ಬಿಜೆಪಿ ಪಟ್ಟಿ- 2: ಸೋಮಣ್ಣ ಭರ್ಜರಿ ಡೀಲ್
ಬೆಂಗಳೂರು, ಏ.9: ವಿ (ವಸತಿವೀರ) ಸೋಮಣ್ಣ ಬಿಜೆಪಿಯಲ್ಲೇ ಮುಂದುವರಿಯುವುದಾಗಿ ಹೇಳಿ, ಭರ್ಜರಿ ಡೀಲ್ ಕುದುರಿಸಿದಂತೆ ಭಾಸವಾಗುತ್ತಿದೆ. ಬಿಜೆಪಿ ಅಭ್ಯರ್ಥಿಗಳ 2ನೆಯ ಪಟ್ಟಿ ಇನ್ನೇನು ರಾತ್ರಿ ವೇಳೆಗೆ ಬಿಡುಗಡೆಯಾಗಲಿದೆ. ಅದರಲ್ಲಿ, ಬಿಜೆಪಿಯಲ್ಲೇ ಉಳಿಯಲು ಸೋಮಣ್ಣ ಏನೆಲ್ಲ ಕಸರತ್ತು ನಡೆಸಿದ್ದಾರೆ ಎಂಬುದು ಸ್ಪಷ್ಟಗೊಳ್ಳಲಿದೆ.
ಅದಕ್ಕೂ ಮುನ್ನ, ಸೋಮಣ್ಣ ಅವರು ಬೆಂಗಳೂರಿನಲ್ಲಿ ಪಕ್ಷದ ಉಸ್ತುವಾರಿಯನ್ನು ಅಶೋಕ್ ಅವರಿಂದ ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡಂತಿದೆ. ಮುಖ್ಯವಾಗಿ ಬಿಬಿಎಂಪಿ ಮೇಯರ್ ಗಿರಿಗೆ ಸಂಬಂಧಿಸಿದಂತೆ ಅಶೋಕ್ ಒಂದಷ್ಟು ಕರಾಮತ್ತು ತೋರಿದ್ದರು.
ಮಹಿಳಾ ಮೀಸಲಾತಿಗೇ ಕೊಕ್ ಕೊಟ್ಟು ತಮ್ಮ ಶಿಷ್ಯ, ಬಸವನಗುಡಿಯ ಕಟ್ಟೆ ಸತ್ಯ ಅವರನ್ನು ಮೇಯರ್ ಆಗಿ ಪ್ರತಿಷ್ಠಾಪಿಸಲು ಅಶೋಕ್ ಹವಣಿಸಿದ್ದರು. ತನ್ಮೂಲಕ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪ್ರಾಬಲ್ಯ ಮೆರೆಯುವುದು ಅಶೋಕ್ ಅವರ ಗುರಿಯಾಗಿತ್ತು.
ಆದರೆ ದಿನ ಬೆಳಗಾಗುವುದರೊಳಗಾಗಿ ಎಚ್ಚೆತ್ತ ಸರಕಾರ ಮತ್ತೆ ಮಹಿಳೆಗೇ ಮಣೆ ಹಾಕಲು ನಿರ್ಧರಿಸಿತು. ಹಾಗಾಗಿ ಈ ಬಾರಿ ನಿಯಮದಂತೆ ಮಹಿಳೆಯನ್ನೇ ಮೇಯರ್ ಆಗಿ ಮಾಡುವ ತೀರ್ಮಾನ ಹೊರಬಿತ್ತು.
ಇದೇ ಅವಕಾಶಕ್ಕಾಗಿ ಕಾಯುತ್ತಿದ್ದ ಸಚಿವ ಸೋಮಣ್ಣ, ತಮ್ಮ ಕ್ಯಾಂಡಿಡೇಟ್, ಮೂಡಲಪಾಳ್ಯದ ಶಾಂತಕುಮಾರಿ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಅದಕ್ಕೆ ತಮ್ಮ ಸಾಮ್ರಾಜ್ಯದ ಗೋವಿಂದರಾಜನಗರ ಮತ್ತು ವಿಜಯನಗರದಲ್ಲಿನ ಕಾರ್ಪೊರೇಟರುಗಳಿಂದಲೂ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮೇಲೆ ಒತ್ತಡ ಹಾಕಿಸುವಲ್ಲಿ ಯಶಸ್ವಿಯಾಗಿದ್ದು, ಶಾಂತಕುಮಾರಿ ಅವರ ಹೆಸರನ್ನು ಮೇಯರ್ ಗಿರಿಗೆ ಫೈನಲ್ ಮಾಡಿಕೊಂಡಿದ್ದಾರೆ.
ಇದರಿಂದ ಸೋಮಣ್ಣ ಒಂದೇ ಏಟಿಗೆ ನಾಲ್ಕಾರು ಹಕ್ಕಿಗಳನ್ನು ಹೊಡೆದುರುಳಿಸಿದ್ದಾರೆ. ಒಂದು, ತಮ್ಮದೇ ಕ್ಯಾಂಡಿಡೇಟ್ ಅನ್ನು ಮೇಯರ್ ಆಗಿ ಮಾಡುವುದು. ತನ್ಮೂಲಕ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿನ ಕಾರ್ಪೊರೇಟರುಗಳನ್ನು ತಮ್ಮ ತಾಳಕ್ಕೆ ತಕ್ಕಂತೆ ಆಟವಾಡಿಸುವುದು ಅವರ ಗುರಿಯಾಗಿದೆ.
ಈ ಮಧ್ಯೆ, ಗುಪ್ತ ಅಜೆಂಡಾ ಆಗಿ ಗೋವಿಂದರಾಜನಗರ ಮತ್ತು ವಿಜಯನಗರದಲ್ಲಿ ತಮ್ಮ ಪ್ರಬಲ ಎದುರಾಳಿಯಾದ ಕೃಷ್ಣಪ್ಪ ಕುಟುಂಬಕ್ಕೆ ಸರಿಯಾದ ಪೆಟ್ಟು ನೀಡಿ, ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಗೆಲುವಿನ ಹಾದಿಯನ್ನು ಸುಗಮಗೊಳಿಸುವ ಆಶಯವೂ ಇದೆ.
ಹಿನ್ನೆಲೆಯನ್ನು ಹೀಗೆ ತಮಗೆ ಅನುಕೂಲವಾಗುವಂತೆ ಸಿದ್ಧಪಡಿಸಿಕೊಂಡಿರುವ ಸೋಮಣ್ಣ, ಗೋವಿಂದರಾಜ ನಗರದ ಬದಲು ವಿಜಯನಗರ ಕ್ಷೇತ್ರದಿಂದ ಸ್ಪರ್ಧಿಸಲು ತೀರ್ಮಾಣಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ, ಇಂದು ಸಂಜೆ ಬಿಡುಗಡೆಯಾಗುವ ಪಟ್ಟಿಯಲ್ಲಿ ಸೋಮಣ್ಣ ಹೆಸರು ಗೋವಿಂದರಾಜ ನಗರದ ಬದಲು ವಿಜಯನಗರ ಕ್ಷೇತ್ರದಲ್ಲಿ ಕಾಣಿಸಿಕೊಂಡಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇದೇ ವೇಳೆ, ತಮ್ಮ ಕಟ್ಟಾ ಬೆಂಬಲಿಗ, ಕಾರ್ಪೊರೇಟರ್ ರವೀಂದ್ರ ಅವರಿಗೆ ಗೋವಿಂದರಾಜ ನಗರದ ಟಿಕೆಟ್ ದಕ್ಕಿಸಿಕೊಳ್ಳುವಲ್ಲಿಯೂ ಅವರು ಯಶಸ್ವಿಯಾಗಿದ್ದಾರೆ ಎಂಬುದರೊಂದಿಗೆ 'ಸೋಮಣ್ಣ ಬಿಜೆಪಿಯಲ್ಲೇ ಉಳಿಯುವುದರ ಹಿಂದಿನ ರಹಸ್ಯ ಏನು?' ಎಂಬುದು ಬಯಲಾಗಿದೆ.