ಹೆಬ್ಬಾಳ: ಚುನಾವಣೆಯಲ್ಲಿ ಸ್ಪರ್ಧಿಸೋದಿಲ್ಲ ಎಂದ ಕಟ್ಟಾ
'ಶೆಟ್ಟರ್ ಕೈಯಲ್ಲಿರುವ ಪಟ್ಟಿಯಲ್ಲಿ ನನ್ನ ಹೆಸರೂ ಇದೆ. ಪಕ್ಷದಲ್ಲಿ ನನ್ನ ಬಗ್ಗೆ ಅಪಾರ ಗೌರವವೂ ಇದೆ. ನನಗೂ ವೆಂಕಯ್ಯನಾಯ್ಡು, ರಾಜನಾಥ್ ಸಿಂಗ್ ಸೇರಿದಂತೆ ಪಕ್ಷದ ಅಷ್ಟೂ ನಾಯಕರ ಬಗ್ಗೆ ಗೌರವ-ವಿಶ್ವಾಸವಿದೆ. ಆದರೂ ನಾನು ಈ ಬಾರಿ ಚುನಾವಣೆಯಲ್ಲಿ ನಿಲ್ಲುತ್ತಿಲ್ಲ' ಎಂದು ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ಅವರು 'ಒನ್ಇಂಡಿಯಾ'ಕ್ಕೆ ತಿಳಿಸಿದ್ದಾರೆ.
ಕಟ್ಟಾ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ ಎಂಬ ವಿಷಯ ಬಹಿರಂಗವಾಗುತ್ತಿದ್ದಂತೆ ಇಂದು ಸದಾಶಿವನಗರದಲ್ಲಿ ಕಟ್ಟಾ ನಿವಾಸದ ಮುಂದೆ ಅವರ ನೂರಾರು ಅಭಿಮಾನಿಗಳು ಧರಣಿ ನಡೆಸಿದ್ದಾರೆ. ಕಟ್ಟಾ ಸುಬ್ರಮಣ್ಯ ಅವರು ಚುನಾವಣೆಯಲ್ಲಿ ಸ್ಪರ್ಧಿಸಲೇ ಬೇಕು ಎಂಬುದು ಈ ಅಭಿಮಾನಿಗಳ ಒಕ್ಕೊರಲ ಕೂಗಾಗಿದೆ.
ಅಭಿಮಾನಿಗಳ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಕಟ್ಟಾ 'ನನ್ನ ಮೇಲೆ ಇಲ್ಲ ಸಲ್ಲದ ಆರೋಪಗಳು ಕೇಳಿಬಂದಿವೆ. ಇದರಿಂದ ಮನಸಿಗೆ ಬೇಸರವಾಗಿದೆ. ಜತೆಗೆ ವೈಯಕ್ತಿಕವಾಗಿಯೂ ನಾನು ದುಃಖದಲ್ಲಿದ್ದೇನೆ. ಸಂಸಾರ ತಾಪತ್ರಯಗಳು ನನ್ನನ್ನು ಬಾಧಿಸುತ್ತಿವೆ. ಈ ಹಿನ್ನೆಲೆಯಲ್ಲಿ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದೇನೆ' ಎಂದು ಸ್ಪಷ್ಟಪಡಿಸಿದ್ದಾರೆ.
'ನಾನಷ್ಟೇ ಅಲ್ಲ. ನನ್ನ ಪುತ್ರ, ಕಾರ್ಪೊರೇಟರ್ ಕಟ್ಟಾ ಜಗದೀಶ್ ಸಹ ಚುನಾವಣೆಗೆ ನಿಲ್ಲುವುದಿಲ್ಲ ಎಂದು ನಿರ್ಧರಿಸಿದ್ದಾರೆ. ಈ ಚುನಾವಣೆಯಷ್ಟೇ ಅಲ್ಲ. ಮುಂದಿನ ಚುನಾವಣೆಗೂ ಆತ ವಿಧಾನಸಭೆ ಚುನಾವಣೆಗೆ ನಿಲ್ಲುವುದಿಲ್ಲ' ಎಂದು ಕಟ್ಟಾ ಸುಬ್ರಮಣ್ಯ ಅವರು ಇದೇ ಸಂದರ್ಭದಲ್ಲಿ ಒತ್ತಿಹೇಳಿದರು.