರಾಗುತ್ತಾರೆ. ಏನಪಾ ಅದು ಅಂದರೆ ಮಹಿಳೆಯಿಂದ ನಿನಗೆ ಕಂಟಕವಿದೆ. ಹಾಗಾಗಿ ಪರಂಪರಾಗತ ಹೊಳೇನರಸೀಪುರವನ್ನು ಬಿಟ್ಟು ಪಕ್ಕದ ಶ್ರವಣಬೆಳಗೊಳಕ್ಕೆ ಹಾರಿಕೊಳ್ಳಿ ಎಂದು ಜ್ಯೋತಿಷ್ಯ ಹೇಳಿದ್ದೇ ತಡ ರೇವಣ್ಣ ಗೌಡರು ತಲೆ ಮೇಲೆ ಕೈಹೊತ್ತು ಕುಳಿತುಬಿಟ್ಟಿದ್ದಾರಂತೆ. ಜತೆಗೆ ತಮ್ಮ ಪಿತಾಜಿಯು ತೇಜಸ್ವಿನಿ ಎಂಬ ಮಹಿಳೆಯ ವಿರುದ್ಧ ಸೋತಿದ್ದು ಜ್ಞಾಪಕಕ್ಕೆ ಬಂದು ತಲೆಕೊಡವಿಕೊಂಡು ದಿಢಿಗ್ಗನೆ ಎದ್ದು ಹೊಳೇನರಸೀಪುರದಿಂದ ಹೊರನಡೆಸಿದ್ದಾರೆ.
ವಿಷಯ ಏನಪಾ ಅಂದರೆ ಹೊಳೇನರಸೀಪುರದಲ್ಲಿ ಕಾಂಗ್ರೆಸ್ಸಿನ ಅನುಪಮ ಮಹೇಶ್ ಅವರಿಗೆ (ದಿ. ಜಿ. ಪುಟ್ಟಸ್ವಾಮಿ ಗೌಡರ ಸೊಸೆ) ಮತ್ತೆ ಟಿಕೆಟ್ ಸಿಕ್ಕಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಸದರಿ ಜ್ಯೋತಿಷಿಯು ರೇವಣ್ಣ ಅವರನ್ನುದ್ದೇಶಿಸಿ, ಮೊನ್ನೆ ನೀವು ಜ್ಯೋತಿಷ್ಯ ಕೇಳಕ್ಕೆ ಬಂದು ಹೋದಮೇಲೆ ನನ್ನ ಬಲಗಣ್ಣು ಒಂದೇ ಸಮನೆ ಅದುರತೊಡಗಿತು. ನಿಮಗೆ ನಾರಿ ಕಾಟ ಕಾಣಿಸಿಕೊಂಡಂತಿದೆ. ಹಾಗಾಗಿ, ಯಾವುದೇ ಕಾರಣಕ್ಕೂ ಮಹಿಳೆಯ ಎದುರು ಕಣಕ್ಕೆ ಇಳಿಯಬೇಡಿ ಎಂದು ಸಲಹೆ ನೀಡಿ ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಜ್ಯೋತಿಷಿ ಇಷ್ಟು ಭವಿಷ್ಯ ಹೇಳಿದ್ದೇ ತಡ ರೇವಣ್ಣ ಸ್ವಕುಟುಂಬ ಪರಿವಾರ ಸಮೇತರಾಗಿ ಶೃಂಗೇರಿ, ಕೊಲ್ಲೂರು ಕಡೆಗೆ ತೀರ್ಥಯಾತ್ರೆ ಹೋಗಿಬಿಟ್ಟಿದ್ದಾರೆ. ಹೋಮ ಹವನಗಳಲ್ಲೇ ವಿರೋಧಿಗಳನ್ನು ಸದೆಬಡಿಯುವ ಗೌಡರ ಕುಟುಂಬದ ರೇವಣ್ಣ ಅವರು ಅಲ್ಲೆಲ್ಲಾ ಚಂಡಿಕಾ ಹೋಮ ನಡೆಸಿದ್ದಾರೆ.
ಅದಾಗುತ್ತಿದ್ದಂತೆ ಶ್ರವಣಬೆಳಗೊಳದ ಜೆಡಿಎಸ್ ಅಭ್ಯರ್ಥಿ ಸಿಎನ್ ಬಾಲಕೃಷ್ಣ ಅವರಿಗೆ ಫೋನಾಯಿಸಿ, ಈ ಬಾರಿ ನಾನೇ ನಿನ್ನ ಕ್ಷೇತ್ರದಿಂದ ನಿಲ್ತಿದ್ದೀನಿ ಎಂದು ಬಾಲಕೃಷ್ಣಗೆ ಮಾತ್ರ ಕೇಳಿಸುವಂತೆ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಅಂದಹಾಗೆ ಮುಂದಿನ ಸೋಮವಾರ ಕುಮಾರಸ್ವಾಮಿಯವರು ಜೆಡಿಎಸ್ ಅಭ್ಯರ್ಥಿಗಳ ಮೂರನೆಯ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದಾರೆ. ಈ ಕಥಾನಕದ ಸತ್ಯಾಸತ್ಯತೆ ಅಂದು ಬಹಿರಂಗವಾಗಬಹುದು. ಅಲ್ಲಿಯವರೆಗೂ ಗೊಮ್ಮಟೇಶ್ವರನ ಸನ್ನಿಧಿಯಲ್ಲಿ ಭಜನೆ ಕಾರ್ಯಕ್ರಮ ನಡೆಯಲಿದ್ದು, ಭಕ್ತಾದಿಗಳು ಪಾಲ್ಗೊಳ್ಳಬೇಕೆಂದು ಪ್ರಾರ್ಥಿಸಲಾಗಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ