ಮುಖ್ಯಮಂತ್ರಿ ಬೆಂಬಲ ಕಳೆದುಕೊಂಡ ಬಿಜೆಪಿ
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನಂತೆ ನೂರಾರು ಕಾರ್ಯಕರ್ತರು ನಿರ್ಲಕ್ಷಕ್ಕೆ ಒಳಗಾಗಿದ್ದಾರೆ. ನಾನು ಅವರ ಧ್ವನಿಯಾಗಿ ಮಾತನಾಡುತ್ತಿದ್ದೇನೆ. ಅಧಿಕಾರದ ಅಮಲನ್ನು ನೆತ್ತಿಗೇರಿಸಿಕೊಂಡು ದವಲತ್ತು, ಧಿಮಾಕಿನಿಂದ ಬೀಗುತ್ತಿರುವ ನಾಯಕರು ಈಗಲಾದರೂ ಎಚ್ಚೆತ್ತುಕೊಂಡು ನನ್ನಂತವರತ್ತ ಗಮನ ಹರಿಸಲಿ ಎಂದು ಖಾರವಾಗಿ ನುಡಿದರು.
ನನ್ನ ಆರೋಗ್ಯ ಸರಿ ಇಲ್ಲದಿರುವುದೂ ಪಕ್ಷ ರಾಜಕಾರಣದಿಂದ ದೂರ ಇರಲು ಕಾರಣ ಎಂದರು. ನನಗೆ ಅನ್ನ ಕೊಟ್ಟಿರುವುದು ಚಿತ್ರರಂಗ ರಾಜಕಾರಣದಿಂದಾಗಿ ಚಿತ್ರರಂಗದಿಂದ ದೂರವಾಗಿದ್ದೆ. ಇನ್ನು ಮುಂದೆ ನಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತೇನೆ ಎಂದು ಹೇಳಿದರು.
ನಾಳೆ ಬಿಜೆಪಿ ಏರ್ಪಡಿಸಿರುವ ವಿಜಯ ಸಂಕಲ್ಪ ಯಾತ್ರೆಗೆ ನನಗೆ ಆಹ್ವಾನ ಇಲ್ಲ. ಆದ್ದರಿಂದ ನಾನು ಅದರಲ್ಲಿ ಭಾಗವಿಸುವುದಿಲ್ಲ ಎಂದು ಮುಖ್ಯಮಂತ್ರಿ ಚಂದ್ರು ತಿಳಿಸಿದರು.
1991ರಿಂದ ನಾನು ಬಿಜೆಪಿಯಲ್ಲಿ ಕಾರ್ಯಕರ್ತನಾಗಿದ್ದೇನೆ. ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದೇನೆ. ಆದರೆ, ಏಳೆಂಟು ವರ್ಷಗಳಿಂದ ಉದ್ದೇಶಪೂರ್ವಕವಾಗಿ ನನ್ನನ್ನು ನಿರ್ಲಕ್ಷಿಸಲಾಗುತ್ತಿದೆ. ಪಕ್ಷದ ಯಾವುದೇ ವೇದಿಕೆಗಳಲ್ಲಿ ನನಗೆ ಸ್ಥಾನ ನೀಡಿಲ್ಲ.
ಈ ಬಗ್ಗೆ ಬಿಜೆಪಿಯ ನಾಯಕರುಗಳಾದ ಈಶ್ವರಪ್ಪ, ಆರ್.ಅಶೋಕ್, ಪ್ರಹ್ಲಾದ್ ಜೋಷಿ, ಸದಾನಂದಗೌಡ, ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಂಸದ ಅನಂತಕುಮಾರ್ ಹಾಗೂ ರಾಷ್ಟ್ರೀಯ ನಾಯಕರ ಗಮನಕ್ಕೆ ತಂದಿದ್ದೇನೆ. ಹಲವು ಬಾರಿ ಪತ್ರವನ್ನೂ ಬರೆದಿದ್ದೇನೆ.
ನನಗೆ ಯಾರಿಂದಲೂ ಉತ್ತರ ಬಂದಿಲ್ಲ. ಕನಿಷ್ಠ ಕರೆದು ಚರ್ಚಿಸುವ ಸೌಜನ್ಯವನ್ನು ತೋರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನನಗೆ ಯಾವುದೇ ಪ್ರಭಾವಿ ನಾಯಕರ ಬೆಂಬಲವಿಲ್ಲ. ಹಣ, ಜಾತಿ ಬೆಂಬಲವಿಲ್ಲ. ಇಂದಿನ ರಾಜಕೀಯ ವ್ಯವಸ್ಥೆಗೆ ನನ್ನಂತಹವರು ಅಪ್ರಸ್ತುತ ಎಂದು ನಾಯಕರಿಗೆ ಅನಿಸಿರಬಹುದು. ಹಾಗಾಗಿ ನನ್ನನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಹೇಳಿದರು.
ವಿಧಾನ ಪರಿಷತ್ತಿನ ಅವಧಿ ಮುಗಿದ ನಂತರ ನನ್ನನ್ನು ಪುನರಾಯ್ಕೆ ಮಾಡುವಂತೆ ಮೂರು ಬಾರಿ ಮನವಿ ಮಾಡಿದ್ದೆ. ಅದಕ್ಕೆ ಮಾನ್ಯತೆ ಸಿಗಲಿಲ್ಲ. ನನಗೆ ಬಿಜೆಪಿ ಬಗ್ಗೆ ಯಾವುದೇ ದ್ವೇಷ, ಸಿಟ್ಟು, ಬೇಸರ ಇಲ್ಲ ಎಂದು ಮಾರ್ಮಿಕವಾಗಿ ಹೇಳಿದರು.
ರಾಜ್ಯ ನಾಯಕರುಗಳ ನಡವಳಿಕೆ ಬಗ್ಗೆ ಬೇಸರವಿದೆ. ಹಾಗೆಂದು ಬಿಜೆಪಿಯನ್ನು ಬಿಡುವುದಿಲ್ಲ. ಪಕ್ಷದಲ್ಲೇ ಇರುತ್ತೇನೆ. ಸದ್ಯಕ್ಕೆ 6 ತಿಂಗಳ ಕಾಲ ಚುನಾವಣೆ ಹಾಗೂ ಪಕ್ಷ ರಾಜಕೀಯದಿಂದ ದೂರು ಇರುತ್ತೇನೆ ಎಂದು ಚಂದ್ರು ಹೇಳಿದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ