ಇಂದಿರಾ ವಿರುದ್ಧ ಬಂಡಾಯಕ್ಕೆ ಫ್ರಾನ್ಸ್ ನೆರವು?
ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿ ಸಿಬ್ಬಂದಿ ಸ್ವದೇಶಕ್ಕೆ ಕಳುಹಿಸಿದ್ದ ರಹಸ್ಯ ಕಡತಗಳನ್ನು ವಿಕಿಲೀಕ್ಸ್ ಬಿಡುಗಡೆ ಮಾಡಿದೆ. ಆದರೆ, ಅಮೆರಿಕದ ಕಡತದಲ್ಲಿರುವ ಈ ಮಾಹಿತಿ ಕಪೋಲ ಕಲ್ಪಿತ ಎಂದು ಜಾರ್ಜ್ ಪತ್ನಿ ಲೈಲಾ ನಿರಾಕರಿಸಿದ್ದಾರೆ.
1975ರಲ್ಲಿ ಪ್ರಧಾನಿ ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದಾಗ, ಕಾರ್ಮಿಕ ನಾಯಕರಾಗಿದ್ದ ಜಾರ್ಜ್ ಫರ್ನಾಂಡಿಸ್ ಭೂಗತರಾಗಿ ಹಲವೆಡೆ ದುಷ್ಕೃತ್ಯಗಳನ್ನು ನಡೆಸುತ್ತಿದ್ದರು. ಸರ್ಕಾರಿ ಕಚೇರಿಗಳನ್ನು ಡೈನಾಮೈಟ್ ಇಟ್ಟು ಸ್ಫೋಟಿಸುವ ವಿಧ್ವಂಸಕ ಯೋಜನೆಗಳನ್ನು ಹಾಕಿಕೊಂಡಿದ್ದರು.
ಇಂಥ ಸಂದರ್ಭದಲ್ಲೇ ಅವರು ರಹಸ್ಯವಾಗಿ ಭಾರತದಲ್ಲಿನ ಫ್ರಾನ್ಸ್ ರಾಯಭಾರ ಕಚೇರಿಯ ಕಿರಿಯ ಸಿಬ್ಬಂದಿ ಮತ್ತು ಕಾರ್ಮಿಕ ಸಚಿವರನ್ನು ಭೇಟಿ ಮಾಡಿ ಧನ ಸಹಾಯ ಬಯಸಿದ್ದರು ಎನ್ನಲಾಗಿದೆ.
ಈ ವೇಳೆ ತುರ್ತು ಪರಿಸ್ಥಿತಿ ವಿರೋಧಿಸಿ, ಬಾಂಬೆ ಮತ್ತು ಪೂನಾ ನಡುವಣ ಸೇತುವೆಯನ್ನು ನಾವು ಸ್ಫೋಟಿಸಿದ್ದೇವೆ. ಬಾಂಬೆ ಅಂಚೆ ಕಚೇರಿಗೆ ಬೆಂಕಿ ಹಚ್ಚಿದ್ದೇವೆ ಹಾಗೂ ನನ್ನ ಜತೆಗಿರುವ ನಕ್ಸಲರು ಮದ್ರಾಸ್ನಲ್ಲಿರುವ ಎಲ್ಐಸಿ ಕಟ್ಟಡಕ್ಕೆ ಕಿಚ್ಚಿಕ್ಕಲು ಯೋಜನೆ ರೂಪಿಸಿದ್ದಾರೆ ಎಂದಿದ್ದರು.
ಆದರೆ ಫ್ರಾನ್ಸ್ ರಾಯಭಾರ ಕಚೇರಿ ಧನ ಸಹಾಯಕ್ಕೆ ನಿರಾಕರಿಸಿದಾಗ, ಹಾಗಿದ್ದರೆ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎನಿಂದ ಹಣ ಪಡೆಯಲೂ ನಾನು ಸಿದ್ಧ. ಈ ಬಗ್ಗೆ ನೆರವು ನೀಡಿ ಎಂದೂ ಕೇಳಿಕೊಂಡಿದ್ದರು. ಆದರೆ ಫ್ರಾನ್ಸ್ ಸರ್ಕಾರ ಈ ಸಹಾಯವನ್ನೂ ನಿರಾಕರಿಸಿತ್ತು ಎಂಬ ಮಾಹಿತಿ ಕಡತದಲ್ಲಿದೆ.
ಇದರ ಜೊತೆಗೆ, ಭಾರತದಲ್ಲಿ ಭ್ರಷ್ಟಾಚಾರಕ್ಕೆ ಹೊಸ ಭಾಷ್ಯ ಬರೆದ ಸ್ವೀಡನ್ ಜೆಟ್ ವಿಮಾನ ಖರೀದಿಯಲ್ಲಿನ ಅಕ್ರಮಗಳ ಬಗ್ಗೆ ಹೊಸಬೆಳಕು ಚೆಲ್ಲಿರುವ ವಿಕಿಲೀಕ್ಸ್ 'ಸ್ವೀಡನ್ ಜೆಟ್ ಖರೀದಿ ಕರ್ಮಕಾಂಡದಲ್ಲಿ Mister Clean ರಾಜೀವ್ ಗಾಂಧಿ ಸ್ವೀಡನ್ ಕಂಪನಿಗೆ ದಲ್ಲಾಳಿಯಾಗಿದ್ದರು' ಎಂಬ ಆತಂಕಕಾರಿ ವಿಷಯವನ್ನು ಹೊರಹಾಕಿತ್ತು.
ಭಾರತೀಯ ವಾಯುಪಡೆಗೆ ಶಸ್ತ್ರ ಖರೀದಿ ವ್ಯವಹಾರದಲ್ಲಿ ಕಾಂಗ್ರೆಸ್ಸಿನ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ಹೆಸರು ಕಾಣಿಸಿಕೊಂಡಿರುವುದು ವಿಶೇಷವಾಗಿದೆ. ಇತ್ತೀಚೆಗೆ ಇಟಲಿ ಹೆಲಿಕಾಪ್ಟರ್ ಹಗರಣದ ಸೇರಿದಂತೆ ಈಗಾಗಲೇ ಹತ್ತಾರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿರುವ ಪುರಾತನ ಕಾಂಗ್ರೆಸ್ ಪಕ್ಷಕ್ಕೆ 'ರಾಜೀವ್ ಗಾಂಧಿ ಸ್ವೀಡನ್ ಕಂಪನಿಯ ದಲ್ಲಾಳಿ' ಎಂಬುದು ಮಾರಕವಾಗಿ ಪರಿಣಮಿಸಿತ್ತು.