ಬಂಧನ ಭೀತಿಯಲ್ಲಿ ಬಿಜೆಪಿ ಶಾಸಕ ವಿಶ್ವನಾಥ್
ಬೆಂಗಳೂರು ಸಮೀಪದ ಸರ್ಕಾರಿ ಗೋಮಾಳ ಜಾಗವನ್ನು ಅಕ್ರಮವಾಗಿ ಮಾರಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ವಿಶ್ವನಾಥ್ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನಿಗೆ ಅರ್ಜಿ ವಜಾಗೊಂಡಿದೆ.
ಅರ್ಜಿಯ ವಿಚಾರಣೆ ನಡೆಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯ ಶಾಸಕ ವಿಶ್ವನಾಥ್ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಈ ಮೂಲಕ ಶಾಸಕ ವಿಶ್ವನಾಥ್ ಅವರನ್ನು ವಿಚಾರಣೆ ಸಂಬಂಧ ಪೊಲೀಸರು ಬಂಧಿಸಿ ತನಿಖೆಗೆ ಒಳಪಡಿಸಲು ಇದ್ದ ತಡೆ ದೂರವಾಗಿದೆ.
ಬೆಂಗಳೂರಿನ ಯಲಹಂಕ ಬಳಿಯ ಮಾದಪ್ಪನ ಹಳ್ಳಿಯ ಸರ್ವೇ ನಂಬರ್ 62 ರಲ್ಲಿನ 32.04 ಎಕರೆ ಸರ್ಕಾರಿ ಭೂಮಿಯನ್ನು ಡಿಸಿ ಅಯ್ಯಪ್ಪ ಅವರು ಸ್ಥಳೀಯ ಶಾಸಕ ವಿಶ್ವನಾಥ್ ಅವರ ಸಂಬಂಧಿ ನರಸಿಂಹಯ್ಯ ಅವರಿಗೆ ಪರಭಾರೆ ಮಾಡಿಕೊಡಲು ಯತ್ನಿಸಿದ್ದರು.
ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಎಂ.ಕೆ ಅಯ್ಯಪ್ಪ, ಕಂದಾಯ ನೋಂದಣಾಧಿಕಾರಿ ರವಿಕುಮಾರ್, ವಿಶೇಷ ತಹಶೀಲ್ದಾರ್ ಗೋಪಾಲಸ್ವಾಮಿ ಮತ್ತು ಕಂದಾಯ ಇಲಾಖೆಯ ಇನ್ಸ್ಪೆಕ್ಟರ್ ಬಾಲಕೃಷ್ಣ ಅವರನ್ನು ಬಂಧಿಸಿದ್ದರು.
ಸರ್ಕಾರಿ ಗೋಮಾಳ ಜಾಗವನ್ನು ಅಕ್ರಮವಾಗಿ ಮಾರಲು ಯತ್ನಿಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಬೆಂಗಳೂರು ಗ್ರಾಮಾಂತರ ಡಿಸಿ ಆಗಿದ್ದ ಎಂ.ಕೆ.ಅಯ್ಯಪ್ಪ, ಜಮೀನಿನ ಭೂ ದಾಖಲೆಯನ್ನೇ ತಿರುಚಲು ಮುಂದಾಗಿದ್ದರು. ಈ ಬಗ್ಗೆ ಸ್ಥಳೀಯ ಶಾಸಕ ವಿಶ್ವನಾಥ್ ಅವರೊಂದಿಗೂ ಸಹ ಅವರು ದೂರವಾಣಿಯಲ್ಲಿ ಚರ್ಚೆ ನಡೆಸಿದ್ದರು ಎಂದು ಹೇಳಲಾಗುತ್ತಿದೆ.
ಶಾಸಕ ವಿಶ್ವನಾಥ್ ಅಕ್ರಮ ಆಸ್ತಿ ಸಂಪಾದನೆ ಬಗ್ಗೆ ಇದ್ದ ಮೊಬೈಲ್ ಫೋನ್ ಸಾಕ್ಷ್ಯ ಈ ಕೇಸಿನಲ್ಲಿ ಪ್ರಮುಖವಾಗಿದೆ. ಎಚ್ಎಎಲ್ ನಲ್ಲಿ ಉದ್ಯೋಗಿಯಾಗಿದ್ದುಕೊಂಡು ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು. ಸುಳ್ಳು ಮಾಹಿತಿ ನೀಡಿ 'ಜಿ' ಕೆಟಗರಿ ಸೈಟ್ ಪಡೆದಿದ್ದಾರೆ.
ವಿಶ್ವನಾಥ್ ಸುಮಾರು 40 ಕೋಟಿ ರು. ಆಸ್ತಿವಂತರಾಗಿದ್ದಾರೆ. ಇನ್ನು, ಪತ್ನಿಯ ಹೆಸರಿನಲ್ಲಿ ಪೆಟ್ರೋಲ್ ಬಂಕ್ ಮತ್ತಿತರ ಆಸ್ತಿ ಮಾಡಿದ್ದಾರೆ. ಬೇನಾಮಿಯಾಗಿ ವಿದೇಶಿ ಕಾರು ಹೊಂದಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ತಾವು ಸಲ್ಲಿಸಿರುವ 5 ಸಾವಿರ ಪುಟಗಳ ಆರೋಪಪಟ್ಟಿಯಲ್ಲಿ ದಾಖಲಿಸಿದ್ದಾರೆ.