ಸಿಖ್ ಹತ್ಯಾಕಾಂಡ: ಟೈಟ್ಲರ್ ಗೆ ಮತ್ತೆ ಕಂಟಕ
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆ ನಂತರ ಉತ್ತರ ದೆಹಲಿಯ ಗುರ್ ದ್ವಾರ ಬಳಿ ನಡೆದಿದ್ದ ಸಿಖ್ ಹತ್ಯಾಕಾಂಡದ ಅರೋಪವನ್ನು ಟೈಟ್ಲರ್ ಮೇಲೆ ಹೊರೆಸಲಾಗಿತ್ತು. 1984ರಲ್ಲಿ ನಡೆದ ಸಿಖ್ ವಿರೋಧಿ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ಜಗದೀಶ್ ಟೈಟ್ಲರ್ಗೆ ಕ್ಲೀನ್ ಚಿಟ್ ಕೊಟ್ಟ ಸಿಬಿಐ ವರದಿಗೆ ದೆಹಲಿ ಹೈಕೋರ್ಟ್ ಸಹಮತ ವ್ಯಕ್ತಪಡಿಸಿತ್ತು.
1984ರಲ್ಲಿ ನಡೆದಿದ್ದ ಸಿಖ್ಖರ ನರಮೇಧ ಪ್ರಕರಣದ ತನಿಖೆಯ ಜವಾಬ್ದಾರಿ ಹೊತ್ತಿದ್ದ ಸಿಬಿಐ, ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಿ 2007ರಲ್ಲಿ ಮತ್ತು 2009ರಲ್ಲಿ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ವರದಿ ನೀಡಿತ್ತು. ಸಿಬಿಐ ವರದಿಯನ್ನು ಆಧರಿಸಿ ಸಿಬಿಐ ವಿಶೇಷ ನ್ಯಾಯಾಲಯ, ಜಗದೀಶ್ ಟೈಟ್ಲರ್ಗೆ ಕ್ಲೀನ್ ಚಿಟ್ ನೀಡಿತ್ತು. ಆದರೆ ಸಿಬಿಐ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಅಂದು ಹತ್ಯೆಗೊಳಗಾಗಿದ್ದ ಸಿಖ್ ವ್ಯಕ್ತಿಯೊಬ್ಬರ ಪತ್ನಿ ದೆಹಲಿ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.
ಘಟನೆ ಸಂದರ್ಭದಲ್ಲಿ ಜಗದೀಶ್ ಟೈಟ್ಲರ್ ಅವರು ಘಟನಾ ಸ್ಥಳದಲ್ಲಿಯೇ ಇದ್ದರು ಎಂದು ದೂರು ನೀಡಿರುವ ಸಿಖ್ ವ್ಯಕ್ತಿಯ ಪತ್ನಿ ಲಖ್ವಿಂದರ್ ಖೌರ್ ಆರೋಪಿಸಿದ್ದಾರೆ. ಅಲ್ಲದೆ ಅಂದು ತನಿಖೆ ನಡೆಸಿದ ಸಿಬಿಐ ಅಧಿಕಾರಿಗಳು 2 ಪ್ರಮುಖ ಪ್ರತ್ಯಕ್ಷ ಸಾಕ್ಷಿಗಳನ್ನು ಪರಿಗಣಿಸಿಲ್ಲ ಎಂದು ದೂರಿದ್ದಾರೆ. ಲಖ್ವಿಂದರ್ ಖೌರ್ ಅವರ ದೂರು ಸ್ವೀಕರಿಸಿರುವ ದೆಹಲಿ ನ್ಯಾಯಾಲಯ, ಪ್ರಕರಣ ಸಂಬಂಧ ಟೈಟ್ಲರ್ ವಿರುದ್ಧ ಸಿಬಿಐ ಮರು ತನಿಖೆಗೆ ಆದೇಶಿಸಿದೆ.
1984ರಲ್ಲಿ ಅಮೃತಸರದ ಸ್ವರ್ಣ ಮಂದಿರದಲ್ಲಿ ತನ್ನ ಅನುಚರರೊಂದಿಗೆ ಅವಿತಿದ್ದ ಸಿಖ್ ಉಗ್ರ ಜರ್ನಲ್ ಸಿಂಗ್ ಭಿಂದ್ರನ್ವಾಲೆನನ್ನು ಹಿಡಿಯಲು ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು, 'ಆಪರೇಷನ್ ಬ್ಲೂ ಸ್ಟಾರ್' ಎಂಬ ಹೆಸರಲ್ಲಿ ಮಿಲಿಟರಿ ಕಾರ್ಯಾಚರಣೆ ನಡೆಸಿದ್ದರು. ಘಟನೆಯಲ್ಲಿ ಭಿಂದ್ರನ್ವಾಲೆ ಸೇರಿದಂತೆ ನೂರಾರು ಸಿಖ್ಖರು ದೇವಾಲಯದಲ್ಲಿಯೇ ಸಾವನ್ನಪ್ಪಿದ್ದರು. ಇದರಿಂದ ಇಡೀ ದೇವಾಲಯ ರಕ್ತಸಿಕ್ತವಾಗಿತ್ತು.
ಇಂದಿರಾಗಾಂಧಿ ಅವರ ತೀರ್ಮಾನಕ್ಕೆ ಸಿಖ್ ಧರ್ಮೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದಾದ ನಂತರ ಇಂದಿರಾಗಾಂಧಿ ಅವರು ತಮ್ಮ ಸಿಖ್ ಧರ್ಮೀಯ ಅಂಗ ರಕ್ಷಕರಿಂದಲೇ ದಾರುಣವಾಗಿ ಕೊಲೆಯಾಗಿದ್ದು ಈಗ ಇತಿಹಾಸ. ಇಂದಿರಾಗಾಂಧಿ ಅವರು ನಡೆಸಿದ ಆಪರೇಷನ್ ಬ್ಲೂ ಸ್ಟಾರ್ ವಿರುದ್ಧದ ಸೇಡಿನ ಪ್ರತೀಕವಾಗಿ ಅವರನ್ನು ಕೊಲ್ಲಲಾಗಿತ್ತು.
ಇಂದಿರಾ ಹತ್ಯೆ ನಂತರ ಅಮೃತಸರದಲ್ಲಿ ಸಿಖ್ಖರ ನರಮೇಧವೇ ನಡೆದು ಹೋಯಿತು. ಇಂದಿರಾ ಹತ್ಯೆಯನ್ನು ಖಂಡಿಸಿ ನಡೆದ ಹಿಂಸಾಚಾರದಲ್ಲಿ ಸುಮಾರು 3 ಸಾವಿರ ಸಿಖ್ಖರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು. ಸಿಖ್ಖರ ನರಮೇಧ ಪ್ರಕರಣದಲ್ಲಿ ಅಂದು ಇಂದಿರಾಗಾಂಧಿ ಅವರ ಆಪ್ತರಾಗಿದ್ದ ಜಗದೀಶ್ ಟೈಟ್ಲರ್ ಅವರ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು. ಆದರೆ, ಪ್ರಕರಣದಲ್ಲಿ ಟೈಟ್ಲರ್ ಕ್ಲೀನ್ ಚಿಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು.