ಕಾಮಿ ಸ್ವಾಮಿ ಶಿವಸಾಯಿಬಾಬಾ ಬಂಧನ
ಚಿಕ್ಕಬಳ್ಳಾಪುರ ಮೂಲದ ಶಿವ ಸಾಯಿಬಾಬಾರನ್ನು ಆಂಧ್ರದ ಪೆನುಗೊಂಡ ಚೆಕ್ ಪೋಸ್ಟ್ ಬಳಿ ಬಂಧಿಸಲಾಗಿದೆ. ಆಂಧ್ರದಲ್ಲಿ ಅನಂತಪುರ ಜಿಲ್ಲೆಯ ಪೆನಗೊಂಡದಲ್ಲಿ ಮಂಗಳವಾರ ಎಲ್ಲೆಡೆ ನಾಕಾ ಬಂದಿ ಹಾಕಲಾಗಿತ್ತು. ಎಂದಿನಂತೆ ಬಂದ್ ಆಚರಣೆ ಎಲ್ಲೆಡೆ ಜಾರಿಯಲ್ಲಿತ್ತು. ಈ ಸಮಯದಲ್ಲಿ ಚೆಕ್ ಪೋಸ್ಟ್ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಶಿವಸಾಯಿಬಾಬಾನನ್ನು ವಶಕ್ಕೆ ತೆಗೆದುಕೊಂಡ ಆಂಧ್ರ ಪೊಲೀಸರಿಗೆ ಈತನ ಹಿನ್ನೆಲೆ ಬಗ್ಗೆ ಸಂಶಯ ಬಂದಿದೆ.
ತಕ್ಷಣವೇ ಚಿಕ್ಕಬಳ್ಳಾಪುರ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸೆರೆ ಸಿಕ್ಕವನ್ನು ಕಾಮಿ ಸ್ವಾಮಿ ಎಂಬುದು ದೃಢಪಟ್ಟಿದೆ. ನಂತರ ಆತನನ್ನು ಸಂಜೆ ಚಿಕ್ಕಬಳ್ಳಾಪುರ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ವಿದ್ಯುತ್ ಬಿಲ್ ದರ, ನೀರಿನ ಬಿಲ್ ದರ ಏರಿಕೆ ವಿರೋಧಿಸಿ ಮಂಗಳವಾರ ಆಂಧ್ರಪ್ರದೇಶದಲ್ಲಿ ಬಂದ್ ನಡೆಸಲಾಗಿದೆ. ಹೀಗಾಗಿ ಹಲವೆಡೆ ಕಟ್ಟೆಚ್ಚರ ವಹಿಸಿರುವ ಪೊಲೀಸರು ಗಡಿಭಾಗದ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ನಡೆಸುವ ವೇಳೆ ಸಾಯಿಬಾಬಾ ಸಿಕ್ಕಿ ಬಿದ್ದಿದ್ದಾನೆ.
ಚಿಕ್ಕಬಳ್ಳಾಪುರದ ಆಶ್ರಮದಲ್ಲಿ ಅಕ್ರಮ ಚಟುವಟಿಕೆ, ಭಕ್ತಾದಿಗಳಿಗೆ ಮಂಕುಬೂದಿ ಎರಚಿದ ಆರೋಪ ಕೇಳಿ ಬಂದ ನಂತರ ಸ್ವಾಮೀಜಿ ಎರಡು ವಾರಗಳಿಂದ ನಾಪತ್ತೆಯಾಗಿದ್ದರು.