ಲಾಸ್ಟ್ ಛಾನ್ಸ್! ಬಿಎಸ್ವೈ ವಾಪಸಾದರೆ ಸ್ವಾಗತ
ಅದೇನು ವ್ಯಂಗ್ಯವೋ ಅಥವಾ ವಾಸ್ತವವೋ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನಕ್ಕೆ ಬಡ್ತಿ ಪಡೆದಿರುವ ಮಾಜಿ ಸಿಎಂ ಡಿವಿ ಸದಾನಂದ ಗೌಡರು ತಮಗಿಂತ ಹಿಂದಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಲಾಸ್ಟ್ ಛಾನ್ಸ್ ನೀಡಿದ್ದಾರೆ.
ಏನಪಾ ಅಂದರೆ ಯಡಿಯೂರಪ್ಪ ಅವರದು ಸ್ವಯಂಕೃತ ಅಪರಾಧ. ಅವರು ಹೊಸ ಪಕ್ಷ ಕಟ್ಟಿದ್ದು ಸರಿಯಲ್ಲ. ಹಾಗಾಗಿ ಬಿಎಸ್ವೈ ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡು ಬಿಜೆಪಿಗೆ ಬಂದರೆ ಅವರನ್ನು ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.
ಆದರೆ ಬಿಜೆಪಿಯಿಂದ ಬಹುದೂರ ಸಾಗಿರುವ ಕೆಜೆಪಿ ನಾಯಕ ಯಡಿಯೂರಪ್ಪ ಅವರು ಸದಾನಂದರ ಈ ಅಫರ್ ಗೆ ಏನು ಮತ್ತು ಯಾವಾಗ ಉತ್ತರ ನೀಡಲಿದ್ದಾರೆ ಎಂಬುದು ಇಡೀ ನಾಡಿಗೆ ಗೊತ್ತಿದೆ.
ಮುಂದುವರಿದು ಮಾತನಾಡಿದ ಸದಾನಂದ ಗೌಡರು ಯಡಿಯೂರಪ್ಪ ಅವರಿಗೆ ಸಲಹೆ ಕೊಡುವ ಯೋಗ್ಯತೆ ನನಗಿಲ್ಲ. ಆದರೆ ಅವರು ಅನಗತ್ಯವಾಗಿ ಬಿಜೆಪಿ ಮೇಲೆ ಗೂಬೆ ಕೂರಿಸುವುದನ್ನು ಬಿಡಬೇಕು. ಸದ್ಯದ ವಿಧಾನಸಭಾ ಚುನಾವಣೆ ಕೆಜೆಪಿಗೆ ಕೊನೆಯ ಚುನಾವಣೆಯಾಗಲಿದೆ. ಕೆಜೆಪಿ ಒಂದು ಸ್ಥಾನವೂ ಬರುವುದಿಲ್ಲ' ಎಂಬ ಭವಿಷ್ಯವನ್ನೂ ನುಡಿದರು.
ಚುನಾವಣೆಯಲ್ಲಿ ಕಾಂಗ್ರೆಸ್ ಮಾತ್ರ ಬಿಜೆಪಿಗೆ ಎದುರಾಳಿ. ಕಾಂಗ್ರೆಸ್ನಲ್ಲಿ ಚುನಾವಣಾ ಪ್ರಚಾರಕರ ಕೊರತೆಯಿದೆ. ಹೀಗಾಗಿ ಸಿನಿಮಾ ತಾರೆಯರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಆದರೆ ಈ ಹಿಂದೆ ಬಿಜೆಪಿಯೂ ಸಿನಿ ತಾರೆಯರಿಗೆ ಗಾಳಿ ಹಾಕಿತ್ತು ಎಂಬುದ್ದನ್ನು ಸದಾನಂದರು ಉದ್ದೇಶಪೂರ್ವಕವಾಗಿ ಮರೆತರೇನೋ!
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೀಳಗಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮುರಗೇಶ ನಿರಾಣಿ ಈ ಬಾರಿ ಜಮಖಂಡಿ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಕೇಳುತ್ತಿರುವುದು ಸರಿಯಾದ ಕ್ರಮವಲ್ಲ. ಈ ಕ್ಷೇತ್ರದಲ್ಲಿ ಹಾಲಿ ಶಾಸಕ ಶ್ರೀಕಾಂತ ಕುಲಕರ್ಣಿ ಉತ್ತಮ ಕೆಲಸ ಮಾಡಿದ್ದಾರೆ. ಜನರು ಅವರಿಗೆ ಬೆಂಬಲ ನೀಡುತ್ತಿದ್ದಾರೆ. ಹೀಗಾಗಿ ಅವರನ್ನು ಬದಲಿಸಿ ಸಚಿವ ನಿರಾಣಿ ಅವರಿಗೆ ಟಿಕೆಟ್ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇದಕ್ಕೆ ಉತ್ತರವೆಂಬಂತೆ ನಿರಾಣಿ ಜಮಖಂಡಿ ಆಸೆಯನ್ನು ಬಿಟ್ಟಿದ್ದು, ಬೀಳಗಿ ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಅದೂ ಬಿಜೆಪಿ ಟಿಕೆಟ್ ಮೇಲೆಯೇ ಎಂದು ಯಡಿಯೂರಪ್ಪ ಅವರಿಗೆ ಕೇಳಿಸುವಷ್ಟು ಜೋರಾಗಿ ಹೇಳಿದ್ದಾರೆ!