ಹಳೆ ಬಡಾವಣೆಯಲ್ಲಿ ಪ್ರೊ. ಬಿಕೆಸಿ ಗೆಲ್ತಾರಾ?
ಬಸವಣ್ಣನ ಗುಡಿ, ಗವಿಗಂಗಾಧರನಾಥ ದೇವಸ್ಥಾನ, ಸೋಮೇಶ್ವರನಗುಡಿ, ಆಂಜನೇಯನ ದೇವಸ್ಥಾನ, ರಾಮಕೃಷ್ಣಾಶ್ರಮ, ಉತ್ತರಾದಿಮಠ, ಶಂಕರಮಠ, ಬಸವಣ್ಣ ಮಠ, ಕುಮಾರಸ್ವಾಮಿ ದೇವಸ್ಥಾನಗಳ ಮಧ್ಯೆ ಬಸವನಗುಡಿ ಬಡಾವಣೆ ಸಾಂಸ್ಕೃತಿಕವಾಗಿ ಸಮೃದ್ಧವಾಗಿದೆ. ಕಡ್ಲೆಕಾಯಿ ಪರಿಷೆ ದೂರದ ಊರುಗಳಿಂದ ಜನರನ್ನು ಕೈಬೀಸಿ ಕರೆಯುತ್ತದೆ.
ಇಂತಿಪ್ಪ ಬಸವನಗುಡಿಯಲ್ಲಿ ಕನ್ನಡಿಗರು ಹೆಚ್ಚಾಗಿರುವುದು ರಾಜಧಾನಿಯ ಸೌಭಾಗ್ಯವೇ ಸರಿ. ಮೇಲ್ಮಧ್ಯಮ ವರ್ಗದ ಜನರಿಂದ ಈ ಬಡಾವಣೆಯಲ್ಲಿ ಸಾಹಿತಿಗಳು, ವಿದ್ವಾಂಸರು, ಸಂಗೀತಗಾರರು, ಬರಹಗಾರರಿಗೆ ಕೊರತೆಯೇನೂ ಇಲ್ಲ. ಆದರೆ ಇಷ್ಟೆಲ್ಲ ಡೆಕೋರೇಶನುಗಳು, ಪ್ರಜ್ಞಾವಂತರು ಇರುವ ಬಸವನಗುಡಿಯಲ್ಲಿ ಒಂದೇ ಒಂದಕ್ಕೆ ಕೊರತೆ ಇದೆ.
ಏನಪಾ ಅಂದರೆ ಇಲ್ಲಿನ ಜನ ಮುಂದುಬಂದು ಓಟೇ ಹಾಕಲ್ಲ ಅಂತಾರೆ! 2008ರ ಸಂಖ್ಯೆ ಹೀಗಿದೆ- ಮತದಾರರ ಸಂಖ್ಯೆ: 2,26,320. ಕಳೆದ ಬಾರಿ ವೋಟ್ ಮಾಡಿದವರು ಶೇ. 43 ರಷ್ಟು ಮಂದಿ. ಅದರಲ್ಲಿ ಬಿಜೆಪಿ ಪಕ್ಷದಿಂದ ವಿಜಯೀಯಾದ ರವಿ ಸುಬ್ರಮಣ್ಯ ಅವರ ಮತ ಗಳಿಕೆ ಪ್ರಮಾಣ ಶೇ. 52.
ಇಲ್ಲಿನ ವಾರ್ಡ್ ಗಳು: ಬಸನವ ಗುಡಿ, ಹನುಂತನಗರ, ಶ್ರೀನಗರ, ಗಿರಿನಗರ, ಕತ್ರಿಗುಪ್ಪೆ, ವಿದ್ಯಾಪೀಠ. ಗಮನಾರ್ಹವೆಂದರೆ ಇಲ್ಲಿ ಬ್ರಾಹ್ಮಣರು, ಒಕ್ಕಲಿಗರು ಮತ್ತು ಲಿಂಗಾಯತರು ಹೆಚ್ಚಾಗಿದ್ದಾರೆ. ಚುನಾವಣೆಯಲ್ಲಿ ಇವರು ಯಾರ ಪರ ವಾಲುತ್ತಾರೆ ಎಂಬುದನ್ನು ಆಧರಿಸಿ ಜಯ ಒಲಿಯುವುದು ಅವರಿಗೇ.
ಇಲ್ಲಿನ ಮತದಾರರು ಮತ ಹಾಕಲು ಮನೆಯಿಂದ ಹೊರಬಂದರೆ (ಅದೇ ಕಷ್ಟವಾಗಿರುವುದು) ಚುನಾವಣಾ ರಂಗೇರುತ್ತದೆ. ಇಲ್ಲಿ ಇದುವರೆಗೂ ಹೆಚ್ಚಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಸಮರ ನಡೆಯುವುದು. ಸ್ವಲ್ಪಮಟ್ಟಿಗೆ ಜೆಡಿಎಸ್ ಮತ ಪಾಲನ್ನು ಕಬಳಿಸುತ್ತದೆ.
2008ರಲ್ಲಿ ಮಾಜಿ ಮೇಯರ್ ಕೆ ಚಂದ್ರಶೇಖರ್ ಕಾಂಗ್ರೆಸ್ ಪರ ನಿಂತು ಸೋತಿದ್ದರು. ಅದರ ಹಿಂದಕ್ಕೆ ಅಂದರೆ 2004ರಲ್ಲಿ ಇವರೇ ಗೆದ್ದಿದ್ದರು. ಆದರೆ 2008ರಲ್ಲಿ ಕ್ಷೇತ್ರವು ರವಿ ಸುಬ್ರಮಣ್ಯ ಅವರ ಪಾಲಾಯಿತು.
ಈ ಬಾರಿ ಬನಶಂಕರಿ ಎರಡನೆಯ ಹಂತದ ನಿವಾಸಿ, ಖ್ಯಾತ ಕಲಾವಿದೆ ಲಕ್ಷ್ಮಿ ಚಂದ್ರಶೇಖರ್ ಅವರ ಪತಿ ಬಿಕೆ ಚಂದ್ರಶೇಖರ್ ಅವರು ಕಾಂಗ್ರೆಸ್ ಅಭ್ಯರ್ಥಿ. ಗಾಂಧಿ ಕುಟುಂಬಕ್ಕೆ ಅಚ್ಚುಕಟ್ಟಾದ ಭಾಷಣ ಬರೆದುಕೊಡುತ್ತಿದ್ದ, ಇಂಗ್ಲೀಷ್ ಮೇಷ್ಟ್ರೂ ಆದ, ಪ್ರೊ. ಬಿಕೆಸಿ ಎಂದೇ ಖ್ಯಾತರಾದ ಬಿಕೆ ಚಂದ್ರಶೇಖರ್ ಅವರು ಈ ಬಾರಿ ಇಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಲಿದ್ದಾರೆ.
ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಭಾಪತಿ ಪ್ರೊ. ಬಿಕೆಸಿ ಗೆಲ್ತಾರಾ? ಬಸವನಗುಡಿ ಮತದಾರನ ಮನದಲ್ಲಿ ಏನಿದೆಯೋ ಬಲ್ಲವರಾರು?