ಶೆಟ್ಟರ್ ವಿರುದ್ಧ ಸ್ಪರ್ಧಿಸಲು ಬೆದರುವುದಿಲ್ಲ : ಬಿದರಿ
ಮಾಧ್ಯಮ ವರದಿಗಳನ್ನು ಅಲ್ಲಗಳೆಯದಿದ್ದರೂ ಶೆಟ್ಟರ್ ವಿರುದ್ಧ ತಮ್ಮನ್ನು ಕಣಕ್ಕಿಳಿಸುವ ಬಗ್ಗೆ ಯಾರೂ ತಮ್ಮೊಂದಿಗೆ ಚರ್ಚಿಸಿಲ್ಲ. ಆದರೆ ಪಕ್ಷ ತೀರ್ಮಾನಿಸಿದರೆ, ಶೆಟ್ಟರ್ ವಿರುದ್ಧ ಸ್ಪರ್ಧಿಸಲು ಸಿದ್ಧ ಎಂದು ಶಂಕರ್ ಬಿದರಿ ಹೇಳಿದ್ದಾರೆ.
ತೇರದಾಳ ಕೈ ತಪ್ಪಿದ್ದು ಬೇಸರವಿದೆ ಎಂದ ಬಿದರಿ ಅವರು. ತಮ್ಮ ತವರೂರು ತೇರದಾಳದಿಂದ ನಟಿ ಉಮಾಶ್ರೀ ಅವರಿಗೆ ಟಿಕೆಟ್ ನೀಡಿರುವುದಕ್ಕೆ ಬಿದರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ಶಂಕರ್ ಬಿದರಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ನಟಿ ಉಮಾಶ್ರೀ ಅವರು, ಪಕ್ಷದಲ್ಲಿ ತಮಗೆ ಯಾರೂ ವಿರೋಧಿಗಳಿಲ್ಲ. ಶಂಕರ್ ಬಿದರಿ ಅವರು ಸಹ ನಮ್ಮ ಪಕ್ಷದವರೇ, ಅವರು ಸಹ ತಮ್ಮನ್ನು ಬೆಂಬಲಿಸುವ ವಿಶ್ವಾಸವಿದೆ ಎಂದಿದ್ದಾರೆ.
ಶೆಟ್ಟರ್ ಹಾಗೂ ಬಿದರಿ ಇಬ್ಬರೂ ಬಣಜಿಗ ಸಮುದಾಯಕ್ಕೆ ಸೇರಿದವರಾಗಿದ್ದು, ಜನಪ್ರಿಯತೆಯಲ್ಲಿ ಸಮವಾಗಿ ತೂಗುತ್ತಾರೆ. ಬಿದರಿ ಅವರಿಗೆ ಟಿಕೆಟ್ ಸಿಕ್ಕರೆ ಭರ್ಜರಿ ಹೋರಾಟಕ್ಕೆ ಕಣ ಸಿದ್ಧವಾಗಲಿದೆ.
ವೀರಪ್ಪನ್ ಕಾರ್ಯಚಾರಣೆ ವೇಳೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದ ಆರೋಪ ಹೊತ್ತಿದ್ದ ಬಿದರಿ ಅವರು ನಿರ್ದೋಷಿ ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಆದೇಶ ಹೊರ ಬಿದ್ದ ದಿನ ಬಿದರಿಯಂಥ ಸೂಪರ್ ಕಾಪ್ ಕೂಡಾ ಕೆಮೆರಾ ಮುಂದೆ ಅಳು ತಡೆದುಕೊಳ್ಳಲಾಗಿರಲಿಲ್ಲ. ಜನರ ಅನುಕಂಪ, ನಂಬಿಕೆ ಇವರ ಮೇಲೆ ಸಹಜವಾಗಿ ಇದೆ.
ಆದರೆ, ಬಿದರಿ ಅವರು ಇನ್ನೂ ಸ್ಪರ್ಧೆ ಬಗ್ಗೆ ಸ್ಪಷ್ಟವಾಗಿ ಹೇಳಿಲ್ಲ. ತೇರದಾಳ ಟಿಕೆಟ್ ಕೈ ತಪ್ಪಿರುವುದರಿಂದ ಈ ಬಾರಿ ಅಸೆಂಬ್ಲಿ ಸಹವಾಸವೇ ಬೇಡ ಎಂದು ಹೇಳಿ ಮುಂದಿನ ಲೋಕಸಭೆಗೆ ಬಾಗಲಕೋಟೆ ಟಿಕೆಟ್ ಕೇಳಿದರೂ ಅಚ್ಚರಿ ಏನಿಲ್ಲ. ಆದರೆ, ಈ ಬಾರಿ ಸ್ಪರ್ಧಿಸಿ ಚುನಾವಣೆ ಅನುಭವ ಪಡೆದುಕೊಳ್ಳಿ. ಸೋತರೂ ಚಿಂತೆಯಿಲ್ಲ. ಲೋಕಸಭೆ ಟಿಕೆಟ್ ನೀಡುತ್ತೇವೆ ಎಂದು ಕೆಪಿಸಿಸಿ ಭರವಸೆ ನೀಡಿದೆಯಂತೆ.
ಬಿದರಿಗೆ ಟಿಕೆಟ್ ಸಿಕ್ಕಿದ್ದೇ ಆದಲ್ಲಿ ಶೆಟ್ಟರ್ ಅವರ ವಿರುದ್ಧ ಪ್ರಬಲ ಸ್ಪರ್ಧಿ ಇಳಿಸಿದಂತಾಗುತ್ತದೆ. ಹಾಗೂ ವೀರಶೈವ ಸಮುದಾಯದ ನಾಯಕ ಅದರಲ್ಲೂ ಉತ್ತರ ಕರ್ನಾಟಕ ಮೂಲದವರಿಗೆ ನ್ಯಾಯ ದೊರಕಿಸಿಕೊಟ್ಟೆವು ಎಂದು ಕೈ ಪಡೆ ಎಲ್ಲೆಡೆ ಘೋಷಿಸಿಕೊಳ್ಳಬಹುದು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ