ರಾಘವೇಂದ್ರ, ಉದಾಸಿ ಪಕ್ಷದಿಂದ ಅಮಾನತು
ಸೋಮವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಈ ಕುರಿತು ಅಂತಿಮ ಆದೇಶ ಹೊರಡಿಸಿದ್ದು, ಪಕ್ಷ ವಿರೋಧಿ ಚಟಿವಟಿಕೆಯಲ್ಲಿ ತೊಡಗಿಸಿಕೊಂಡಿದ್ದರಿಂದ ಇಬ್ಬರು ಸಂಸದರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಶಿವಮೊಗ್ಗ ಸಂಸದ ಯಡಿಯೂರಪ್ಪ ಪುತ್ರ ರಾಘವೇಂದ್ರ ಮತ್ತು ಹಾವೇರಿ ಸಂಸದ ಮಾಜಿ ಸಚಿವ ಸಿ.ಎಂ.ಉದಾಸಿ ಪುತ್ರ ಶಿವಕುಮಾರ್ ಉದಾಸಿ ಬಿಜೆಪಿಯಿಂದ ಅಮಾನತುಗೊಂಡ ಸಂಸದರು. ಈ ಇಬ್ಬರು ಕರ್ನಾಟಕ ಜನತಾ ಪಕ್ಷದ ಪ್ರಚಾರ ಕಾರ್ಯದಲ್ಲಿ ಬಹಿರಂಗವಾಗಿ ತೊಡಗಿಸಿಕೊಂಡಿದ್ದರು. ಆದ್ದರಿಂದ ಪಕ್ಷ ವಿರೋಧಿ ಚಟುವಟಿಕೆಯ ನಡೆಸುತ್ತಿದ್ದಾರೆ ಎಂದು ಅಮಾನತುಗೊಳಿಸಲಾಗಿದೆ.
ತಡವಾಗಿ ಎಚ್ಚೆತ್ತ ಬಿಜೆಪಿ : ಕೆಜೆಪಿಯೊಂದಿಗೆ ಇಬ್ಬರು ಸಂಸದರು ಬಹಿರಂಗವಾಗಿ ಗುರುತಿಸಿಕೊಂಡಿದ್ದರೂ ಬಿಜೆಪಿ ನಾಯಕರು ಸುದೀರ್ಘ ಮೌನಕ್ಕೆ ಶರಣಾಗಿದ್ದರು. ಸಂಸದರು ತಾವಾಗೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಕಾದು ನೋಡುವ ತಂತ್ರ ಅನುಸರಿಸಿದ್ದರು. ಆದರೆ, ಯಡಿಯೂರಪ್ಪ ಅವರ ತಂತ್ರದ ಫಲವಾಗಿ ಅವರು ರಾಜೀನಾಮೆ ನೀಡದಂತೆ ತಡೆದಿದ್ದರು.
ರಾಜ್ಯ ಬಿಜೆಪಿ ನಾಯಕರು ಹಲವು ಬಾರಿ ಈ ಇಬ್ಬರು ಸಂಸದರು ಅಮಾನತಿಗೆ ಶಿಫಾರಸ್ಸು ಮಾಡಿದರೂ ಬಿಜೆಪಿ ವರಿಷ್ಠರು ಕ್ರಮ ಕೈಗೊಂಡಿರಲಿಲ್ಲ. ರಾಜ್ಯ ಬಿಜೆಪಿಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಪ್ರಹ್ಲಾದ್ ಜೋಶಿ ಸಹ ಮೊದಲು ಈ ಇಬ್ಬರ ಅಮಾನತಿಗೆ ಶಿಫಾರಸ್ಸು ಸಲ್ಲಿಸಿದ್ದರು.
ತಡವಾಗಿ ಧೃಡ ನಿರ್ಧಾರ ತೆಗೆದುಕೊಂಡಿರುವ ವರಿಷ್ಠರು ಇಬ್ಬರನ್ನು ಪಕ್ಷದಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಬಿಜೆಪಿ ಚುನಾವಣಾ ರಣ ಕಹಳೆ ಊದಿದಿ ದಿನವೇ ಈ ಆದೇಶ ಹೊರಬಿದ್ದಿರುವುದು ತೀವ್ರ ಕುತೂಹಲ ಮೂಡಿಸಿದೆ.
ಶಾಂತ ಕಥೆ ಏನು : ಕೆಜೆಪಿಯೊಂದಿಗೆ ಗುರುತಿಸಿಕೊಂಡಿದ್ದ ಇಬ್ಬರು ಸಂಸದರನ್ನು ಅಮಾನತುಗೊಳಿಸಿ ಬಿಜೆಪಿ ಆದೇಶ ಹೊರಡಿಸಿದೆ. ಆದರೆ, ಬಿಎಸ್ಆರ್ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿರುವ ಬಳ್ಳಾರಿ ಸಂಸದೆ ಜೆ.ಶಾಂತ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತದೆ ಎಂದು ಕಾದು ನೋಡಬೇಕು.
ಬಿಎಸ್ಆರ್ ಕಾಂಗ್ರೆಸ್ ಸಂಸ್ಥಾಪಕ ಬಿ.ಶ್ರೀರಾಮುಲು ಅವರೊಂದಿಗೆ ಜೆ.ಶಾಂತ ಗುರುತಿಸಿಕೊಂಡಿದ್ದಾರೆ. ಅಲ್ಲದೆ ಪಕ್ಷದ ಸಭೆಗಳಲ್ಲಿ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ವಿರುದ್ದ ಏಕೆ ಕ್ರಮ ಕೈಗೊಂಡಿಲ್ಲ ಎಂಬ ಪ್ರಶ್ನೆ ಕಾಡುತ್ತಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ